ಗೊದ್ದನಕಟ್ಟೆ ಶ್ರೀರಾಮ ಭಜನ ಮಂಡಳಿ ಸುವರ್ಣ ಸಂಭ್ರಮ
ಶ್ರೀನಿವಾಸ ಕಲ್ಯಾಣೋತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮ
Team Udayavani, Jan 4, 2024, 6:02 PM IST
ಉಡುಪಿ: ಚೇರ್ಕಾಡಿಯ ಗೊದ್ದನಕಟ್ಟೆ ಶ್ರೀರಾಮ ಭಜನ ಮಂಡಳಿಯ ಸುವರ್ಣ ಸಂಭ್ರಮಾಚರಣೆ ಪ್ರಯುಕ್ತ ಜ. 5ರಿಂದ 14ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
ಜ. 5ರಂದು ಕನ್ನಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ಪೇತ್ರಿ ಮಾರ್ಗವಾಗಿ ಶೋಭಾಯಾತ್ರೆಯಲ್ಲಿ ನಂದಾದೀಪ ಮತ್ತು ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ. ಅದೇ ದಿನ ಸಂಜೆ 7.30ಕ್ಕೆ ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಪುನರ್ ನವೀಕರಣಗೊಂಡ ಭವ್ಯ ಮಂದಿರ, ಅಶ್ವತ್ಥಕಟ್ಟೆಯನ್ನು ರಾಮ ಜನ್ಮಭೂಮಿ ಅಯೋಧ್ಯೆಯಿಂದ ತಂದ ಮೃತ್ತಿಕೆಯನ್ನು ಸಮರ್ಪಿಸಿ ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ.
ಧಾರ್ಮಿಕ ಸಭೆಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್ಪಾಲ್ ಎ. ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಕೆ. ರಘುಪತಿ ಭಟ್, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಚೇರ್ಕಾಡಿ ಗ್ರಾ.ಪಂ. ಅಧ್ಯಕ್ಷ ನಾರಾಯಣ ನಾಯ್ಕ, ಕನ್ನಾರು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಧನಂಜಯ ಅಮೀನ್ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಶ್ರೀನಿವಾಸ ಕಲ್ಯಾಣ, ಸಪ್ತೋತ್ಸವ
ಜ. 6ರ ಸಂಜೆ ಶ್ರೀವಾರಿ ಫೌಂಡೇಶನ್ ಬೆಂಗಳೂರಿನ ಎಸ್. ವೆಂಕಟೇಶ ಮೂರ್ತಿ ಇವರ ನೇತೃತ್ವದಲ್ಲಿ
ಶ್ರೀದೇವಿ, ಭೂದೇವಿ ಸಹಿತ ವೈಭವದ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ. ಜ. 7ರಿಂದ 12ರ ವರೆಗೆ ನಿತ್ಯ ಭಜನೆ, ಜ. 13ರ ಬೆಳಗ್ಗೆ 9ರಿಂದ ಮರುದಿನ ಬೆಳಗ್ಗೆ 6ರ ವರೆಗೆ ಭಜನ ಸಪ್ತೋತ್ಸವ ಸಂಪನ್ನಗೊಳ್ಳಲಿದೆ.