ಬರದ ಕಾರ್ಮೋಡಕ್ಕೆ ನಲುಗಿದ ಜಾನುವಾರು
Team Udayavani, May 10, 2019, 5:32 PM IST
ತುಮಕೂರು: ಬಹುತೇಕ ಬಯಲು ಸೀಮೆ ಪ್ರದೇಶ ವಾಗಿರುವ ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಬರದಿಂದಾಗಿ ಜಾನುವಾರುಗಳ ಮೇಲೆ ತೀವ್ರವಾಗಿ ಪರಿಣಾಮ ಬೀರಿದೆ. ಎಲ್ಲಿ ಹೋದರೂ ಮೇವಿಲ್ಲ, ನೀರಿಲ್ಲ. ಅಲ್ಪ ಸ್ವಲ್ಪ ಮೇವಾದರೂ ಹೊಲದಲ್ಲಿ ಬರುತ್ತದೆ ಎಂದು ನಿರೀಕ್ಷಿಸಿದ್ದ ವರಿಗೆ ಅದು ಇಲ್ಲದಂತಾಗಿ ಮೇವು ಬ್ಯಾಂಕ್ಗಳಲ್ಲಿ ನೀಡುವ ಮೇವೇ ಜಾನುವಾರುಗಳಿಗೆ ಗತಿಯಾಗಿದೆ.
ರೈತರು ದನಕರುಗಳನ್ನು ಕಟ್ಟಿಕೊಂಡು ಕೃಷಿ ಚಟು ವಟಿಕೆ ಈ ಹಿಂದಿನಿಂದಲೂ ಮಾಡಿಕೊಂಡು ಬರುತ್ತಿದ್ದು, ಇತ್ತೀಚಿನ ವೈಜ್ಞಾನಿಕತೆ ಬೆಳೆ ದಂತೆ ಹೆಚ್ಚು ಕೃಷಿ ಕೆಲಸದಲ್ಲಿ ತೊಡಗುತ್ತಿದ್ದ ಸ್ವದೇಶಿ ತಳಿಗಳಾದ ಅಮೃತ್ ಮಹಲ್, ಹಳ್ಳಿಕಾರ್ ತಳಿ ಗಳನ್ನು ಸಾಕಲಾರದೆ ದಿನೇ, ದಿನೇ ಮಾರಾಟ ಮಾಡು ತ್ತಿದ್ದು, ಅಳಿದುಳಿದಿ ರುವ ದನಕರುಗಳನ್ನು ಉಳಿಸಿ ಕೊಂಡರೆ ಸಾಕಪ್ಪಾ ಎನ್ನುವುದು ರೈತರ ಮನ ದಾಳದ ಮಾತಾಗಿದೆ.
ಯಾವ ಹಳ್ಳಿಗೆ ಹೋದರೂ ದನ ಕರುಗಳ ಹಿಂಡು, ಹಿಂಡು ಗೋಮಾಳದ ಕಡೆಗೆ ಮೇಯಲು ಹೋಗುತ್ತಿ ದ್ದವು. ಆದರೆ ಇತ್ತೀಚಿನಲ್ಲಿ ಗೋಮಾಳ, ಗೋ ಕಟ್ಟೆ ಗಳನ್ನು ಭೂಗಳ್ಳರ ಪಾಲಾಗಿರುವುದರಿಂದ ಮೇವು ಸಿಗದೆ ಸಂಕಷ್ಟ ಎದುರಿಸುತ್ತಿವೆ.
ರಾಜ್ಯದಲ್ಲೇ ಅತಿ ಹೆಚ್ಚು ಕುರಿಗಳಿವೆ: ಜಿಲ್ಲೆಯಲ್ಲಿ ಕಳೆದ 2012ರ ಜಾನುವಾರು ಜನಗಣತಿಯಂತೆ ಜಿಲ್ಲೆ ಯಲ್ಲಿ 5.27.067 ದನಗಳಿದ್ದು, 1.81.118 ಎಮ್ಮೆ ಗಳಿವೆ. ಇದಲ್ಲದೇ 10.61.330 ಕುರಿಗಳು, 3.26.890 ಮೇಕೆಗಳು ಜಿಲ್ಲೆಯಲ್ಲಿವೆ. ರಾಜ್ಯದಲ್ಲೇ ಅತಿ ಹೆಚ್ಚು ಕುರಿ ಸಾಕಾಣಿಕೆ ಜಿಲ್ಲೆ ಎನ್ನುವ ಹೆಸರು ಪಡೆದಿದ್ದು, ಜಿಲ್ಲೆಯಲ್ಲಿ 10.61.330 ಕುರಿಗಳಿರುವುದು ವಿಶೇಷ.
ಪ್ರತಿವರ್ಷ ಮಳೆಗಾಲದಲ್ಲಿ ಕನಿಷ್ಠ ದನ ಕರುಗಳಿಗೆ ಮೇವಾಗುವಂತೆ ಅಲ್ಲಲ್ಲಿ ಮಳೆಯಾಗುತ್ತಿತ್ತು. ಕಳೆದ ವರ್ಷ ನವೆಂಬರ್ನಿಂದಲೇ ಮಳೆ ಬರುವುದು ನಿಂತು ಹೋಯಿತು. ಇನ್ನು ಪೂರ್ವ ಮುಂಗಾರು ಮಳೆ ಜನವರಿಯಿಂದ ಆರಂಭವಾಗಬೇಕಿತ್ತು.
