ಮರಳು ಸಾಗಾಟಕ್ಕೆ ಪೊಲೀಸರ ಸಾಥ್: ಸದಸ್ಯರ ಆಕ್ಷೇಪ
Team Udayavani, Mar 23, 2018, 11:53 AM IST
ಸಾಗರ: ನಗರದ ತಾಪಂ ಸಾಮರ್ಥ್ಯಸೌಧದಲ್ಲಿ ಗುರುವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಡಿವೈಎಸ್ಪಿ ಮಂಜುನಾಥ ಕವರಿ ಹಾಜರಿಯಲ್ಲಿ ತಾಲೂಕಿನ ಪೊಲೀಸರು ಮರಳು ಅನಧಿಕೃತ ಸಾಗಾಟ ವಿಚಾರದಲ್ಲಿ ನಡೆದುಕೊಳ್ಳುತ್ತಿರುವ ರೀತಿ ಕುರಿತು ಸದಸ್ಯರು ಪಕ್ಷಬೇಧ ಮರೆತು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಆನಂದಪುರದ ಹೆಬ್ಬೊಡಿಯಲ್ಲಿ ವಿಶ್ವಬ್ಯಾಂಕ್ ಯೋಜನೆಯಡಿ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಸಂಗ್ರಹಿಸಿ ಇಡಲಾಗಿದ್ದ ಉತ್ತಮ ಗುಣಮಟ್ಟದ ಮರಳನ್ನು ಅನ ಧಿಕೃತವಾಗಿ ಸಾಗಾಟ ಮಾಡಲಾಗಿದೆ. ಇದನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ದೂರು ಕೊಟ್ಟಿದ್ದರೂ ಆರೋಪಿಗಳನ್ನು ಇದುವರೆಗೆ ಬಂಧಿಸದೆ ಇರುವುದರ ಹಿಂದೆ ಅನೇಕ ಅನುಮಾನ ಮೂಡಲು ಕಾರಣವಾಗಿದೆ.
ತಾಪಂ ನಿಂದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ದೂರು ನೀಡಲಾಗಿದೆ. ಇದುವರೆಗೂ ಆರೋಪಿಗಳನ್ನು ಏಕೆ ಬಂಧಿಸಿಲ್ಲ ಎಂದು ಸದಸ್ಯೆ ಜ್ಯೋತಿ ಕೋವಿ ಪ್ರಶ್ನಿಸಿದರು.
ಬಿಜೆಪಿ ಸದಸ್ಯರಾದ ದೇವೇಂದ್ರಪ್ಪ ಯಲಕುಂದ್ಲಿ ಮತ್ತು ಕಲಸೆ ಚಂದ್ರಪ್ಪ ಮಾತನಾಡಿ, ತಾಲೂಕಿನಲ್ಲಿ ಆಶ್ರಯ ಮನೆ, ಶೌಚಾಲಯ ನಿರ್ಮಾಣಕ್ಕೆ ಟ್ರ್ಯಾಕ್ಟರ್, ಟಿಲ್ಲರ್ಗಳಲ್ಲಿ ಮರಳು ಸಾಗಾಟ ಮಾಡಿದರೆ ಪೊಲೀಸರು ಹಿಡಿಯುತ್ತಾರೆ. ಆದರೆ ಮುನ್ನೂರಕ್ಕೂ ಹೆಚ್ಚು ಲೋಡ್ ಮರಳನ್ನು ಇರುವಕ್ಕಿಯಲ್ಲಿ ನಿರ್ಮಾಣ ಮಾಡುತ್ತಿರುವ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕಾಮಗಾರಿಗೆ ಅನಧಿಕೃತವಾಗಿ ಸಾಗಾಟ ಮಾಡಲಾಗಿದೆ. ಪೊಲೀಸರಿಗೆ ದೂರು ನೀಡಿದ್ದರೂ ಈತನಕ ಕ್ರಮ ಕೈಗೊಂಡಿಲ್ಲ.
