ರಸ್ತೆ ಗುಂಡಿಗಳನ್ನು ಮುಚ್ಚಿ ವರದಿ ನೀಡಲು ತುಮಕೂರು ಪಾಲಿಕೆಗೆ ಹೈಕೋರ್ಟ್ ನಿರ್ದೇಶನ
Team Udayavani, Dec 14, 2022, 10:38 PM IST
ತುಮಕೂರು : ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆ ಗುಂಡಿಗಳನ್ನು ಮುಚ್ಚಿ 3 ವಾರದೊಳಗೆ ವಸ್ತುಸ್ಥಿತಿ ವರದಿ ನೀಡುವಂತೆ ಹೈಕೋರ್ಟ್ ನಿರ್ದೇಶಿಸಿದೆ.
ಕದರನಹಳ್ಳಿ ತಾಂಡ್ಯದ ಹೈಕೋರ್ಟ್ ವಕೀಲ ರಮೇಶ್ ನಾಯಕ್ ಎಲ್ ಸಲ್ಲಿಸಿದ್ದ ಆಕ್ಷೇಪಣೆ ಪರಿಶೀಲಿಸಿದ ಕೋರ್ಟ್ ಮಹಾನಗರ ಪಾಲಿಕೆಗೆ ರಸ್ತೆ ಗುಂಡಿ ಮುಚ್ಚಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದೆ.
ತುಮಕೂರಿನ ರಸ್ತೆಗುಂಡಿಗಳನ್ನು ಮುಚ್ಚಿಸುವ ಸಂಬಂಧ ರಮೇಶ್ ನಾಯಕ್ ಎಲ್ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಮಹಾನಗರ ಪಾಲಿಕೆ ತುಮಕೂರಲ್ಲಿ ರಸ್ತೆ ಗುಂಡಿಗಳೇ ಇಲ್ಲವೆಂದು ಕೋರ್ಟ್ ಗೆ ವರದಿಸಲ್ಲಿಸಿತ್ತು. ಈ ಬಗ್ಗೆ ರಮೇಶ್ ನಾಯಕ್ ಫೋಟೋ ಸಾಕ್ಷ್ಯ ಸಹಿತ ಆಕ್ಷೇಪಣೆ ಸಲ್ಲಿಸಿದ್ದರು. ಆಕ್ಷೇಪಣೆ ಪರಿಶೀಲಿಸಿದ ಕೋರ್ಟ್ 3 ವಾರದೊಳಗೆ ಗುಂಡಿ ಮುಚ್ಚಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದೆ.
ಮಹಾನಗರ ಪಾಲಿಕೆ ರಸ್ತೆ ಗುಂಡಿಗಳಿಲ್ಲ ಎಂದು ತನಗೆ ತಾನೇ ಪ್ರಮಾಣಪತ್ರ ನೀಡಿರುವುದರಿಂದ ರಸ್ತೆ ಗುಂಡಿ ಮುಚ್ಚುವ ಸಂಬಂಧ ಮೇಲುಸ್ತುವಾರಿಗೆ ಸಮಿತಿ ನೇಮಿಸುವಂತೆ ರಮೇಶ್ ನಾಯಕ್ ಕೋರ್ಟ್ ಗೆ ಮನವಿ ಮಾಡಿದ್ದಾರೆ.
ರಸ್ತೆ ಗುಂಡಿ ಹೋರಾಟಕ್ಕೆ ಸಾರ್ವಜನಿಕರು ಕೈಜೋಡಿಸಬೇಕು. ರಸ್ತೆ ಗುಂಡಿಗಳು ಕಂಡುಬಂದಲ್ಲಿ ತನಗೆ ಫೋಟೋ ವಾಟ್ಸಾಪ್ ಮಾಡುವಂತೆ (ಮೊ.ಸಂ : 95386 31572 ) ಕೋರಿದ್ದಾರೆ.