ಗಂಗೊಳ್ಳಿ : ಇನ್ನೂ ಆರಂಭವಾಗದ ನಾಡದೋಣಿ ಮೀನುಗಾರಿಕೆ
Team Udayavani, Jul 9, 2018, 6:00 AM IST
ಗಂಗೊಳ್ಳಿ: ಮಳೆಗಾಲ ಆರಂಭವಾಗಿ ಒಂದು ತಿಂಗಳು ಕಳೆದರೂ, ಜೂನ್ನಲ್ಲಿ ಶುರುವಾಗಬೇಕಾದ ಸಾಂಪ್ರದಾಯಿಕ ಮೀನುಗಾರಿಕೆ ಕುಂದಾಪುರದ ಕೋಡಿ, ಗಂಗೊಳ್ಳಿ ಭಾಗದಲ್ಲಿ ಇನ್ನೂ ಕೂಡ ಪ್ರಾರಂಭವಾಗದೇ, ನಾಡದೋಣಿಗಳು ದಡದಲ್ಲೇ ಲಂಗರು ಹಾಕಿವೆ.
ಸಾಮಾನ್ಯವಾಗಿ ಮಳೆಗಾಲ ಪ್ರಾರಂಭವಾದ ಅನಂತರ ಅಂದರೆ ಜೂನ್ ಮೊದಲ ವಾರದಿಂದ ನಾಡದೋಣಿಗಳು ಸಮುದ್ರಕ್ಕೆ ಇಳಿಯುತ್ತವೆ. ಆದರೆ ಪೂರಕವಾದ ವಾತಾವರಣವಿಲ್ಲದ ಕಾರಣದಿಂದ ನಾಡದೋಣಿ ಮೀನುಗಾರರು ಕಡಲಿಗಿಳಿಯುತ್ತಿಲ್ಲ.
ಜೂನ್ನಲ್ಲಿ ಸುರಿದ ಭಾರೀ ಗಾಳಿ, ಮಳೆಗೆ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಈಗಲೂ ಎಲ್ಲೆಡೆ ಉತ್ತಮ ಮಳೆಯಾಗುತ್ತಿರುವುದರಿಂದ ಮೀನುಗಾರರಿಗೆ ಕಡಲಿಗಿಳಿಯಲು ಸಾಧ್ಯವಾಗುತ್ತಿಲ್ಲ. ಮಲ್ಪೆಯಲ್ಲಿ ಈಗಾಗಲೇ ನಾಡದೋಣಿಗಳು ಸಮುದ್ರಕ್ಕೆ ಇಳಿದಿದ್ದರೂ, ಸಾಕಷ್ಟು ಪ್ರಮಾಣದಲ್ಲಿ ಮೀನುಗಳು ಸರಿಯಾಗಿ ಸಿಕ್ಕಿಲ್ಲ ಎನ್ನುತ್ತಾರೆ ಮೀನುಗಾರರು.
ತೂಫಾನ್ ಎದ್ದಿಲ್ಲ
ಕಡಲಾಳದಲ್ಲಿ ತೂಫಾನ್ ಎದ್ದ ಬಳಿಕ ಕಡಲು ಪ್ರಕ್ಷುಬ್ಧಗೊಳ್ಳುತ್ತವೆ. ಇದರಿಂದ ನದಿ, ಹೊಳೆಗಳ ನೀರು, ಅದರೊಂದಿಗೆ ತ್ಯಾಜ್ಯವೆಲ್ಲ ಸಮುದ್ರಕ್ಕೆ ಸೇರುವುದರಿಂದ ಆಹಾರಕ್ಕಾಗಿ ವಿವಿಧ ಜಾತಿಯ ಮೀನುಗಳು ಕಡಲ ತೀರದತ್ತ ಧಾವಿಸುತ್ತವೆ. ಆದರೆ ಜೂನ್ನಲ್ಲಿ ಹಾಗೂ ಈಗ ಉತ್ತಮ ಮಳೆಯಾಗಿದ್ದರೂ, ಕೂಡ ತೂಫಾನ್ ಏಳುವಷ್ಟು ಮಟ್ಟಿಗೆ ಮಳೆಯಾಗಿಲ್ಲ. ತೂಫಾನ್ ಏಳದೇ ಮೀನುಗಾರರು ಕಡಲಿಗಿಳಿದರೂ, ಅದರಿಂದ ಹೇರಳವಾಗಿ ಮೀನುಗಳು ಸಿಗುವುದಿಲ್ಲ.
