ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Team Udayavani, Apr 18, 2024, 8:11 PM IST
ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಉಳಿಯಾರಗೋಳಿ ಕೋತಲಕಟ್ಟೆಯಲ್ಲಿ ನಿಲ್ಲಿಸಿ ಹೋಗಿದ್ದ ಸ್ಕೂಟಿಯನ್ನು ಕಳ್ಳರು ಕದ್ದೊಯ್ದ ಘಟನೆ ಎ. 16ರಂದು ರಾತ್ರಿ ನಡೆದಿದೆ.
ಡೆಕೋರೇಷನ್ ಕೆಲಸ ಮಾಡಿಕೊಂಡಿರುವ ಉಳಿಯಾರಗೋಳಿ ನಿವಾಸಿ ರಂಜಿತ್ ತನ್ನ ಚಿಕ್ಕಮ್ಮನ ಮಗನ ಸ್ಕೂಟಿಯನ್ನು ಬಳಸುತ್ತಿದ್ದು ಎ. 16ರಂದು ರಾತ್ರಿ 10 ಗಂಟೆಗೆ ಸ್ಕೂಟಿಯನ್ನು ಹೆದ್ದಾರಿ ಬದಿಯಲ್ಲಿ ನಿಲ್ಲಿಸಿ ಮೆಹೆಂದಿ ಕಾರ್ಯಕ್ರಮಕ್ಕೆ ತೆರಳಿದ್ದರು. 11.30ರ ವೇಳೆಗೆ ಮೆಹೆಂದಿ ಕಾರ್ಯಕ್ರಮ ಮುಗಿಸಿ ಬಂದು ಮರಳಿದಾಗ ಸ್ಕೂಟಿ ನಾಪತ್ತೆಯಾಗಿತ್ತು.
ಹೋಗುವ ಗಡಿಬಿಡಿಯಲ್ಲಿ ಕೀಯನ್ನು ಸ್ಕೂಟಿಯಲ್ಲಿಯೇ ಬಿಟ್ಟು ಹೋಗಿದ್ದು ಅದರ ಮೂಲ ದಾಖಲಾತಿಗಳು ಕೂಡಾ ಸ್ಕೂಟಿಯಲ್ಲಿಯೇ ಇತ್ತು. ಕಳವಾದ ಸ್ಕೂಟಿಯ ಮೌಲ್ಯ 30,000/- ರೂಪಾಯಿಗಳಾಗಿರಬಹುದು ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.