ಇಲ್ಲಿ ನಡೆಯುವ ಚರ್ಚೆ, ನಿರ್ಣಯಕ್ಕೆ ಯಾವುದೇ ಬೆಲೆ ಇಲ್ಲದಂತೆ ಆಗಿದೆ ಎಂದು ಖಾರವಾಗಿ ಹೇಳಿದರು. ಜೆಡಿಎಸ್ ಸದಸ್ಯ ಅಶೋಕ ಬರದವಳ್ಳಿ ಮಾತನಾಡಿ, ಪೊಲೀಸರು ಒಂದು ಕಣ್ಣಿಗೆ ಸುಣ್ಣ, ಮತ್ತೂಂದು ಕಣ್ಣಿಗೆ ಬೆಣ್ಣೆ ಎನ್ನುವ ನೀತಿಯನ್ನು ಅನುಸರಿಸುತ್ತಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಮರಳು ಸಾಗಾಟ ಮಾಡುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ, ಆಶ್ರಯ ಮನೆ ನಿರ್ಮಾಣಕ್ಕೆ ಮರಳು ಸಾಗಾಟ ಮಾಡಿದವರ ಮೇಲೆ ಗೂಂಡಾ ಕಾಯ್ದೆಯಡಿ ಕೇಸು ದಾಖಲಿಸಲಾಗುತ್ತಿದೆ.
ಇದರಿಂದ ಗೂಂಡಾ ಕಾಯ್ದೆಯ ಮಹತ್ವವೇ ಹಾಳಾಗುತ್ತಿದೆ ಎಂದರು. ಡಿವೈಎಸ್ಪಿ ಕವರಿ ಪ್ರತಿಕ್ರಿಯಿಸಿ, ನಮಗೆ ಯಾರ ಮೇಲೂ ವೈಯಕ್ತಿಕ ದ್ವೇಷವಿಲ್ಲ. ಪೊಲೀಸರು ಸತ್ಯಾಸತ್ಯತೆ ಅರಿತು ಪ್ರಕರಣ ದಾಖಲಿಸುತ್ತಾರೆ. ಒಂದೊಮ್ಮೆ ನಾವು ತಪ್ಪು ಮಾಡಿದರೆ ನಮ್ಮ ವಿರುದ್ಧ ಕೂಡ ಪ್ರಕರಣ ದಾಖಲಿಸಲು ನಿಮಗೆ ಅವಕಾಶವಿದೆ. ಜಿಲ್ಲಾಡಳಿತ ಸೂಚನೆ ನೀಡಿದಂತೆ ನಾವು ಮರಳು ಸಾಗಾಟ ಸಂದರ್ಭದಲ್ಲಿ ಕ್ರಮ ಕೈಗೊಳ್ಳುತ್ತಿದ್ದೇವೆ. ಹೆಬ್ಬೊಡಿ ಮರಳು ಸಾಗಾಟಕ್ಕೆ ಸಂಬಂಧಪಟ್ಟಂತೆ ತಪ್ಪಿತಸ್ಥರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಮಲೆನಾಡಿಗೆ ಪ್ರತ್ಯೇಕ ಮರಳು ನೀತಿ ಜಾರಿಗೆ ತರುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಹೊಸನಗರ ಭಾಗದಿಂದ ಬೆಂಗಳೂರಿಗೆ ಅನಧಿಕೃತವಾಗಿ ಮರಳು ಸಾಗಾಟ ನಡೆಯುತ್ತಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ನಿಗಾವಹಿಸಬೇಕು. ಆಶ್ರಯ ಮನೆ ಹಾಗೂ ಶೌಚಾಲಯ ನಿರ್ಮಾಣಕ್ಕೆ ಮರಳು ತೆಗೆದುಕೊಂಡು ಹೋಗುತ್ತಿರುವ ಬಡವರ ವಿರುದ್ಧ ಇಲಾಖೆ ಮೃದು ಧೋರಣೆ ಅನುಸರಿಸಬೇಕು ಎಂದು ತಾಪಂ ಅಧ್ಯಕ್ಷ ಬಿ.ಎಚ್. ಮಲ್ಲಿಕಾರ್ಜುನ ಹಕ್ರೆ ಸೂಚಿಸಿದರು.
ಮರಳಿನ ದರ ವಿಪರೀತವಾಗಿದ್ದು ಹಾಲಿ ಆಶ್ರಯ ಮನೆಗಳಿಗೆ ನೀಡುತ್ತಿರುವ ಅನುದಾನವನ್ನು 2.50 ಲಕ್ಷ ರೂ.ಗೆ ಹೆಚ್ಚಿಸಲು ಸರ್ಕಾರಕ್ಕೆ ಆಗ್ರಹಿಸಬೇಕು ಎಂದು ಅಶೋಕ ಬರದವಳ್ಳಿ ಸೊರಬ- ಮಾರ್ಕೆಟ್ ರಸ್ತೆಯಲ್ಲಿ ಹಗಲು ಹೊತ್ತಿನಲ್ಲಿ ಭಾರಿ ವಾಹನ ಸಂಚರಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜ್ಯೋತಿ ಒತ್ತಾಯಿಸಿದರು. ತಾಪಂ ಉಪಾಧ್ಯಕ್ಷ ಕೆ.ಎಚ್. ಪರಶುರಾಮ್, ಕಾರ್ಯನಿರ್ವಾಹಣಾಧಿಕಾರಿ ಡಾ| ಕಲ್ಲಪ್ಪ ಎಸ್. ಇದ್ದರು.
