ಸ್ಥಳೀಯರು ವಿರಳ; ಹೊರಜಿಲ್ಲೆ ವಿದ್ಯಾರ್ಥಿಗಳೇ ಅಧಿಕ!
ಬ್ರಹ್ಮಾವರದಲ್ಲಿದೆ ಅತ್ಯಾಧುನಿಕ ಕೃಷಿ ಡಿಪ್ಲೊಮಾ ಕಾಲೇಜು
Team Udayavani, Sep 25, 2019, 5:15 AM IST
ಉಡುಪಿ: ಕೃಷಿಕರ ಮಕ್ಕಳು ವೈಜ್ಞಾನಿಕ ಕೃಷಿ ಅಧ್ಯಯನ ನಡೆಸಿ ತಮ್ಮ ಜಮೀನಿನಲ್ಲಿ ಅದನ್ನು ಅಳವಡಿಸಿ ಉತ್ತಮ ಇಳುವರಿ ಪಡೆ ಯುವಂತಾಗಬೇಕು ಎಂಬ ಉದ್ದೇಶದಿಂದ ಸ್ಥಾಪಿಸಲಾದ ಹೈಟೆಕ್ ಬ್ರಹ್ಮಾವರ ಕೃಷಿ ಡಿಪ್ಲೊಮಾ ಮಹಾ ವಿದ್ಯಾಲಯದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಹೊರಜಿಲ್ಲೆಗಳ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆ ಯಲ್ಲಿ ಸೇರ್ಪಡೆಯಾಗಿದ್ದಾರೆ. ರಾಜ್ಯ ಸರಕಾರವು 2014ರಲ್ಲಿ ಕರಾವಳಿಯ ವಿದ್ಯಾರ್ಥಿಗಳಿಗೆಂದು 4.8 ಕೋ.ರೂ. ವೆಚ್ಚದಲ್ಲಿ ಕೃಷಿ ಡಿಪ್ಲೊಮಾ ಮಹಾವಿದ್ಯಾಲಯ ಸ್ಥಾಪಿಸಿತ್ತು. 2 ವರ್ಷಗಳ ಕೋರ್ಸ್ ಇದಾಗಿದ್ದು, ವಿದ್ಯಾರ್ಥಿಗಳ ಬೇಡಿಕೆಗನುಗುಣವಾಗಿ ವರ್ಷದಿಂದ ವರ್ಷಕ್ಕೆ ಸೀಟುಗಳನ್ನು ಏರಿಸಲಾಗುತ್ತಿದೆ.
ಸುಸಜ್ಜಿತ ಕಟ್ಟಡ
ಕಾಲೇಜು 35 ಎಕರೆ ವಿಶಾಲ ಜಾಗದಲ್ಲಿದ್ದು, ಪ್ರಾಯೋಗಿಕ ಕೃಷಿ, ತೋಟ ಗಾರಿಕೆ ಚಟುವಟಿಕೆಗೆ ಪೂರಕವಾಗಿದೆ. ಬೃಹತ್ ಕಟ್ಟಡ, ಸುಸಜ್ಜಿತ 2 ತರಗತಿ ಕೋಣೆಗಳು, ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್, ಕೃಷಿ ಲ್ಯಾಬ್ಗಳನ್ನೊಳಗೊಂಡಿದೆ. ಬಾಲಕರ ಹಾಸ್ಟೆಲ್ ಇದ್ದು, ಬಾಲಕಿಯರ ಹಾಸ್ಟೆಲ್ ನಿರ್ಮಾಣ ಹಂತದಲ್ಲಿದೆ.
ವಿಜ್ಞಾನಿಗಳಿಂದ ಬೋಧನೆ
ಬ್ರಹ್ಮಾವರ ಕೃಷಿ ಕೇಂದ್ರದಲ್ಲಿ ಬೇಸಾಯಶಾಸ್ತ್ರ, ತಳಿ ವಿಜ್ಞಾನ, ಕೀಟ ಶಾಸ್ತ್ರ, ರೋಗ ಶಾಸ್ತ್ರ, ಕೃಷಿ ಯಾಂತ್ರೀಕೃತ ವಿಷಯಗಳಿಗೆ ಸಂಬಂ ಧಿಸಿ 25 ವಿಜ್ಞಾನಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಅವರಿಂದಲೇ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಪಾಠ-ಪ್ರವಚನ ನಡೆಯುತ್ತವೆ.
ಹೊರಜಿಲ್ಲೆ ವಿದ್ಯಾರ್ಥಿಗಳ ಕೃಷಿ ಒಲವು
ಪ್ರಸಕ್ತ ವರ್ಷ ಸರಕಾರ 40 ಸೀಟುಗಳನ್ನು ಮಂಜೂರು ಮಾಡಿದ್ದು, ಎಲ್ಲವೂ ಭರ್ತಿಯಾಗಿವೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಂದ ಕೇವಲ ಇಬ್ಬರು ವಿದ್ಯಾರ್ಥಿ
ಗಳಿದ್ದಾರೆ. ಇಷ್ಟು ವರ್ಷಗಳಲ್ಲಿ ಇಲ್ಲಿ ಪದವಿ ಪಡೆದ ಕರಾವಳಿಯ ವಿದಾರ್ಥಿಗಳು ಕೇವಲ 7 ಮಂದಿ. ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳ ವಿದ್ಯಾರ್ಥಿಗಳು ವರ್ಷದಿಂದ ವರ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದಾರೆ.
ಮೂರು ವರ್ಷಗಳಲ್ಲಿ ಒಟ್ಟು 150 ವಿದ್ಯಾರ್ಥಿಗಳು ಯಶಸ್ವಿಯಾಗಿ ತರಬೇತಿ ಪಡೆದು ಹೊರಹೋಗಿದ್ದಾರೆ. ಪ್ರಸಕ್ತ ಸಾಲಿನ ಮೊದಲ ವರ್ಷದಲ್ಲಿ 37 ಮಂದಿ ಇದ್ದು; ಮೂವರು ಕರಾವಳಿಗರು. ದ್ವಿತೀಯ ವರ್ಷದ ತರಗತಿಯಲ್ಲಿ 35 ಮಂದಿ ಇದ್ದು; ನಾಲ್ವರು ಕರಾವಳಿಗರು. ಐದು ವರ್ಷಗಳಲ್ಲಿ ತರಬೇತಿ ಪಡೆದ ಕರಾವಳಿಗರು ಕೇವಲ 11 ಮಂದಿ!
ಬ್ರಹ್ಮಾವರ ಕೃಷಿ ಡಿಪ್ಲೊಮಾ ಕಾಲೇಜಿನಲ್ಲಿ ಪ್ರತಿವರ್ಷ 35 ವಿದ್ಯಾರ್ಥಿಗಳು ಅಧ್ಯಯನ ಮುಗಿಸುತ್ತಿದ್ದಾರೆ. ಇವರಲ್ಲಿ ಸುಮಾರು 10 ಮಂದಿ ಬಿಎಸ್ಸಿ ಅಗ್ರಿಕಲ್ಚರ್ ಪದವಿ ಪಡೆಯಲು ಸೇರ್ಪಡೆಯಾಗುತ್ತಿದ್ದಾರೆ.
– ಡಾ| ಸುಧೀರ್ ಕಾಮತ್, ಪ್ರಾಂಶುಪಾಲರು
– ತೃಪ್ತಿ ಕುಮ್ರಗೋಡು