ಗ್ರಾಮಸ್ಥರಿಂದ ಚುನಾವಣ ಬಹಿಷ್ಕಾರ, ಪ್ರತಿಭಟನೆ
Team Udayavani, Apr 11, 2019, 6:30 AM IST
ಹೆಬ್ರಿ: ನಾಡಾ³ಲು ಗ್ರಾಮದಲ್ಲಿ ಕಳೆದ 20 ವರ್ಷಗಳಿಂದ ನಡೆಯದ ರಸ್ತೆ ದುರಸ್ತಿ ಮತ್ತು ಇತರ ಮೂಲ ಸೌಕರ್ಯಗಳಿಲ್ಲದಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶಗೊಂಡಿದ್ದು ಮೇಗದ್ದೆ, ಕೂಡ್ಲು, ಅಜೊjàಳ್ಳಿಯ ಸುಮಾರು 620ಕ್ಕೂ ಹೆಚ್ಚು ಮಂದಿ ಎ. 9ರಂದು ಪ್ರತಿಭಟನೆ ನಡೆಸುವ ಮೂಲಕ ಚುನಾವಣೆ ಬಹಿಷ್ಕಾರ ಮಾಡುವುದಾಗಿ ತಿಳಿಸಿದ್ದಾರೆ.
ನಮಗೆ ರಸ್ತೆ, ನೀರು, ತುರ್ತು ವೈದ್ಯಕೀಯ ಸೇವೆ, ದೂರವಾಣಿ ಸಂಪರ್ಕ, ಸರಕಾರಿ ಬಸ್ ಸೌಕರ್ಯಗಳು ಇಲ್ಲ. ಚುನಾವಣೆಗೂ ಮುನ್ನ ರಾಜಕಾರಣಿಗಳು ಭರವಸೆ ನೀಡಿ ಗೆದ್ದ ಬಳಿಕ ಇತ್ತ ಮುಖ ಮಾಡದೇ ಈ ಭಾಗವನ್ನು ಕಡೆಗಣಿಸಿದ್ದಾರೆ. ಸೀತಾನದಿ, ಕೂಡ್ಲು ಭಾಗದಲ್ಲಿ ಕಡಿಮೆ ಮತದಾರರು ಇರುವುದರಿಂದ ಈ ಭಾಗಕ್ಕೆ ಮಂಜೂರಾದ ಅನುದಾನವನ್ನು ಬೇರೆಡೆ ವರ್ಗಾಯಿಸಿ ಈ ಭಾಗದ ಜನತೆಗೆ ಅನ್ಯಾಯ ಎಸಗುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಡಿಸಿ ಕಚೇರಿ ಎದುರು ಪ್ರತಿಭಟನೆ ಎಚ್ಚರಿಕೆ
ಈ ಭಾಗದ ಮೂಲಸಮಸ್ಯೆಗಳ ಬಗ್ಗೆ ಹಲವು ಬಾರಿ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇದೇ ರೀತಿ ಮುಂದುವರಿದರೆ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ನಾಗರಿಕ ಸೇವಾ ಸಮಿತಿಯ ಕಾರ್ಯದರ್ಶಿ ರಮೇಶ್ ಅವರು ಹೇಳಿದರು.
ಗ್ರಾಮಸ್ಥರಾದ ನಾರಾಯಣ ಭಟ್, ನವೀನ್ ಶೆಟ್ಟಿ, ಬಾಬು ಶೆಟ್ಟಿ, ಸುಜಾತಾ ಹೆಗ್ಡೆ, ಪ್ರಗತಿಪರ ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ಕೆರೆಬೆಟ್ಟು ಸಂಜೀವ ಶೆಟ್ಟಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಜನಪ್ರತಿನಿಧಿಗಳ ಮೌನ
ಊರಿನ ಪ್ರಸಿದ್ಧ ಪ್ರವಾಸಿತಾಣವಾದ ಕೂಡ್ಲು ಜಲಪಾತದಲ್ಲಿ ವರ್ಷಕ್ಕೆ 10 ಲಕ್ಷ ರೂ. ಆದಾಯ ಬರುತ್ತದೆ. ಇದನ್ನು ನಮ್ಮೂರಿನ ಅಭಿವೃದ್ಧಿಗೆ ಬಳಸಿದರೆ ಸರಕಾರದ ಯಾವುದೇ ಅನುದಾನದ ಅಗತ್ಯವಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳು ಕೂಡ ಮೌನವಾಗಿದ್ದಾರೆ ಎಂದು ಗುಲ್ಕಾಡು ಭಾಸ್ಕರ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.