ಮಿಡಿಗೇಶಿ: ಹೆಚ್ಚುವರಿ ಆ್ಯಂಬುಲೆನ್ಸ್ ಕಾರ್ಯಾರಂಭ
Team Udayavani, Oct 22, 2022, 6:40 PM IST
ಮಧುಗಿರಿ: ಆ್ಯಂಬುಲೆನ್ಸ್ ಇದ್ದರೂ ಚಾಲಕನಿಲ್ಲದೇ ಒಂದು ತಿಂಗಳಿಂದ ನಿಂತಲ್ಲೇ ನಿಂತಿದ್ದ ಸಮಸ್ಯೆ ಬಗ್ಗೆ ಉದಯವಾಣಿಯಲ್ಲಿ ಪ್ರಕಟವಾದ ವರದಿಯಿಂದ ಎಚ್ಚೆತ್ತ ಸಂಬಂಧಪಟ್ಟ ಆರೋಗ್ಯ ಇಲಾಖೆ ಅಧಿಕಾರಿಗಳು, ಹೆಚ್ಚುವರಿ ಆ್ಯಂಬುಲೆನ್ಸ್ಗೆ ಚಾಲಕ ನನ್ನು ನೇಮಿಸಿದ್ದು, ಶುಕ್ರವಾರದಿಂದ ಬಳಕೆಗೆ ಚಾಲನೆ ನೀಡಲಾಗಿದೆ.
ತಾಲೂಕಿನ ಮಿಡಿಗೇಶಿ ಹೋಬಳಿಗೆ ಆ್ಯಂಬುಲೆನ್ಸ್ ಬೇಡಿಕೆಯಿದ್ದು, ಅದನ್ನು ಸರಿದೂಗಿಸಲು ತುರುವೇಕೆರೆ ಯಿಂದ ಒಂದು ತುರ್ತು ವಾಹನ ಮೀಸಲಿಟ್ಟು ಮಧುಗಿರಿಗೆ ಕಳುಹಿಸಲಾಗಿತ್ತು. ಆದರೆ ಒಂದು ತಿಂಗಳಾದರೂ ಚಾಲಕನಿಲ್ಲ ಎಂಬ ಸಬೂಬು ಹೇಳಿಕೊಂಡು ವಾಹನವನ್ನು ಆಸ್ಪತ್ರೆಯ ಹಿಂಭಾಗದಲ್ಲಿ ನಿಲ್ಲಿಸಲಾಗಿತ್ತು.
ಈ ಸಂಬಂಧ ಉದಯವಾಣಿ ತುಮಕೂರು ಆವೃತ್ತಿಯಲ್ಲಿ “”ಬಳಕೆಯಾಗದೇ ನಿಂತಲ್ಲೇ ನಿಂತ ಹೆಚ್ಚುವರಿ ಆಂಬ್ಯುಲೆನ್ಸ್” ಶೀರ್ಷಿಕೆಯಡಿ ಅ.18 ರಂದು ವರದಿ ಪ್ರಟಕವಾಗಿತ್ತು. ವರದಿಗೆ ಸ್ಪಂದಿಸಿದ್ದ ಡಿಎಚ್ಒ ಡಾ. ಮಂಜುನಾಥ್, ಇನ್ನೆರಡು ದಿನದಲ್ಲಿ ಚಾಲಕನನ್ನು ನೇಮಿಸಿ ಆ್ಯಂಬ್ಯುಲೆನ್ಸ್ ಬಳಕೆಗೆ ಅವಕಾಶ ನೀಡುತ್ತೇವೆ ಎಂದಿದ್ದರು. ಅದರಂತೆ ಮಿಡಿಗೇಶಿಗೆ ಆ್ಯಂಬ್ಯುಲೆನ್ಸ್ ಹೊರಟಿತು, ಕೀ ಅನ್ನು ಮಿಡಿಗೇಶಿಯ ಆರೋಗ್ಯ ರಕ್ಷಾ ಕವಚ ಸಂಸ್ಥೆಯ ಸದಸ್ಯ ಮಿಡಿಗೇಶಿ ನಾಗರಾಜು ಅವರಿಗೆ ಹಸ್ತಾಂತರಿಸಿದ ವೈದ್ಯಾಧಿಕಾರಿ ಡಾ.ಮಹೇಶ್ ಸಿಂಗ್ ಹೇಳಿದಂತೆ ಆ್ಯಂಬುಲೆನ್ಸ್ ನೀಡಿದ್ದೇವೆ.
ಮಿಡಿಗೇಶಿಯಿಂದ 15 ಕಿ.ಮೀ. ವ್ಯಾಪ್ತಿಯಲ್ಲಿ ಈ ವಾಹನ ಸಂಚರಿಸಲಿದ್ದು, ರೋಗಿಗಳ ಸಹಾಯಕ್ಕೆ ಬರಲಿದೆ ಎಂದರು. ಈ ಸಂದರ್ಭದಲ್ಲಿ ಆರೋಗ್ಯ ರಕ್ಷಾ ಕವಚ ಸಂಸ್ಥೆಯ ಸದಸ್ಯ ಮಿಡಿಗೇಶಿ ನಾಗರಾಜು ಹಾಗೂ ಸ್ನೇಹಿತರು ಇದ್ದರು.