ಬೆಳ್ಮಣ್ ದೇಗುಲ ರಸ್ತೆಯಲ್ಲಿ ಅಪಾಯಕಾರಿ ಹೊಂಡಗಳು!
ಕುಸಿಯುತ್ತಿರುವ ರಸ್ತೆ ; ವಾಹನಗಳ ಸಂಚಾರಕ್ಕೆ ಸಮಸ್ಯೆ
Team Udayavani, Sep 15, 2019, 5:15 AM IST
ವಿಶೇಷ ವರದಿ-ಬೆಳ್ಮಣ್: ಇಲ್ಲಿನ ದೇಗುಲದ ರಸ್ತೆ ನಿರ್ಮಾಣ ಗೊಂಡು ಇನ್ನೂ 3-4 ವರ್ಷ ಕಳೆದಿಲ್ಲವಾದರೂ ಅಲ್ಲಲ್ಲಿ ಕುಸಿದು ಬೃಹತ್ ಗಾತ್ರದ ಹೊಂಡಗಳು ನಿರ್ಮಾಣವಾಗಿ ನಿರಂತರ ಅಪಘಾತಕ್ಕೆ ಕಾರಣವಾಗಿದ್ದರೂ ಸಂಬಂಧಪಟ್ಟ ಇಲಾಖೆ ಮಾತ್ರ ಸ್ಪಂದಿಸದೇ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಬೆಳ್ಮಣ್ ಪೇಟೆಯಿಂದ ದೇಗುಲದವರೆಗೆ ಉತ್ತಮ ರಸ್ತೆಯನ್ನು ನಿರ್ಮಿಸಿ ರಸ್ತೆಯ ಬದಿಯಲ್ಲಿ ಇಂಟರ್ಲಾಕ್ಗಳನ್ನು ಅಳವಡಿಸಲಾಗಿತ್ತಾದರೂ ಕೆಲವೇ ದಿನಗಳಲ್ಲಿ ಕಳಪೆ ಕಾಮಗಾರಿ ಗೋಚರವಾಗಿದೆ. ಇದೀಗ ರಸ್ತೆಯೂ ಅಲ್ಲಲ್ಲಿ ಕುಸಿಯುತ್ತಿದ್ದು ಮತ್ತಷ್ಟು ಹೊಂಡಗಳು ನಿರ್ಮಾಣವಾಗುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.
ಈ ರಸ್ತೆ ನಿರ್ಮಾಣಗೊಂಡು ತಿಂಗಳು ಕಳೆಯುವು ದರೊಳಗೆ ರಸ್ತೆ ಅಲ್ಲಲ್ಲಿ ಕುಸಿಯತೊಡಗಿತ್ತಾದರೂ ಅದರ ನಿರ್ವಹಣೆಗೆ ಗುತ್ತಿಗೆದಾರರು ಮುಂದಾಗಿಲ್ಲ. ನಿರ್ಮಾಣದ ವೇಳೆಯೇ ಇಲ್ಲಿನ ಸೇತುವೆಯ ಬಳಿ ರಸ್ತೆಯು ಕುಸಿದಿತ್ತು. ಅದಕ್ಕೆ ತೇಪೆಯಷ್ಟೇ ಹಾಕಿ ಕೈತೊಳೆದುಕೊಂಡಿರುವ ಗುತ್ತಿಗೆದಾರರು ಮತ್ತೆ ಈ ಕಡೆ ಸುಳಿದಿಲ್ಲ ಎಂಬುದು ಗ್ರಾಮಸ್ಥರ ಆರೋಪ. ಹೆಚ್ಚಿನ ಅಪಾಯಗಳು ಸಂಭವಿಸುವ ಮುನ್ನ ಸ್ಥಳೀಯ ಬೆಳ್ಮಣ್ ಪಂಚಾಯತ್ ಆಡಳಿತ, ಜನಪ್ರತಿನಿಧಿಗಳು ಎಚ್ಚೆತ್ತಕೊಂಡು ರಸ್ತೆಯ ದುರಸ್ತಿಗೆ ಶೀಘ್ರ ಮುಂದಾಗ ಬೇಕೆಂಬುದು ಸ್ಥಳೀಯರ ಒಕ್ಕೊರಲ ಆಗ್ರಹ.
ಕಳಪೆ ಕಾಮಗಾರಿ
ರಸ್ತೆಯು ಕಳಪೆ ಕಾಮಗಾರಿಯಿಂದ ಕೂಡಿರುವ ಕಾರಣ ಅಲ್ಲಲ್ಲಿ ಕುಸಿದು ಹೊಂಡಗಳು ನಿರ್ಮಾಣವಾಗುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಕೂಡಲೇ ಸಂಬಂಧಿಸಿದ ಅ ಧಿಕಾರಿಗಳು ರಸ್ತೆಯ ರಿಪೇರಿಗೆ ಮುಂದಾಗಬೇಕು.
-ಪ್ರಶಾಂತ ಪೂಜಾರಿ,
ವಾಹನ ಚಾಲಕ
ಬೃಹತ್ ಹೊಂಡ
ರಸ್ತೆಯು ನಿರ್ಮಾಣಗೊಂಡ ಕೆಲವೇ ದಿನಗಳಲ್ಲಿ ರಸ್ತೆ ಕುಸಿತ ಕಂಡಿದೆ. ಇದೀಗ ದೇಗುಲದ ಸಮೀಪದ ರಸ್ತೆಯಲ್ಲಿಯೇ ಬೃಹತ್ ಗಾತ್ರದ ಹೊಂಡವೊಂದು ನಿರ್ಮಾಣಗೊಂಡು ವಾಹನ ಸವಾರರಿಗೆ ತೊಂದರೆಯನ್ನುಂಟು ಮಾಡುತ್ತಿದೆ.
-ಪ್ರದೀಪ, ಗ್ರಾಮಸ್ಥ
ಕ್ರಮ ಕೈಗೊಳ್ಳಲಾಗುವುದು
ಸಂಬಂಧಪಟ್ಟವರಿಗೆ ಕೂಡಲೇ ಮನವಿ ಮಾಡಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.
-ವಾರಿಜಾ, ಬೆಳ್ಮಣ್ ಗ್ರಾ.ಪಂ. ಅಧ್ಯಕ್ಷೆ