ವಿದ್ಯಾರ್ಥಿನಿಯರು ಶಿಕ್ಷಣಕ್ಕೆ ಆದ್ಯತೆ ನೀಡಿ: ಗೀತಾ ಸಲಹೆ
Team Udayavani, Jan 3, 2020, 12:46 PM IST
ಕನಕಪುರ: ಶಿಕ್ಷಣದಿಂದ ಮಾತ್ರ ಹೆಣ್ಣು ಮಕ್ಕಳು ಪ್ರಗತಿ ಸಾಧಿಸಲು ಸಾಧ್ಯ. ಹಾಗಾಗಿ ವಿದ್ಯಾರ್ಥಿನಿಯರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಚಿಕ್ಕಮುದುವಾಡಿ ಶಾಲಾ ಮುಖ್ಯ ಶಿಕ್ಷಕಿ ಗೀತಾ ಅಭಿಪ್ರಾಯ ಪಟ್ಟರು. ತಾಲೂಕಿನ ಕಸಬಾ ಹೋಬಳಿಯ
ಚಿಕ್ಕಮುದುವಾಡಿಯ ಜಿ.ಹೆಚ್.ಪಿ.ಎಸ್. ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಹೆಣ್ಣು ಮಕ್ಕಳ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಮುಂದಿದ್ದಾರೆ ಹೆಣ್ಣು ಮನಸ್ಸು ಮಾಡಿದರೆ, ಯಾವ ಸಾಧನೆ ಮಾಡಲು ಹಿಂಜರಿಯುವುದಿಲ್ಲ ಎನ್ನುವುದಕ್ಕೆ ಹಲವಾರು ನಿದರ್ಶನಗಳಿವೆ. ಹಾಗಾಗಿ ಸಮಾಜದಲ್ಲಿ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ ದಬ್ಟಾಳಿಕೆಗಳನ್ನು ಎದುರಿಸಬೇಕಾದರೆ, ಮಹಿಳೆಯರು ವಿದ್ಯಾವಂತರಾಗಿರಬೇಕು. ನಮ್ಮ ರಕ್ಷಣೆಗೆ ಸಮಾಜದಲ್ಲಿರುವ ಕಾನೂನಿನ ಬಗ್ಗೆ ಅರಿವಿರಬೇಕು. ಆಗ ಮಾತ್ರ ಈ ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀ ಪುರುಷ ಸಮಾನರು ಎಂದು ತೋರಿಸಬಹುದು ಸಲಹೆ ನೀಡಿದರು.
ಎನ್.ಜಿ.ಓ (ಡಾನ್ ಬಾಸ್ಕೋ ಶಿಕ್ಷಣ ಫೌಂಡೇಶನ್) ಸಂಸ್ಥೆ ಪದಾಧಿಕಾರಿ ರಂಜಿನಿ ಮಾತನಾಡಿ, ಸರ್ಕಾರ ಶಿಕ್ಷಣದ ಹಕ್ಕು, ಜೀವಿಸುವ ಹಕ್ಕು, ಮಾತನಾಡುವ ಹಕ್ಕು ಸೇರಿದಂತೆ ಆನೇಕ ಕಾನೂನು ಕಾಯ್ದೆಗಳನ್ನು ಜಾರಿಗೊಳಿಸಿದೆ. ಆದರೆ ಯಾರಿಗೂ ಅದರ ಅರಿವಿಲ್ಲ. ಮುಂದಿ ಭವ್ಯ ಭಾರತದ ನಿಮಾತೃಗಳಾದ ನಿಮಗೆ ನಿಮ್ಮ ಹಕ್ಕುಗಳ ಅರಿವು ಮೂಡಿಸುವುದು ತುಂಬ ಅಗತ್ಯಹಾಗಾಗಿಯೆ ಈ ಹೆಣ್ಣು ಮಕ್ಕಳ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. 1 ರಿಂದ 7ನೇ ತರಗತಿ ಮಕ್ಕಳಿಗೆ ಕ್ರೀಡಾ ಕೂಟವನ್ನು ಆಯೋಜಿಸಲಾಗಿತ್ತು. ವಿಜೇತ ಮಕ್ಕಳಿಗೆ ಗ್ರಾಪಂ ವತಿಯಿಂದ ಧನ ಸಹಾಯ ಮತ್ತು ಬಹುಮಾನ ನೀಡಲಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಶಂಕರ್, ಶಿಕ್ಷಣ ಫೌಂಡೇಶನ್ ರಂಜಿನಿ, ಮುತ್ತುರಾಜ ಕುಮಾರಿ ಶೃತಿ, ಪಿಡಿಒ ಪುಟ್ಟ ರಾಮಯ್ಯ ಶಿಕ್ಷಕಿಯರಾದ ಪ್ರೇಮಾ, ಮಲ್ಲಿಕಾಂಬ, ಉಮಾದೇವಿ, ವನಿತಾ, ದಿವ್ಯ ಮತ್ತು ಎಸ್ಡಿಎಂಸಿ ಅಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು.