ಇಂಧನ ಇಲಾಖೆಯ ಐತಿಹಾಸಿಕ ನಿರ್ಧಾರ: ಸಚಿವ ಸುನಿಲ್ ಕುಮಾರ್
ಬೆಂಗಳೂರು ನಗರದ 5 ಲಕ್ಷ ಮಂದಿಗೆ ಉಚಿತ ವಿದ್ಯುತ್ ಸಂಪರ್ಕ
Team Udayavani, Jul 9, 2022, 2:32 AM IST
ಕಾರ್ಕಳ: ಬೆಂಗಳೂರು ನಗರ ಪ್ರದೇಶದಲ್ಲಿ 5 ಲಕ್ಷ ಮಂದಿಗೆ ವಿದ್ಯುತ್ ಸಂಪರ್ಕವಿರಲಿಲ್ಲ. ಅವರಿಗೂ ಸಂಪರ್ಕ ಪಡೆಯಲು ರೇಶನ್, ಆಧಾರ್ ಕಾರ್ಡ್ ಸಾಕು ಎನ್ನುವ ಹೊಸ ಕಾನೂನು ರೂಪಿಸಿ ಸಂಪರ್ಕ ನೀಡುವಂತಹ ತೀರ್ಮಾನವನ್ನು ಇಂಧನ ಇಲಾಖೆ ತೆಗೆದುಕೊಂಡಿದೆ. ಇದು ಇಂಧನ ಇಲಾಖೆಯ ಐತಿಹಾಸಿಕ ನಿರ್ಧಾರ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ಕಾರ್ಕಳದಲ್ಲಿ ಪರಿಶಿಷ್ಟ ಜಾತಿ, ಪಂಗಡದವರಿಗೆ ನೀಡುವ 75 ಯೂನಿಟ್ ಉಚಿತ ಬೆಳಕು ಯೋಜನೆಯಲ್ಲಿ ದಾಖಲೆ ಪಡೆದುಕೊಳ್ಳುವ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂಧನ ಇಲಾಖೆ ಒಂದು ವರ್ಷದಲ್ಲಿ ಹೊಸ ಯೋಜನೆಗಳನ್ನು ಬೇರೆ ಬೇರೆ ಹಂತದಲ್ಲಿ ಬಡವರಿಗಾಗಿ ಜಾರಿಗೆ ತಂದಿದೆ. ಬೆಳಕು ಯೋಜನೆಯಲ್ಲಿ ಬೆಳಕು ಇಲ್ಲದ ಮನೆಗಳಿಗೆ ಸ್ಥಳಿಯಾಡಳಿತ ನೀಡುವ ಎನ್ಒಸಿ ರದ್ದು ಮಾಡಿ ಹೊಂದಿರುವ ದಾಖಲೆಗಳನ್ನು ಆಧಾರವಾಗಿಸಿ ರಾಜ್ಯದಲ್ಲಿ ಇದುವರೆಗೆ 4 ಲಕ್ಷ ಮನೆಗಳಿಗೆ ಉಚಿತ ಸಂಪರ್ಕ ಕಲ್ಪಿಸಿದ್ದೇವೆ ಎಂದರು.
ಬೆಂಗಳೂರಿನ ನಗರದಲ್ಲಿ 5 ಲಕ್ಷ ಮಂದಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕ ಇಲ್ಲ ಎಂದರೆ ನಂಬಬಹುದು. ನಗರದಲ್ಲಿ ಇಷ್ಟೊಂದು ಮಂದಿ ವಿದ್ಯುತ್ ಸಂಪರ್ಕದಿಂದ ವಂಚಿತರಾಗಿದ್ದಾರೆ ಎಂದರೆ ನಂಬಲಾರ್ಹವಾಗುತ್ತಿರಲಿಲ್ಲ. ಅಚ್ಚರಿಯಾಗಿ ಕಾಡಿತ್ತು. ಅವರೆಲ್ಲರಿಗೂ ಸಂಪರ್ಕ ನೀಡುತ್ತಿದ್ದೇವೆ ಎಂದರು.
ಪರಿಶಿಷ್ಟ ಜಾತಿ ಪಂಗಡದ ಕುಟುಂಬಗಳಿಗೆ 75 ಯುನಿಟ್ ಉಚಿತ
ವಿದ್ಯುತ್ ಕೊಡುವ ಮೂಲಕ ಬಡವರ ಮನೆಯ ಶಾಲಾ ಮಕ್ಕಳಿಗೆ,ಮಹಿಳೆಯರಿಗೆ ನೆರವಾಗಿದ್ದೇವೆ. ಇದ ರಿಂದ ರಾಜ್ಯದ 50 ಲಕ್ಷ ಬಡ ಕುಟುಂಬಗಳಿಗೆ ಪ್ರಯೋಜನವಾಗ ಲಿದೆ. 2ಸಾವಿರ ಕೋ.ರೂ. ಹೆಚ್ಚುವರಿ ಹೊರೆಯಾಗುತ್ತದೆ. ಬಡವರಿಗಾಗಿ ಮೊದಲ ಬಾರಿಗೆ ರಾಜ್ಯದಲ್ಲಿ ಇದನ್ನು ಜಾರಿಗೆ ತಂದಿದ್ದೇವೆ ಎಂದರು.