ಕರಾವಳಿ ಜನತೆ ತಲೆತಗ್ಗಿಸುವಂತಾಗಿದೆ ಪ್ರಮೋದ್ ಮಧ್ವರಾಜ್
Team Udayavani, Jul 10, 2017, 2:35 AM IST
ಕಾಪು: ಒಬ್ಬರನ್ನೊಬ್ಬರು ದ್ವೇಷಿಸುವುದು, ಮತೀಯ ಭಾವನೆಯಿಂದ ನೋಡುವುದು, ಪರಸ್ಪರ ಹಲ್ಲೆ, ಹತ್ಯೆ ಇತ್ಯಾದಿ ಘಟನೆಗಳು ಬುದ್ಧಿವಂತರ ಜಿಲ್ಲೆಯೆಂಬ ಖ್ಯಾತಿಗಳಿಸಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಭೂಷಣವಲ್ಲ. ಕೇವಲ ಶೇ. 1ರಷ್ಟು ಮಂದಿಯಿಂದ ನಡೆಯುವ ಹಿಂಸಾ ಕೃತ್ಯಗಳಿಂದ ಕರಾವಳಿ ಜಿಲ್ಲೆಯ ಜನತೆ ತಲೆತಗ್ಗಿಸುವಂತಾಗಿರುವುದು ವಿಷಾದನೀಯ ಎಂದು ರಾಜ್ಯ ಯುವಜನ, ಕ್ರೀಡೆ, ಮೀನುಗಾರಿಕೆ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಶಂಕರಪುರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೋಮುಗಲಭೆ ರಾಜಕೀಯ ಕಾರಣದಿಂದಾಗಿ ನಡೆದರೂ ಮತೀಯ ಸಂಘರ್ಷದ ಕಾರಣಕ್ಕೆ ನಡೆದರೂ ದುರದೃಷ್ಟವೇ ಆಗಿದೆ. ಹಿಂದೂ ಧರ್ಮವಾಗಿರಲಿ, ಮುಸ್ಲಿಂ ಧರ್ಮವಾಗಿರಲಿ ಎರಡೂ ಧರ್ಮಗಳೂ ಹಿಂಸಾ ಚಾರಕ್ಕೆ ಆಸ್ಪದ ಕೊಡುವಂಥವಲ್ಲ. ಒಬ್ಬರನ್ನೊಬ್ಬರು ಹತ್ಯೆ ಮಾಡುವುದನ್ನು ಯಾವುದೇ ಧರ್ಮವೂ ಸಹಿಸಿಕೊಳ್ಳು ವುದು ಅಸಾಧ್ಯ ಎಂದರು.
ಅಭಿವೃದ್ಧಿಗೆ ಹೊಡೆತ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಅಮಾನವೀಯ ಕೃತ್ಯಗಳು ಆದಷ್ಟು ಶೀಘ್ರ ಹದ್ದುಬಸ್ತಿಗೆ ಬರುವಂತಾಗಬೇಕು. ಇಲ್ಲದೇ ಹೋದಲ್ಲಿ ಇದರಿಂದಾಗಿ ಕರಾವಳಿಯ ಅಭಿವೃದ್ಧಿಗೆ ಭಾರೀ ಹೊಡೆತ ಬೀಳಲಿದೆ. ಮತ್ತು ನಮ್ಮೆಲ್ಲರ ಅಭಿವೃದ್ಧಿ ಪರ ಚಿಂತನೆಗೂ ತೊಡಕುಂಟಾಗಲಿದೆ ಎಂದು ಪ್ರಮೋದ್ ತಿಳಿಸಿದ್ದಾರೆ.