ರಾಮನಗರ ಸಮಗ್ರ ಅಭಿವೃದ್ಧಿಗೆ ಪಣ!
Team Udayavani, Jun 2, 2020, 7:33 AM IST
ರಾಮನಗರ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ತಾವು ಪಣ ತೊಟ್ಟಿದ್ದು, ಸರ್ಕಾರವು ಬದ್ಧ ವಾಗಿದೆ. ಜಿಲ್ಲೆಯನ್ನು ರಾಜ್ಯದಲ್ಲೇ ಮಾದರಿ ಯಾಗಿ ರೂಪಿಸುವ ಗುರಿ ಹೊಂದಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು. ಪ್ರಧಾನಿ ಮೋದಿ 2ನೇ ಅವಧಿಯಲ್ಲಿ 1 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತು ವಾರಿ ಸಚಿವರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬರಿ ಮಾತನಾಡುವುದಿಲ್ಲ. ಕೆಲಸ ಮಾಡಿ ಉತ್ತರಿಸುತ್ತೇನೆ. ಇಷ್ಟು ದಿನ ಸ್ವಾರ್ಥ ರಾಜಕರಣ ನಡೆದಿದೆ. ಆದರೆ ಆ ಬಗ್ಗೆ ತಾವು ಪ್ರತಿಕ್ರಿಯಿಸುವುದಿಲ್ಲ ಎಂದರು. ಡಿಕೆಶಿ, ಕೆಪಿಸಿಸಿ ಅಧ್ಯಕರಾಗುತ್ತಿರುವ ಹಿನ್ನೆ ಲೆಯಲ್ಲಿ ಪ್ರತಿ ವಾರ ರಾಮನಕ್ಕೆ ಬರ್ತೀದ್ದೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಹಾಗೇನಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಕಾಳಜಿಯಿರುವುದರಿಂದಲೇ ಬರುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ವಾರಕ್ಕೊಮ್ಮೆ ಲಭ್ಯ: ಜಿಲ್ಲೆಯ ಜನರ ಅಹವಾಲಿಗೆ ಸ್ಪಂದಿಸಲು ತಾವು ವಾರ ಕ್ಕೊಮ್ಮೆ ಲಭ್ಯವಿರುವುದಾಗಿ, ವಾರದ ಭೇಟಿ ರಾಮನಗರಕ್ಕೆ ಸೀಮಿತವಾಗಿ ಇರೋಲ್ಲ. ಜೂನ್ನಲ್ಲಿ ರಾಜೀವ್ ಗಾಂಧಿ ವಿವಿ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸುವು ದಾಗಿ ನೀಡಿದ್ದ ಹೇಳಿಕೆಯನ್ನು ಸುದ್ದಿಗಾರರು ನೆನಪಿಸಿದಾಗ ಸಚಿವರು ಕಾದು ನೋಡಿ ಎಂದರು.
ಆರ್ಥಿಕ ಪುನಶ್ಚೇತನಕ್ಕೆ ಪ್ರಧಾನಿ ಸಂಕಲ್ಪ: ರಾಷ್ಟ್ರದಲ್ಲಿ ಜಿಡಿಪಿ ಬಗ್ಗೆ ಕೇಂದ್ರ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಸಂಸದ ಡಿ.ಕೆ.ಸುರೇಶ್ ಆರೋಪಕ್ಕೆ ಪ್ರತಿಕ್ರಿಯಿಸಿ, ಸುಳ್ಳು ಹೇಳುವ ಅಗತ್ಯವೇನಿದೆ. ಇಡೀ ವಿಶ್ವದ ಆರ್ಥಿಕ ಪರಿಸ್ಥಿತಿ ಕೋವಿಡ್-19 ಸೋಂಕಿ ನಿಂದಾಗಿ ಸಂಕಷ್ಟದಲ್ಲಿದೆ. ಭಾರತ ಅದಕ್ಕೆ ಹೊರತೇನಲ್ಲ. ಅದರ ನಡುವೆ ಪ್ರಧಾನಿ ಮೋದಿ, ದೇಶದ ಆರ್ಥಿಕ ಸ್ಥಿತಿ ಸುಧಾರಣೆಗೆ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಿಸಿದ್ದಾರೆ ಎಂದರು.
