ಶಿವಮೊಗ್ಗದಲ್ಲಿ ಈ ಬಾರಿ ಹೆಂಡದ ಹೊಳೆಗೆ ಬ್ರೇಕ್?
ಇದುವರೆಗೂ 1.73 ಕೋಟಿ ಮೌಲ್ಯದ ಮದ್ಯ ವಶ ಅಂಕಿಅಂಶದ ಪ್ರಕಾರ ರಾಜ್ಯದಲ್ಲಿ ಶಿವಮೊಗ್ಗ ಫಸ್ಟ್
Team Udayavani, Apr 11, 2019, 11:29 AM IST
ಶಿವಮೊಗ್ಗ: ಚುನಾವಣೆಯಲ್ಲಿ ಹಣ, ಹೆಂಡದ ಹೊಳೆ ಹರಿಯೋದು ಮಾಮೂಲು ಎಂಬ ಸ್ಥಿತಿ ನಿರ್ಮಾಣವಾಗಿದೆ. ಆದರೆ ಈ ಬಾರಿ ಶಿವಮೊಗ್ಗ ಕ್ಷೇತ್ರದಲ್ಲಿ ಅದು ಸಾಧ್ಯವಿಲ್ಲ. ಯಾಕೆ ಗೊತ್ತಾ? ಚುನಾವಣಾ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿರುವ ಅಧಿಕಾರಿಗಳು ಈ ಬಾರಿ ರಾಜ್ಯದಲ್ಲೇ ಅಧಿಕ ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ.
ಇದುವರೆಗೂ ಜಿಲ್ಲೆಯಲ್ಲಿ ವಶಪಡಿಸಿಕೊಂಡಿರುವ ಮದ್ಯದ ಮೌಲ್ಯ 1.73
ಕೋಟಿ ರೂ. ಇಡೀ ರಾಜ್ಯದ ಅಂಕಿಅಂಶದ ಪ್ರಕಾರ ಮದ್ಯ ವಶಪಡಿಸಿಕೊಂಡಿದ್ದರಲ್ಲಿ ಶಿವಮೊಗ್ಗ ನಂಬರ್ ಒನ್ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಕೊಡಗು ಜಿಲ್ಲೆಯಿದೆ. ಸಾಮಾನ್ಯವಾಗಿ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಶೇಖರಿಸಲಾಗುತ್ತದೆ.
ಅಲ್ಲದೇ ಡ್ರೈಡೇ ಇರುವ ದಿನದಂದು ಹೆಚ್ಚಿನ ಬೇಡಿಕೆ ಇರುವುದರಿಂದ ಹೆಚ್ಚಿನ ಲಾಭವು ಸಿಗುತ್ತದೆ. ಮತದಾನದ ದಿನ ಹಾಗೂ ಅದರ ಹಿಂದಿನ 48 ಗಂಟೆ ಮದ್ಯ ಮಾರಾಟ ಬಂದ್ ಮಾಡಲಾಗುತ್ತದೆ. ಆದ್ದರಿಂದ ಹೆಚ್ಚಿನ ಮದ್ಯವನ್ನು ಸ್ಟಾಕ್ ಮಾಡುತ್ತಾರೆ. ಆದರೆ ಅಧಿಕಾರಿಗಳ ಖಡಕ್ ಕಾರ್ಯಾಚರಣೆಯಿಂದ ಈ ಬಾರಿ ನಿರೀಕ್ಷೆಗೂ ಮೀರಿ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ.
ಎಲ್ಲೆಲ್ಲಿ ಎಷ್ಟೆಷ್ಟು: ಚುನಾವಣೆ ಘೋಷಣೆಯಾದ ಮಾ. 10ರಿಂದ ಇಲ್ಲಿವರೆಗೂ ಒಟ್ಟು 1319 ದಾಳಿ ಮಾಡಲಾಗಿದ್ದು, ಒಟ್ಟು 37,421 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಇದರ ಒಟ್ಟು ಮೌಲ್ಯ 1,73,58,067 ರೂ., ಒಟ್ಟು 742 ಮಂದಿಯನ್ನು ಬಂಧಿಸಲಾಗಿದ್ದು, ಬಹುತೇಕರಿಗೆ ಜಾಮೀನು ಸಿಕ್ಕಿದೆ.
