ಕಲ್ಪತರು ನಾಡಿನ ಜನರಲ್ಲಿ ಹೆಚ್ಚಿದ ಆತಂಕ
ದಿನದಿಂದ ದಿನಕ್ಕೆ ತುಮಕೂರಲ್ಲಿ ಹೆಚ್ಚಾಗುತ್ತಿರುವ ಕೋವಿಡ್ 19 ಸೋಂಕು ಪ್ರಕರಣಗಳು
Team Udayavani, May 2, 2020, 5:20 PM IST
ಸಾಂದರ್ಭಿಕ ಚಿತ್ರ
ತುಮಕೂರು: ಸದ್ಯ ಏನೂ ಇಲ್ಲ ಎಂದು ನಿರಾಳರಾಗಿದ್ದ ಕಲ್ಪತರು ನಾಡಿನಲ್ಲಿ ಈಗ ಕೋವಿಡ್ 19 ಆತಂಕ ದಿನೇ ದಿನೆ ಹೆಚ್ಚುತ್ತಿದೆ, ಅದರಲ್ಲಿಯೂ ಶೈಕ್ಷಣಿಕ ನಗರದಲ್ಲಿ ಕಳೆದ ಐದು ದಿನಗಳಲ್ಲಿ ಮೂವರಿಗೆ ಸೋಂಕು ಕಂಡು ಒಬ್ಬರು ಮೃತಪಟ್ಟಿರುವುದು ಆತಂಕ ಇನ್ನೂ ಹೆಚ್ಚಲು ಕಾರಣವಾಗಿದ್ದು ಇನ್ನೂ ನೂರಾರು ಜನರ ವರದಿ ಬರಬೇಕಿದ್ದು ಇನ್ನೆಷ್ಟು ಜನರಲ್ಲಿ ಸೋಂಕು ಹಬ್ಬಿದೆಯೋ ಎನ್ನುವ ನಡುಕ ಉಂಟಾಗುತ್ತಿದೆ.
ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಐದಕ್ಕೇರಿದೆ ಅದರಲ್ಲಿ ತುಮಕೂರು ನಗರದ್ದೇ ಮೂರು ಪ್ರಕರಣಗಳು ಇವೆ, ಉಳಿದ ಎರಡು ಪ್ರಕರಣ ಶಿರಾ ನಗರದ್ದಾಗಿದೆ, ಇದರಲ್ಲಿ ಶಿರಾ-1, ತುಮಕೂರು-1 ಸೇರಿ ಇಬ್ಬರು ವೃದ್ಧರು ಕೊರೊನಾಗೆ ಬಲಿಯಾಗಿದ್ದಾರೆ. ಶಿರಾದ 13 ವರ್ಷದ ಸೋಂಕಿತ ಗುಣಮುಖ ರಾಗಿದ್ದು, ಇನ್ನೂ ತುಮಕೂರಿನ ಇಬ್ಬರು ಸೋಂಕಿತರು ಜಿಲ್ಲಾ ಕೋವಿಡ್-19 ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ನಗರದಲ್ಲಿ ಕೋವಿಡ್ 19 ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಸೋಂಕಿತ ಅಡ್ಡಾಡಿರುವ ಪ್ರದೇಶಗಳಲ್ಲಿ ಪಾಲಿಕೆ ವತಿಯಿಂದ ಸ್ವಚ್ಛತೆ ಜತೆಗೆ ಕೀಟ ನಾಶಕ ಸಿಂಪಡಣೆ ನಡೆಯುತ್ತಿದೆ. ಆದರೂ ಸೋಂಕಿತರು ಎಲ್ಲಿ ಅಡ್ಡಾಡಿದ್ದಾರೋ ಎನ್ನುವ ಭೀತಿ ಆವರಿಸಿದೆ.
