ಮೈಸೂರು ದಸರಾದಲ್ಲಿ ರಾರಾಜಿಸಲಿದೆ ಫಿಟ್ ಇಂಡಿಯಾ
ಶಿವಮೊಗ್ಗ ಜಿಲ್ಲೆಯಿಂದ ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಯ ಟ್ಯಾಬ್ಲೋ
Team Udayavani, Sep 28, 2019, 12:41 PM IST
ಶರತ್ ಭದ್ರಾವತಿ
ಶಿವಮೊಗ್ಗ: ಈ ಬಾರಿ ಮೈಸೂರು ದಸರಾ ಉತ್ಸವದಲ್ಲಿ ಶಿವಮೊಗ್ಗ ಜಿಲ್ಲೆಯ ಟ್ಯಾಬ್ಲೋ ಅಂತಿಮಗೊಂಡಿದ್ದು, ನಾಡ ದೇವಿ ಮೆರವಣಿಗೆಯಂದು ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಫಿಟ್ ಇಂಡಿಯಾ’ ರಾರಾಜಿಸಲಿದೆ. ಜಂಬೂ ಸವಾರಿ ಟ್ಯಾಬ್ಲೋಕ್ಕಾಗಿ ಜಿಲ್ಲಾಡಳಿತದಿಂದ ಒಟ್ಟು ಮೂರು ವಿಷಯಗಳನ್ನು ಅಂತಿಮಗೊಳಿಸಲಾಗಿತ್ತು. ಉಜ್ವಲ ಯೋಜನೆ, ಶಿಕಾರಿಪುರ ತಾಲೂಕಿನ ಬಳ್ಳಿಗಾವಿಯ ಕೇದಾರೇಶ್ವರ ದೇವಸ್ಥಾನ ಹಾಗೂ ಫಿಟ್ ಇಂಡಿಯಾ ಯೋಜನೆ ಬಗ್ಗೆ ವರದಿ ಸಲ್ಲಿಸಲಾಗಿತ್ತು. ಉಜ್ವಲ ಯೋಜನೆ ವಿಷಯವನ್ನು ಆರಂಭಿಕ ಹಂತದಲ್ಲೇ ರಿಜೆಕ್ಟ್ ಮಾಡಲಾಗಿತ್ತು. ಅಂತಿಮವಾಗಿ ಆ.29ರಂದು
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಶ್ವ ಕ್ರೀಡಾ ದಿನದ ಅಂಗವಾಗಿ ಚಾಲನೆ ನೀಡಿದ್ದ ಫಿಟ್ ಇಂಡಿಯಾ’ ಆಯ್ಕೆಯಾಗಿದೆ.
ಹೀಗರಲಿದೆ ಟ್ಯಾಬ್ಲೋ: ಫಿಟ್ ಇಂಡಿಯಾ ಟ್ಯಾಬ್ಲೋದಲ್ಲಿ ಕ್ರೀಡಾ ವಲಯದಲ್ಲಿ ಸಾಧನೆ ಮಾಡಿದ ಕೆಲ ಆಯ್ದ ಗಣ್ಯರ ಭಾವಚಿತ್ರ ಬಳಸಿಕೊಳ್ಳಲಾಗುತ್ತಿದೆ. ಈ ಯೋಜನೆ ಬ್ರ್ಯಾಂಡ್
ಅಂಬಾಸಿಡರ್ ಆಗಿರುವ ಶಿಲ್ಪಾ ಅಗರ್ವಾಲ್, ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು, ಅಂತಾರಾಷ್ಟ್ರೀಯ ಅಂಗವಿಕಲ ಸಸ್ಯಾಹಾರಿ ದೇಹದಾರ್ಡ್ಯ ಪಟು ಅನುಲ್ ಕುರ್ಚಿಕರ್ ಭಾವಚಿತ್ರಗಳು ಮುಖ್ಯವಾಗಿ ರಾರಾಜಿಸಲಿವೆ.
