ಯಕ್ಷಗಾನ ಪ್ರಸಂಗಗಳ ಡಿಜಿಟಲೀಕರಣ’
Team Udayavani, Jun 23, 2019, 5:52 AM IST
ಉಡುಪಿ:ಪ್ರಸಂಗಗಳನ್ನು ಡಿಜಿಟಲೀಕರಣ ಮಾಡಿ ವೆಬ್ಸೈಟ್ಗಳಿಗೆ ಅಪ್ಲೋಡ್ ಮಾಡುವ ಕಾರ್ಯವನ್ನು ಶೀಘ್ರದಲ್ಲೇ ನಡೆಸಲಾಗುವುದು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ| ಎಂ.ಎ. ಹೆಗಡೆ ತಿಳಿಸಿದ್ದಾರೆ.
ಶನಿವಾರ ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ಉಡುಪಿ ಇಂದ್ರಾಳಿಯ ಯಕ್ಷಗಾನ ಕೇಂದ್ರದ ಸಹಭಾಗಿತ್ವದಲ್ಲಿ ಇಲ್ಲಿನ ಯಕ್ಷಗಾನ ಕೇಂದ್ರದಲ್ಲಿ ಅಂಬಾತನಯ ಮುದ್ರಾಡಿ ಅವರ ‘ಪಂಚಭೂತ ಪ್ರಪಂಚ’ ಮತ್ತು ಕಂದಾವರ ರಘುರಾಮ ಶೆಟ್ಟಿ ಅವರ ‘ಪ್ರಸಂಗ ಪಂಚಮಿ’ ಯಕ್ಷಗಾನ ಪ್ರಸಂಗಗಳ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಕ್ಷಗಾನ ಪ್ರಸಂಗ ಪುಸ್ತಕಗಳನ್ನು ಕೊಂಡು ಓದುವವರ ಸಂಖ್ಯೆ ತೀರಾ ಕಡಿಮೆ. ಆದಾಗ್ಯೂ ಪ್ರಸಂಗಗಳು ಜನರಿಗೆ ತಲುಪಬೇಕೆಂಬ ಉದ್ದೇಶ ದಿಂದ ಡಿಜಿಟಲೀಕರಣ ಮಾಡಲಾಗು ವುದು. ಇದನ್ನು ಆಸಕ್ತರು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳ ಬಹುದು ಎಂದು ಹೇಳಿದರು.
ಪ್ರಸಂಗ ಕೃತಿಗಳನ್ನು ಲೋಕಾರ್ಪಣೆಮಾಡಿದ ಯಕ್ಷಗಾನ ಕೇಂದ್ರದ ಸಂಯೋಜಕ ಪ್ರೊ| ವರದೇಶ ಹಿರೇಗಂಗೆ ಮಾತನಾಡಿ, ‘ಭಾರತೀಯ ರಿಗೆ ಇತಿಹಾಸದ ಬಗ್ಗೆ ಕಾಳಜಿ ಇಲ್ಲ ಎಂಬ ಟೀಕೆಗಳು ಅರ್ಥಹೀನ. ಭಾರತೀಯರು ಪುರಾಣಗಳ ಮೂಲಕವೇ ಐತಿಹಾಸಿಕ ಸತ್ಯವನ್ನು ಗ್ರಹಿಸು ತ್ತಾರೆ ಎಂಬುದು ಅನೇಕ ವಿದ್ವಾಂಸರ ಅಭಿಮತವಾಗಿದೆ’ ಎಂದರು.
‘ಪ್ರಸಂಗ ಪಂಚಮಿ’ ಕೃತಿ ಪರಿಚಯಿಸಿದ ಹಂಗಾರಕಟ್ಟೆ ಯಕ್ಷಗಾನ ಕೇಂದ್ರದ ಪ್ರಾಚಾರ್ಯ ಗುಂಡ್ಮಿ ಸದಾನಂದ ಐತಾಳ ಅವರು ಒಳ್ಳೆಯ ಪ್ರಸಂಗವೆನಿಸ ಬೇಕಾದರೆ ಅದರ ಕಥಾ ಹಂದರ ಗಟ್ಟಿಯಾಗಿರಬೇಕು, ಭಾಷಾ ಸೌಂದರ್ಯವಿರಬೇಕು, ಪ್ರಸ್ತುತವಾಗಿ ರಬೇಕು’ ಎಂದರು.
ಪರಿಸರ ಕಾಳಜಿಯ ಪ್ರಸಂಗ
ಕೃತಿ ಪರಿಚಯ ಮಾಡಿದ ಯಕ್ಷಗಾನವಿಮರ್ಶಕ ಕೆ.ಎಂ. ರಾಘವನಂಬಿಯಾರ್ ಅವರು, ‘ಪಂಚಭೂತಪ್ರಪಂಚ’ ಪ್ರಸಂಗವು ಪರಿಸರ ಮಾಲಿನ್ಯ ಕುರಿತು ವಿಶಿಷ್ಟ ಪ್ರಯೋಗವ ನ್ನೊಳಗೊಂಡಿದೆ ಎಂದರು.
ಅಂಬಾತನಯ ಮುದ್ರಾಡಿ, ಕಂದಾವರ ರಘುರಾಮ ಶೆಟ್ಟಿ, ಡಾ| ಭಾಸ್ಕರಾನಂದ ಕುಮಾರ್, ಯಕ್ಷಗಾನ ಅಕಾಡೆಮಿಯ ಸದಸ್ಯ ರಾಜಶೇಖರ ಹೆಬ್ಟಾರ್, ಮಾಜಿ ಸದಸ್ಯ ಪಿ. ಕಿಶನ್ ಹೆಗ್ಡೆ ಉಪಸ್ಥಿತರಿದ್ದರು. ರಿಜಿಸ್ಟ್ರಾರ್ ಎಚ್. ಶಿವರುದ್ರಪ್ಪ ಸ್ವಾಗತಿಸಿದರು.