ಮೋದಿ ತಮ್ಮ 2ನೇ ಅವಧಿಯಲ್ಲಿ ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ 370ನೇ ವಿಧಿ ರದ್ದು, ರಾಮ ಜನ್ಮ ಭೂಮಿ ವ್ಯಾಜ್ಯ ಅಂತ್ಯ, ಪೌರತ್ವ ಕಾಯ್ದೆ ತಿದ್ದುಪಡಿ..ಹೀಗೆ ಅನೇಕ ಸುಧಾರಣಾ ಕ್ರಮ ಜಾರಿಗೊಳಿಸುತ್ತಿ ದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಪ್ರತಿ ಯೊಂದು ಜನದನ್ ಖಾತೆಗೂ ಮಾಸಿಕ ತಲಾ 500 ರೂ ಸಹಾಯಧನ ನೀಡಲಾಗಿದೆ ಎಂದರು.
ರೈತ ಸಮ್ಮಾನ್-ರೈತರ ಬ್ಯಾಂಕ್ ಖಾತೆಗೆ 87 ಕೋಟಿ: ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥನಾರಾ ಯಣ ಗೌಡ ಮಾತನಾಡಿ, ಕೇಂದ್ರದ ರೈತ ಸಮ್ಮಾನ್ ಯೋಜನೆಯಲ್ಲಿ ರಾಮನಗರ ಜಿಲ್ಲೆಗೆ 5 ಕಂತುಗಳಲ್ಲಿ 87.88 ಕೋಟಿ ರೂ. ರೈತರ ಬ್ಯಾಂಕ್ ಖಾತೆಗಳಿಗೆ ಸೇರಿದೆ. ರಾಜ್ಯ ಸರ್ಕಾರಕ್ಕೆ ಬಿಡುಗಡೆಯಾದ ಅನುದಾನ, ಸಹಾಯಧನ 2019-20ನೇ ಸಾಲಿನ ಒಂದರಲ್ಲೇ 17,249 ಕೋಟಿ ರೂ. ಎಂದು ಮಾಹಿತಿ ನೀಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ರುದ್ರೇಶ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುರಳಿಧರ್, ಬಿಡದಿ ಸ್ಮಾರ್ಟ್ ಸಿಟಿ ಅಧ್ಯಕ್ಷ ವರದರಾಜ ಗೌಡ, ಪ್ರಮುಖ ಅ.ದೇವೇ ಗೌಡ, ಎಸ್.ಆರ್.ನಾಗರಾಜ್, ಆನಂದಸ್ವಾಮಿ, ರಂಗಧಾಮಯ್ಯ, ಪ್ರವೀಣ್ ಗೌಡ, ರುದ್ರದೇವರು, ಜಿ.ವಿ.ಪದ್ಮನಾಭ, ಬಿಜೆಪಿ ಮಂಜು ಇದ್ದರು.
ಸ್ಥಳೀಯ ಸಮಸ್ಯೆಗಳಿಗೆ ಡಿಸಿಎಂ ಸೈಲೆಂಟ್!: ಜಿಲ್ಲಾ ಕೇಂದ್ರ ರಾಮನಗರದಲ್ಲಿ ಕುಡಿಯವ ನೀರು ಸೇರಿದಂತೆ ಸ್ಥಳೀಯ ಸಮಸ್ಯೆಗಳು, ರಾಜೀವ್ ಗಾಂಧಿ ವಿವಿ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಕ್ಕೆ ವಿಳಂಬ ಇತ್ಯಾದಿ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ “ನೋಡ್ತಿನಿ” ಎಂದಷ್ಟೇ ಹೇಳಿ ಡಿಸಿಎಂ ಜಾರಿಕೊಂಡರು.