ಚತುಷ್ಪಥ ರಸ್ತೆಗೆ ಹಣ ನೀಡಿ
Team Udayavani, Feb 4, 2021, 9:14 PM IST
ಶಿವಮೊಗ್ಗ: ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ದೆಹಲಿಯಲ್ಲಿ ಬುಧವಾರ ಭೇಟಿ ಮಾಡಿದ ಸಂಸದ ಬಿ.ವೈ.ರಾಘವೇಂದ್ರ ವಿವಿಧ ರಸ್ತೆ ಕಾಮಗಾರಿಗಳ ಕುರಿತು ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ತುಮಕೂರಿನಿಂದ ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 206ರ ನಾಲ್ಕನೇ ಪ್ಯಾಕೇಜ್ ಕಾಮಗಾರಿಯಾದ ಬೆಟ್ಟದಹಳ್ಳಿಯಿಂದ ಶಿವಮೊಗ್ಗ ವರೆಗಿನ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಯ ಭೂಸ್ವಾಧೀನಕ್ಕೆ ಸಅಗತ್ಯವಿರುವ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು. ಆ ಮೂಲಕ ಕಾಮಗಾರಿಗೆ ಸಂಬಂ ಧಿಸಿದ ಪರಿಷ್ಕೃತ ಅಂದಾಜಿಗೆ ಮಂಜೂರಾತಿ ದೊರಕಿಸಿಕೊಟ್ಟು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ತಕ್ಷಣ ಕಾಮಗಾರಿ ಆರಂಭಿಸಲು ನಿರ್ದೇಶನ ನೀಡುವಂತೆ ಕೋರಿದರು.
ಇದನ್ನೂ ಓದಿ : ಶೇ.21 ಮಂದಿಗೆ ಸೋಂಕು ಬಂದು ಹೋಗಿರುವ ಸಾಧ್ಯತೆ : ಐಸಿಎಂಆರ್ ಸೀರೋ ಸರ್ವೆಯಲ್ಲಿ ಉಲ್ಲೇಖ
ಶಿವಮೊಗ್ಗ ನಗರಕ್ಕೆ ಅಗತ್ಯವಿರುವ ಹೊರ ವರ್ತುಲ ರಸ್ತೆಯ 15 ಕಿ.ಮೀ. ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಹಾಗೂ ನಾಲ್ಕು ಕಿ.ಮೀ. ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಶಿವಮೊಗ್ಗ ವಿಭಾಗದಿಂದ ಬೈಪಾಸ್ ರಸ್ತೆಯನ್ನಾಗಿ ಆರಂಭಿಸಲು ಕ್ರಮ ವಹಿಸಲಾಗಿದೆ. ಬಾಕಿ ಉಳಿದ ಹೊರ ವರ್ತುಲ ರಸ್ತೆಯ 15 ಕಿ.ಮೀ. ಉದ್ದದ ಭಾಗವನ್ನು ನಿರ್ಮಾಣ ಮಾಡಲು ಭೂಸ್ವಾಧೀನ ವೆಚ್ಚದ ಶೇ. 50ರಷ್ಟು ರಾಜ್ಯ ಸರ್ಕಾರ ನೀಡಿರುವುದರ ಬಗ್ಗೆ ತಿಳಿಸಿದರು. ಅಲ್ಲದೇ, ಬಾಕಿ ಉಳಿದ ಭೂಸ್ವಾಧೀನದ ಅನುದಾನವನ್ನು ಕೇಂದ್ರ ಭೂಸಾರಿಗೆ ಮಂತ್ರಾಲಯದಿಂದ ದೊರಕಿಸಿಕೊಟ್ಟು ಕಾಮಗಾರಿಗೆ ಅಗತ್ಯ ಜೋಡಣೆ ನಕ್ಷೆಗೆ ತಕ್ಷಣ ಅನುಮೋದನೆ ದೊರಕಿಸಿಕೊಡಲು ಕೋರಿದರು.