“ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಸರಕಾರಿ ಸವಲತ್ತು, ಉದ್ಯೋಗ ಸಿಗಲಿ’
Team Udayavani, Mar 15, 2017, 5:03 PM IST
ಉಡುಪಿ: ಕನ್ನಡ ಮಾಧ್ಯಮ ಶಾಲೆಗಳು ಉಳಿಯಬೇಕಾದರೆ ಕನ್ನಡ ಮಾಧ್ಯಮ/ ಸರಕಾರಿ ಶಾಲೆಗಳಲ್ಲಿ ಓದಿದದವರಿಗೆ ಮಾತ್ರ ಸರಕಾರಿ ಸವಲತ್ತುಗಳು ದೊರಕಬೇಕು ಮತ್ತು ಕನ್ನಡ ಮಾಧ್ಯಮ/ ಸರಕಾರಿ ಶಾಲೆಗಳಲ್ಲಿ ಎಸೆಸೆಲ್ಸಿವರೆಗೆ ಓದಿರುವವರಿಗೆ ಸರಕಾರಿ ನೌಕರಿ ಕೊಡುವಾಗ ಮೊದಲ ಪ್ರಾಶಸ್ತ್ಯ ಸಿಗಬೇಕು ಎಂಬ ಕಾನೂನು ಮಾಡಬೇಕಾಗಿದೆ ಎಂದು ಪರ್ಯಾಯ ಶ್ರೀಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.
ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಮಾ. 14ರಂದು ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ (ಎಸ್ಡಿಎಂಸಿಸಿಎಫ್) ಜಿಲ್ಲಾ ಘಟಕವು ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರ, ಜಿ.ಪಂ., ಶಿಕ್ಷಣ ಇಲಾಖೆ, ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹಭಾಗಿತ್ವದಲ್ಲಿ ಏರ್ಪಡಿಸಿದ ಜಿಲ್ಲಾ ಮಟ್ಟದ ಎಸ್ಡಿಎಂಸಿ ಸಮಾವೇಶವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಸರಕಾರಿ ಶಾಲೆಗಳು ಇಂದು ಉಳಿದದ್ದು ಎಸ್ಡಿಎಂಸಿಗಳಿಂದ ಎಂದರು. ಪರ್ಯಾಯ ಶ್ರೀವಿಶ್ವೇಶತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿ ಸಂಘಟನೆ ಬಲಗೊಳಿಸಿ ಸರಕಾರಿ ಶಾಲೆಗಳು ಉಳಿಯುವಂತಾಗಲಿ ಎಂದು ಹಾರೈಸಿದರು.
ಎಸ್ಡಿಎಂಸಿಯಿಂದಲೂ ಮೇಲ್ಮನೆಗೆ…
ಜಿಲ್ಲೆಯಲ್ಲಿ 11,600 ಎಸ್ಡಿಎಂಸಿ ಸದಸ್ಯರಿದ್ದು ಶಿಕ್ಷಕರೂ ಇಷ್ಟು ಸಂಖ್ಯೆಯಲ್ಲಿಲ್ಲ. ಸದಸ್ಯರ ಕೂಗು ಬೆಂಗಳೂರಿಗೆ ಮುಟ್ಟಬೇಕಾದರೆ ಶಿಕ್ಷಕರ ಕ್ಷೇತ್ರದಂತೆ ಎಸ್ಡಿಎಂಸಿ ಕ್ಷೇತ್ರದಿಂದಲೂ ವಿಧಾನ ಪರಿಷತ್ ಸದಸ್ಯರು ಆಯ್ಕೆಯಾಗುವಂತಿರಬೇಕು ಎಂದು ವಿಧಾನ ಪರಿಷತ್ ಸದಸ್ಯ ಕ್ಯಾಣಗಣೇಶ್ ಕಾರ್ಣಿಕ್ ಹೇಳಿದರು.
ಶಿಕ್ಷಣ ತಜ್ಞರಾದ ಡಾಣ ನಿರಂಜನಾರಾಧ್ಯ ವಿ.ಪಿ., ಪ್ರಮೀಳಾ ವಾಜ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡರು. ಮುಖ್ಯ ಅತಿಥಿಗಳಾಗಿ ಡಿಡಿಪಿಐ ದಿವಾಕರ ಶೆಟ್ಟಿ, ಎಸ್ಡಿಎಂಸಿ ರಾಜ್ಯ ಕಾರ್ಯದರ್ಶಿ ಶೋಭಾ ಭಾಸ್ಕರ, ಯುಪಿಸಿಎಲ್ ಅಧಿಕಾರಿ ಕಿಶೋರ್ ಆಳ್ವ, ಬಡಗಬೆಟ್ಟು ಕ್ರೆಡಿಟ್ ಸೊಸೈಟಿ ಪ್ರಧಾನ ವ್ಯವಸ್ಥಾಪಕ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಿ.ಕೆ.ಪುರುಷೋತ್ತಮ…, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಶಿಧರ ಶೆಟ್ಟಿ, ಮಂಗಳೂರಿನ ರೆನ್ನಿ ಡಿಸೋಜ, ನಗರಸಭಾ ಸದಸ್ಯ ಜನಾರ್ದನ ಭಂಡಾರ್ಕರ್ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ವೇದಿಕೆ ಜಿಲ್ಲಾಧ್ಯಕ್ಷ ಎಂ. ಅಬ್ದುಲ್ ಸಲಾಂ ಚಿತ್ತೂರು ವಹಿಸಿದ್ದರು. ಜಿಲ್ಲಾ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ರಾಘವೇಂದ್ರ ನಾವಡ ನಾಡ ಸ್ವಾಗತಿಸಿ ಉಡುಪಿ ತಾಲೂಕು ಅಧ್ಯಕ್ಷೆ ಮಲ್ಲಿಕಾ ಬಿ. ಪೂಜಾರಿ ವಂದಿಸಿದರು. ಜಯವಂತ ಪೈ ಮತ್ತು ವಾಸು ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆ ತಾಲೂಕು ಅಧ್ಯಕ್ಷರಾದ ಉಡುಪಿಯ ಇಂದಿರಾ ಪಿ. ಶೆಟ್ಟಿ, ಕುಂದಾಪುರದ ನಾಗರಾಜ ಎಸ್.ವಿ., ಕಾರ್ಕಳದ ಪ್ರಕಾಶ್ ಕೋಟ್ಯಾನ್, ಸಂಪನ್ಮೂಲ ಕೇಂದ್ರದ ತಾಲೂಕು ಅಧ್ಯಕ್ಷರಾದ ಕುಂದಾಪುರದ ಬಾಬು ಪೈ, ಕಾರ್ಕಳದ ದಿವಾಕರ ಕುಮಾರ್ ಉಪಸ್ಥಿತರಿದ್ದರು.