ಆದರೆ ಈ ಬಾರಿ ನಿರೀಕ್ಷೆಯಷ್ಟು ಮಳೆ ಬಂದಿಲ್ಲ. ಈ ವೇಳೆಗೆ ವಾಸ್ತವಿಕವಾಗಿ ವಾಡಿಕೆ ಮಳೆ 33 ಮಿ.ಮೀ. ಬರಬೇಕಿತ್ತು. ಮಳೆ ಬಂದಿದರೆ ಜಾನುವಾರುಗಳಿಗೆ ಕುಡಿಯುವ ನೀರು ಮೇವು ದೊರಕುತ್ತಿತ್ತು.
ಮೇವಿನ ಭೀಕರತೆ ಹೆಚ್ಚಲಿದೆ: ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಈ ವರ್ಷ ಮಳೆ ಇಲ್ಲದೆ ಯಾವ ರೈತರೂ ಬಣವೆಗಳನ್ನು ಹಾಗೂ ಒಟ್ಟಿ ಹುಲ್ಲನ್ನು ರೈತರು ಶೇಖರಣೆ ಮಾಡಿಕೊಂಡಿಲ್ಲ.
ಮೇವು ಬ್ಯಾಂಕ್ ಮಾತ್ರ ತೆರೆದಿದೆ: ಇಲಾಖೆ ಅಧಿಕಾರಿಗಳು ಹೇಳುವಂತೆ 12 ವಾರಗಳವರೆಗೆ ಸಾಕಾಗುವಷ್ಟು 290003 ಮೆಟ್ರಿಕ್ ಟನ್ ಮೇವಿನ ದಾಸ್ತಾನು ಇದೆ. ಆ ನಂತರ ಮಳೆ ಬರುವ ಸಾಧ್ಯತೆ ಇದ್ದು, ಸಮಸ್ಯೆ ಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ಜಿಲ್ಲೆಯಲ್ಲಿ 24 ಮೇವು ಬ್ಯಾಂಕ್ ತೆರೆಯಲು ಜಿಲ್ಲಾಡಳಿತ ಉದ್ದೇಶಿತ್ತು. ಆದರೆ ಈಗ 20 ಮೇವು ಬ್ಯಾಂಕ್ಗಳನ್ನು ಮಾತ್ರ ತೆರೆದಿದೆ.
5 ಕೆ.ಜಿ. ಹುಲ್ಲು ವಿತರಣೆ: ಅದರಲ್ಲಿ ಪ್ರಮುಖವಾಗಿ ಮಧುಗಿರಿ-6, ಕೊರಟಗೆರೆ-3, ಪಾವಗಡ-4, ಶಿರಾ-2, ತಿಪಟೂರು-3, ಚಿಕ್ಕನಾಯಕನಹಳ್ಳಿ-2 ಸೇರಿದಂತೆ 20 ಕಡೆಗಳಲ್ಲಿ ಮೇವಿನ ಬ್ಯಾಂಕ್ ಇದ್ದು, ಈ ಮೇವು ಬ್ಯಾಂಕ್ಗಳಲ್ಲಿ ಒಂದು ದಿನಕ್ಕೆ ಒಂದು ಎತ್ತಿಗೆ ಎಷ್ಟು ಹುಲ್ಲು ಬೇಕು ಎಂದು ವೈದ್ಯರಿಂದ ಪರಿಶೀಲಿಸಿ, ಒಂದು ದಿನಕ್ಕೆ 5 ಕೆ.ಜಿ. ಒಣಹುಲ್ಲನ್ನು ಒಂದು ಎತ್ತಿಗೆ ನೀಡಲಾಗುತ್ತಿದೆ. ಒಂದು ಕೆ.ಜಿ.ಹುಲ್ಲಿಗೆ 2ರೂ. ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 3282 ಮೆಟ್ರಿಕ್ ಟನ್ ಹುಲ್ಲನ್ನು ನೀಡಲಾಗಿದೆ. ಕೊಳಬಾವಿ ಹೊಂದಿರುವ ರೈತರಿಗೆ ಹುಲ್ಲು ಬೆಳೆಯಲು ಮೇವಿನ ಬೀಜದ ಮಿನಿ ಕಿಟ್ ಕೊಟ್ಟು 2.30ಲಕ್ಷ ಮೇವಿನ ಬೀಜದ ಮಿನಿಕಿಟ್ಗಳನ್ನು ನೀಡಿ ಹಸಿರು ಮೇವು ಬೆಳೆಸಲಾಗುತ್ತಿದೆ.
ಈ ವರೆಗೆ 8ಲಕ್ಷ, 10ಲಕ್ಷ, 15ಲಕ್ಷ ಮೆಟ್ರಿಕ್ ಟನ್ ಹಸಿ ಹಲ್ಲು ಬೆಳೆಸಲಾಗುತ್ತಿದೆ ಎಂದು ಪಶುಪಾಲನೆ ಇಲಾಖೆಯ ಉಪನಿರ್ದೇಶಕ ಡಾ.ಎಲ್.ಪ್ರಕಾಶ್ ‘ಉದಯ ವಾಣಿ’ಗೆ ಮಾಹಿತಿ ನೀಡಿದರು.
ಚಿ.ನಿ.ಪುರುಷೋತ್ತಮ್