ಮೃತಪಟ್ಟಿರುವ ನಗರದ ಕೆಎಚ್ಬಿ ಕಾಲೋನಿಯ ಪಿ-535 ಮೃತ ವ್ಯಕ್ತಿಗೆ ಕೋವಿಡ್ 19 ಸೋಂಕು ಇದ್ದರೂ ಯಾವುದೇ ಮುಂಜಾಗ್ರತೆ ವಹಿಸದೇ ನಾಗವಲ್ಲಿ ಸಮೀಪ ಅಂತ್ಯಸಂಸ್ಕಾರ ಮಾಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಕೆಎಚ್ಬಿ ಕಾಲೋನಿ ಪಿ-535 ಮೃತ ವೃದ್ಧ ವ್ಯಕ್ತಿ ಪ್ರಾಥಮಿಕ ಸಂಪರ್ಕದಲ್ಲಿದ್ದ ಪತ್ನಿ ಪಿ-553 ವ್ಯಕ್ತಿಗೂ ಸೋಂಕು ದೃಢಪಟ್ಟಿದೆ.
ನಗರದ ಜಿಲ್ಲಾ ಕೋವಿಡ್ -19 ಆಸ್ಪತ್ರೆಯಲ್ಲಿ ಮೃತ ವೃದ್ಧ ಪಿ-535 ವ್ಯಕ್ತಿ ಪತ್ನಿ ಪಿ.553, , ಗುಜರಾತ್ನ ಪಿ-447 ವ್ಯಕ್ತಿಗೆ ಚಿಕಿತ್ಸೆ ನೀಡಲಾಗಿದೆ. ನಗರದ 10 ಮಸೀದಿಗಳಲ್ಲಿ ಬೇರೆ ಜಿಲ್ಲೆ, ರಾಜ್ಯ ಮತ್ತು ವಿದೇಶದಿಂದ ಜಮಾತ್ ಸದಸ್ಯರು ತಂಗಿದ್ದಾರೆ ಎನ್ನುವ ಮಾಹಿತಿ ವ್ಯಕ್ತವಾಗುತ್ತಿರುವುದು. ಮಸೀದಿಗಳನ್ನು ಹೊರತುಪಡಿಸಿ ಇನ್ನಿತರೆ ಮಸೀದಿಗಳಲ್ಲಿ ಜಮಾತ್ ಸದಸ್ಯರು ತಂಗಿದ್ದಲ್ಲಿ ಕೂಡಲೇ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಸಹಕರಿಸುವಂತೆ ಜಿಲ್ಲಾ ವಕ್ಫ್ ಅಧಿಕಾರಿ
ಮಸೀದಿಗಳ ಅಧ್ಯಕ್ಷರಲ್ಲಿ ಮನವಿ ಮಾಡಿದ್ದಾರೆ ಆದರೂ ಮಾಹಿತಿ ನೀಡದಿರುವುದು ಜಿಲ್ಲಾಡಳಿತಕ್ಕೆ ತಲೆ ನೋವಾಗಿದೆ.
ಮನೆ-ಮನೆ ತೆರಳಿ ಸಮೀಕ್ಷೆ
ತುಮಕೂರು: ಜಿಲ್ಲೆಯಲ್ಲಿ 5 ಕೋವಿಡ್-19 ಪ್ರಕರಣ ಕಂಡು ಬಂದಿದ್ದು, ಕೋವಿಡ್-19 ನಿಯಂತ್ರಣ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶದ ಮೇರೆಗೆ ಜಿಲ್ಲಾದ್ಯಂತ ಮನೆ-ಮನೆ ಆರೋಗ್ಯ ಸಮೀಕ್ಷೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್ ತಿಳಿಸಿದ್ದಾರೆ. ಈ ಸಮೀಕ್ಷೆಯಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಕಂದಾಯ ಇಲಾಖೆ ಅಧಿಕಾರಿಗಳು, ಪಂಚಾಯಿತಿ ಅಧಿಕಾರಿಗಳು ಹಾಗೂ ಬೂತ್ ಮಟ್ಟದ ಮತಗಟ್ಟೆ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
●ಚಿ.ನಿ.ಪುರುಷೋತ್ತಮ್