ಚಾಲಕನಿಗೆ ಹೃದಯಾಘಾತ ಅಂಗಡಿಗೆ ನುಗ್ಗಿದ ಬಸ್: ಚಾಲಕ ಸಾವು
Team Udayavani, Mar 1, 2017, 2:50 PM IST
ಹೆಬ್ರಿ: ತೀರ್ಥಹಳ್ಳಿ ತಾಲೂಕು ವ್ಯಾಪ್ತಿಯ ಆಗುಂಬೆ ಗುಡ್ಡೆಕೇರಿ ಬಳಿ ಮಂಗಳವಾರ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ಸೊಂದು ರಸ್ತೆ ಬದಿಯ ಅಂಗಡಿಗೆ ನುಗ್ಗಿದ್ದು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 19 ಮಂದಿ ಸಣ್ಣಪುಟ್ಟ ಗಾಯಗೊಂಡಿದ್ದಾರೆ.
ಬಸ್ ಉಡುಪಿಯಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಚಾಲಕ ತೀರ್ಥಹಳ್ಳಿ ತಾಲೂಕಿನ ಕೂಳೂರಿನ ಶ್ರೀಕಂಠ (55) ಮೃತಪಟ್ಟವರು. ಗಾಯಾಳು ಪ್ರಯಾಣಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ವೇಗವಾಗಿ ಚಲಿಸುತ್ತಿದ್ದ ಬಸ್ ಗುಡ್ಡೆಕೇರಿ ಬಳಿಯ ಪದ್ಮನಾಭ ಮಂಜರ್ ಅವರ ಅಂಗಡಿಗೆ ನುಗ್ಗಿ ಬಳಿಕ ಪಕ್ಕದಲ್ಲಿರುವ ಜೆ.ಎಸ್. ಹೆಗ್ಡೆ ಅವರ ಮನೆಯ ಕಾಂಪೌಂಡ್ಗೆ ನುಗ್ಗಿದೆ. ಅಂಗಡಿ ಸಂಪೂರ್ಣ ಜಖಂಗೊಂಡಿದೆ.
ಅಪಘಾತದ ತೀವ್ರತೆಯಿಂದ ಬಸ್ ಸಂಪೂರ್ಣ ಜಖಂಗೊಂಡಿದೆ. ಪಕ್ಕದಲ್ಲಿ ನಿಲ್ಲಿಸಿದ್ದ ವೆಂಕಟೇಶ ಅವರ ಬೈಕ್ ಸೇರಿದಂತೆ ಹಲವಾರು ಸಾಮಗ್ರಿಗಳು ಸಂಪೂರ್ಣ ಹಾನಿಗೀಡಾಗಿವೆ. ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾವಿನ ಮೂನ್ಸೂಚನೆ
ಚಾಲಕ ಶ್ರೀಕಂಠ ಅವರು ಮಧ್ಯಾಹ್ನ ಆಗುಂಬೆಯ ಹೊಟೇಲೊಂದರಲ್ಲಿ ಊಟ ಮಾಡುತ್ತಿದ್ದಾಗ ಎದೆನೋವು ಎಂದು ಊಟ ಬಿಟ್ಟಿದ್ದರು. ಎದೆ ನೋವಿನ ತೀವ್ರತೆಯಿಂದ ಹೃದಯಾಘಾತವಾಗಿ ಅಪಘಾತ ಸಂಭವಿಸಿರಬಹುದು ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.