ಅತಿ ಹೆಚ್ಚು ಮದ್ಯ ವಶಪಡಿಸಿಕೊಂಡಿರುವುದು ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ. ಇಲ್ಲಿ 95 ಕಡೆ ದಾಳಿ ಮಾಡಲಾಗಿದ್ದು 65 ಜನರನ್ನು ಬಂಧಿಸಿ 14,835 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಶಿವಮೊಗ್ಗ -1 ವಲಯದಲ್ಲಿ 80 ಕಡೆ ದಾಳಿ ಮಾಡಿ 7,445 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಶಿವಮೊಗ್ಗ-2ರಲ್ಲಿ 90 ಕಡೆ ದಾಳಿ ಮಾಡಿ 1,101 ಲೀಟರ್, ಭದ್ರಾವತಿಯಲ್ಲಿ 143
ದಾಳಿ, 336.97 ಲೀಟರ್, ಶಿಕಾರಿಪುರ 102 ದಾಳಿ 74.44 ಲೀಟರ್, ಸಾಗರ
112 ದಾಳಿ 214.4 ಲೀಟರ್, ಸೊರಬ 123 ದಾಳಿ 84.08 ಲೀಟರ್, ತೀರ್ಥಹಳ್ಳಿ 103 ದಾಳಿ 124.05 ಲೀಟರ್, ಹೊಸನಗರ 130ದಾಳಿ 62.41 ಲೀಟರ್, ಸಾಗರ ಸಬ್ ಡಿವಿಷನ್ 107 ದಾಳಿ 5227 ಲೀಟರ್, ತೀರ್ಥಹಳ್ಳಿ ಸಬ್ಡಿವಿಷನ್ 89 ದಾಳಿ 146.87 ಲೀಟರ್, ಇತರೆ ದಾಳಿಗಳಿಂದ 7764 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಜತೆಗೆ 881.13 ಲೀಟರ್ ಬಿಯರ್ ವಶಪಡಿಸಿಕೊಳ್ಳಲಾಗಿದೆ. ಸೊರಬ ತಾಲೂಕಿನಲ್ಲಿ 15 ಲೀಟರ್ ಕಳ್ಳಭಟ್ಟಿ ಸಾರಾಯಿ ವಶಪಡಿಸಿಕೊಳ್ಳಲಾಗಿದೆ.
ಮಾರಾಟದಲ್ಲಿ ಏರಿಕೆ ಇಲ್ಲ: ಚುನಾವಣೆ ವೇಳೆ ಮದ್ಯ ಮಾರಾಟ ನಿರೀಕ್ಷೆಗಿಂತ ಹೆಚ್ಚಾಗಿರುತ್ತದೆ ಎಂದು ಅಂದಾಜಿಲಾಗುತ್ತದೆ. ಆದರೆ ಶಿವಮೊಗ್ಗದಲ್ಲಿ ಸಾಮಾನ್ಯ ಬೇಡಿಕೆಯಷ್ಟೇ ಇದೆ. ಆದರೆ ಅಕ್ರಮ
ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ.
ಶಿವಮೊಗ್ಗಕ್ಕಿಂತ ಬೇರೆ ಕಡೆಯಿಂದ ಮದ್ಯದ ಸರಬರಾಜು ಎಂದು ಸಹ ಅಂದಾಜಿಸಲಾಗಿದೆ. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ 205143 ಲೀಟರ್ ಮದ್ಯ ಸೇಲಾಗಿದೆ. ಈ ವರ್ಷ ಅಷ್ಟೇ ಇದೇ ಎನ್ನುತ್ತಾರೆ ಅಧಿಕಾರಿಗಳು.
ಚುನಾವಣೆ ವೇಳೆ ಅಬಕಾರಿ ಇಲಾಖೆ ಅನೇಕ ಅಧಿಕಾರಿಗಳನ್ನು ಬೇರೆಡೆ ನಿಯೋಜಿಸಲಾಗಿದೆ. ಹೊಸ ಅಧಿಕಾರಿಗಳು ತಮಗೆ ಸಿಕ್ಕ ಮಾಹಿತಿ
ಆಧರಿಸಿ ದಾಳಿ ಕೈಗೊಳ್ಳುತ್ತಿದ್ದಾರೆ. ಜನರೇ ಕರೆ ಮಾಡಿ ಇಂತಹ ಕಡೆ ಮದ್ಯ ಸಂಗ್ರಹ ಮಾಡಿದ್ದಾರೆ. ಇಂತಹ ವಾಹನದಲ್ಲಿ ಕೊಂಡೊಯ್ಯುತ್ತಿದ್ದಾರೆ ಎಂಬ ಮಾಹಿತಿ ನೀಡುತ್ತಾರೆ. ಅದನ್ನು ಆಧರಿಸಿ ದಾಳಿ ಮಾಡಲಾಗುತ್ತಿದೆ. ವಿಶೇಷವೇನೂ ಇಲ್ಲ ಎನ್ನುತ್ತಾರೆ ಅಧಿಕಾರಿಗಳು. ಈ ಬಾರಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳಿಗೆ ಚುನಾವಣಾ ಆಯೋಗ ಬಹುಮಾನ ಸಹ ನೀಡುತ್ತದೆ ಎನ್ನಲಾಗಿದೆ.