ಗಂಗೊಳ್ಳಿಯಲ್ಲಿ ಉಪ್ಪುಂದ, ನಾವುಂದ, ಮರವಂತೆ, ಶಿರೂರು, ಗಂಗೊಳ್ಳಿ, ಕೋಡಿ ಭಾಗದ ಸುಮಾರು 600 ನಾಡದೋಣಿಗಳಿವೆ. ಕಳೆದ ಮೀನುಗಾರಿಕಾ ಋತು ಯಾಂತ್ರಿಕ ಮೀನುಗಾರಿಕೆಗೆ ಶುಭ ತಂದಿರಲಿಲ್ಲ. ಈಗ ನಾಡದೋಣಿ ಮೀನುಗಾರರಿಗೂ ಲಾಭದಾಯಕವಾಗುವ ಲಕ್ಷಣ ತೋರುತ್ತಿಲ್ಲ.
ಚಟ್ಲಿ ಸೀಸನ್ ಶುರುವಾಗಿಲ್ಲ
ನಾಡದೋಣಿಗಳಿಗೆ ವಿವಿಧ ತಳಿಯ ಮೀನುಗಳಿಗಿಂತ ಚಟ್ಲಿ (ಸಿಗಡಿ) ಸಿಕ್ಕರೆ ಹೆಚ್ಚು ಲಾಭ. ಕಡಲಿಗಿಳಿದ ಎಲ್ಲ ದೋಣಿಗಳಿಗೆ ಮೀನು ಸಿಕ್ಕರೆ ಆಗ ಮೀನಿನ ದರ ಕುಸಿತಗೊಂಡು, ಹೆಚ್ಚೇನೂ ಲಾಭವಾಗುವುದಿಲ್ಲ. ಆದರೆ ಮೀನಿನ ಜತೆ ಚಟ್ಲಿ(ಈಗ ಕೆಜಿಗೆ 450 ರೂ. ಇದೆ) ಸಿಕ್ಕರೆ ಅದರಿಂದ ಲಾಭ ಹೆಚ್ಚು. ಅದಕ್ಕಿರುವ ಬೆಲೆ ಹಾಗೂ ಬೇಡಿಕೆ ಯಾವತ್ತೂ ಕಡಿಮೆಯಾಗುವುದಿಲ್ಲ.
ಲಾಭಕ್ಕಿಂತ ನಷ್ಟವೇ ಜಾಸ್ತಿ
ನಾಡದೋಣಿಯಲ್ಲಿ 1 ಜೋಡು (3 ದೋಣಿಗಳಿರುತ್ತವೆ) ನಲ್ಲಿ ತಲಾ 10 ಮಂದಿಯಂತೆ 30 ಜನ ಇರುತ್ತಾರೆ. ಸುಮಾರು 15 ಸಾವಿರ ರೂ. ಖರ್ಚಾಗುತ್ತದೆ. ಆದರೆ ಈಗ ನಾವು ಕಡಲಿಗಳಿದರೆ 10 ಸಾವಿರ ರೂ. ಕೂಡ ಸಿಗುವುದಿಲ್ಲ. ಇದರಿಂದ ಮೀನುಗಾರಿಕೆ ನಡೆಸಿದರೂ, ನಮಗೇನೂ ಲಾಭ ಸಿಗುವುದಿಲ್ಲ.
– ಗೋಪಾಲ ಖಾರ್ವಿ, ಕೋಡಿ
ಜು. 15ರ ಅನಂತರ ಪ್ರಾರಂಭ
ಈಗ ತೂಫಾನ್ ಎದ್ದಿದ್ದು, ಅದು ಶಾಂತವಾದ ನಂತರ ನಾಡದೋಣಿಗಳು ಕಡಲಿಗೆ ಇಳಿಯಬಹುದು. ಸುಮಾರು ಜು. 15 ರ ವೇಳೆಗೆ ನಾಡದೋಣಿ ಮೀನುಗಾರಿಕೆ ಪ್ರಾರಂಭವಾಗಬಹುದು. ಮಲ್ಪೆಯಲ್ಲಿ ಹೋಗಿದ್ದರೂ, ಅಷ್ಟೇನೂ ಮೀನು ಸಿಕ್ಕಿಲ್ಲ.
– ಮಂಜು ಬಿಲ್ಲವ,ಗಂಗೊಳ್ಳಿ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ
– ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಕಾಂಗ್ರೆಸ್ಸಿನಿಂದ ಬೃಹತ್ ಪರಿವರ್ತನಾ ರ್ಯಾಲಿ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