ಇದರ ಹೊರತಾಗಿ ಇನ್ನೂ ಅಸಾಧಾರಣ ಕ್ರೀಡಾಪಟುಗಳ ಭಾವಚಿತ್ರಗಳು ಬರಲಿವೆ. ಅಂಧರ ಕ್ರಿಕೆಟ್ನಲ್ಲಿ ಸಾಧನೆ ಮಾಡಿದ ಶೇಖರ್ ನಾಯ್ಕ ಅವರ ಮಾದರಿ ಬಳಸುವ ಬಗ್ಗೆ ಕೆಲವರು ಸಲಹೆ ನೀಡಿದ್ದಾರೆ. ಎರಡು ಭಾಗದಲ್ಲಿ ಸಾಕಷ್ಟು ಭಾವಚಿತ್ರಗಳು ಬರಲಿವೆ. ಇದರ ಹೊರತಾಗಿ ಶಿವಮೊಗ್ಗದ ಅಸ್ಮಿತೆ ಬಿಂಬಿಸುವ ಕೊಡಚಾದ್ರಿ ಬೆಟ್ಟದ ಟ್ರೆಕ್ಕಿಂಗ್ ಮಾಡುತ್ತಿರುವ ಚಿತ್ರವನ್ನೂ ಹಿನ್ನೆಲೆಯಲ್ಲಿ ಬಳಸಲಾಗುವುದು. ಯೋಗ, ಧ್ಯಾನ, ಜಿಮ್ಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಸದೃಢ ಭಾರತ ನಿರ್ಮಾಣ ಸಾಧ್ಯವೆಂಬ ಕಲ್ಪನೆಯನ್ನು ಸ್ತಬ್ಧಚಿತ್ರದದಲ್ಲಿ ಮೂಡಿಸಲಾಗುವುದು ಎನ್ನುತ್ತಾರೆ ಟ್ಯಾಬ್ಲೋ ಕಲಾವಿದ ಶಿವಮೊಗ್ಗ ಮೂಲದ ಜಿನೇಂದ್ರ ಎಂ.ಎಂ.
ಏನಿದು ಫಿಟ್ ಇಂಡಿಯಾ: ಸಾರ್ವಜನಿಕರಲ್ಲಿ ಕ್ರೀಡಾ ಮನೋಭಾವ ಉತ್ತೇಜಿಸುವ ಸಲುವಾಗಿ ಆ.29ರಂದು ಫಿಟ್ ಇಂಡಿಯಾ ಆಂದೋಲನಕ್ಕೆ ನರೇಂದ್ರ ಮೋದಿ ಚಾಲನೆ ನೀಡಿದರು. ಇದಕ್ಕಾಗಿ ವೆಬ್ಸೈಟ್ ಕೂಡ ಲಾಂಚ್ ಮಾಡಲಾಗಿದ್ದು, ಇದರಲ್ಲಿ ಮಕ್ಕಳು, ವಯಸ್ಕರು, ವೃದ್ಧರಿಗೆ ಅನುಕೂಲವಾಗುವ ಆಟಗಳು, ಆಹಾರ, ಇತರೆ ಆರೋಗ್ಯ ಸಲಹೆಗಳು ಇವೆ. ಜತೆಗೆ ಏನಾದರೂ ಸಾಧನೆ ಮಾಡಿದವರು ಈ ವೆಬ್ಸೈಟ್ನಲ್ಲಿ ತಮ್ಮ ಸಾಧನೆ ಬಿಂಬಿಸಿ ಇತರರಿಗೂ ಮಾದರಿಯಾಗಬಹುದು. “ಸದೃಢ ದೇಹದಲ್ಲಿ ಸದೃಢ ಮನಸ್ಸು’ ಎಂಬ ಸ್ವಾಮಿ ವಿವೇಕಾನಂದರ ವಾಣಿಯನ್ನು ಅನುಷ್ಠಾನಕ್ಕೆ ತರಲು ಆಂದೋಲನಕ್ಕೆ ಚಾಲನೆ ನೀಡಲಾಗಿದೆ. ಶರೀರವು
ಸದೃಢವಾಗಿದ್ದರೆ ಏನಾದರೂ ಸಾಧನೆ ಮಾಡಬಹುದು. ಶರೀರವು ಸದೃಢವಾಗಬೇಕಾದರೆ ಯೋಗ, ವ್ಯಾಯಾಮ, ಕ್ರೀಡೆ, ಪೌಷ್ಟಿಕ ಆಹಾರ ಮುಖ್ಯ ಎಂಬುದು ಯೋಜನೆ ಉದ್ದೇಶ. ಈ ಬಗ್ಗೆ ಜನರಲ್ಲಿ ಮತ್ತಷ್ಟು ಅರಿವು ಮೂಡಿಸಲು ಈ ಟ್ಯಾಬ್ಲೋ ಸಿದ್ಧವಾಗುತ್ತಿದೆ.