ಕೆಎಸ್ಆರ್ಟಿಸಿ ಘಟಕಕ್ಕೆ ಮುತ್ತಿಗೆಗೆ ನಿರ್ಧಾರ ತಾಲೂಕಿನ ಕೆಎಸ್ಆರ್ಟಿಸಿ ಘಟಕದಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ. ಅವ್ಯವಸ್ಥೆಯ ಆಗರವಾದ ಘಟಕದಲ್ಲಿನ ಮುಖ್ಯಸ್ಥರು ತಾವು ಸಚಿವ ಕಾಗೋಡು ತಿಮ್ಮಪ್ಪ ಅವರ ಸಂಬಂಧಿ ಎಂದು ಹೇಳಿಕೊಳ್ಳುತ್ತಾರೆ. ಗ್ರಾಮಾಂತರದಲ್ಲಿ ಬಸ್ ಸೌಕರ್ಯ ಸರಿಯಿಲ್ಲ ಎಂದು ಸದಸ್ಯ ಕಲಸೆ ಚಂದ್ರಪ್ಪ ಆಕ್ಷೇಪಿಸಿದರು. ಸದಸ್ಯರಾದ ಸುವರ್ಣ ಟೇಕಪ್ಪ, ಪ್ರಭಾವತಿ ಚಂದ್ರಕಾಂತ್ ಮತ್ತಿತರರು ತಮ್ಮ ಆಕ್ಷೇಪ ಪ್ರಸ್ತಾಪಿಸಿ, ನೌಕರರಿಗೂ ಕಿರುಕುಳ ನೀಡಲಾಗುತ್ತಿದೆ ಎಂದರು. ಕಳೆದ 2 ವರ್ಷಗಳಿಂದ ಕೋರಿಕೆ ಸಲ್ಲಿಸಲಾದ ಮಾರ್ಗಗಳಲ್ಲಿ ಬಸ್ ಸಂಚಾರ ಪ್ರಾರಂಭಿಸಿಲ್ಲ ಎಂದು ಹೇಳಿದ ಅಧ್ಯಕ್ಷ ಹಕ್ರೆ, ಈ ಸಂಬಂಧ ಸಭೆಯಲ್ಲಿ ನಿರ್ಣಯ ಕೈಗೊಂಡರೆ ಕೆಲಸ ಆಗುವುದಿಲ್ಲ. ಬದಲಿಗೆ ಜನಪ್ರತಿನಿಧಿಗಳೆಲ್ಲರೂ ಸೇರಿ ಕೆಎಸ್ಆರ್ಟಿಸಿ ಘಟಕ್ಕೆ ಮುತ್ತಿಗೆ ಹಾಕೋಣ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJPಯಲ್ಲಿ ನನಗೆ ಅನ್ಯಾಯವಾದಾಗ ರಘುಪತಿ ಭಟ್ ಸ್ಪರ್ಧೆ ಬೇಡ ಅಂದಿದ್ದರು: ಆಯನೂರು
SSLC: ಉತ್ತಮ ಅಂಕ ಪಡೆದ ವಿದ್ಯಾರ್ಥಿನಿಯರನ್ನು ಅಭಿನಂದಿಸಿದ ಶಾಸಕ ಆರಗ ಜ್ಞಾನೇಂದ್ರ
Shimoga ಜಮೀನು ಗಲಾಟೆ; ಕುಡಗೋಲಿನಿಂದ ಹಲ್ಲೆ ಮಾಡಿ ಹಾಡಹಗಲೇ ಸಂಬಂಧಿಯ ಕೊಲೆ
Shimoga: ಆಟೋಗೆ ಕ್ಯಾಂಟರ್ ಡಿಕ್ಕಿ, ವಿದ್ಯಾರ್ಥಿನಿ ಸಾವು; ಸಿಸಿಟಿವಿಯಲ್ಲಿ ದೃಶ್ಯ ಸೆರೆ
Shivamogga: ಪೊಲೀಸರ ಮೇಲೆ ಹಲ್ಲೆ ಯತ್ನ… ರೌಡಿ ಶೀಟರ್ ಶೋಹಿಬ್ ಕಾಲಿಗೆ ಗುಂಡೇಟು