ಕಾಂತಾವರ: 5 ಕೆರೆಗಳ ಅಭಿವೃದ್ಧಿ ಆಶಯಕ್ಕೆ ನರೇಗಾ ವರ
Team Udayavani, Feb 25, 2022, 3:30 AM IST
ಕಾರ್ಕಳ: ನೀರಿನ ಕಾಳಜಿ ವಹಿಸಿದ ಕಾಂತಾವರದ 3 ತಂಡಗಳು ನರೇಗ ಯೋಜನೆಯ ಪ್ರಯೋಜನ ಪಡೆದು ತಮ್ಮ ಪರಿಸರದಲ್ಲಿನ ಐದು ಕೆರೆಗಳ ಅಭಿವೃದ್ಧಿಗೊಳಿಸಿ ಯೋಜನೆಯನ್ನು ಸಮರ್ಥವಾಗಿ ಬಳಸಿಕೊಂಡಿದೆ. ನರೇಗಾ ಮೂಲ ಆಶಯಕ್ಕೆ ಗ್ರಾಮದಲ್ಲಿ ಸ್ಪಂದನೆ ದೊರಕಿದೆ. ಸಾಮಾಜಿಕ ಕಳಕಳಿ ಹೊತ್ತು ಕೆಲಸ ಮಾಡಿ ಸಾರ್ವಜನಿಕ ಕೆರೆ ಅಭಿವೃದ್ಧಿಗೊಳಿಸಿ ತಂಡ ಮಾದರಿಯಾಗಿದೆ.
ಕಾಂತಾವರ ಗ್ರಾ.ಪಂ. ಉದ್ಯೋಗ ಖಾತರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸುತ್ತಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು 856 ಕುಟುಂಬಗಳು ಇವೆ. 699 ಕುಟುಂಬಗಳು ಉದ್ಯೋಗ ಖಾತರಿ ಯೋಜನೆ ಯಡಿ ಉದ್ಯೋಗ ಚೀಟಿಯನ್ನು ಪಡೆದುಕೊಂಡಿದ್ದಾರೆ.
ಈ ಪೈಕಿ ಕಾಂತಾವರ 1 ತಂಡ 3 ಕೆರೆಗಳನ್ನು ಅಭಿವೃದ್ಧಿಗೊಳಿಸಿದೆ. ತಂಡದಲ್ಲಿ 24 ಮಂದಿಯಿದ್ದು, ಕಟ್ಟರಬೈಲ್, ಬಾರಂಗ, ಸೂಜಿಕಲ್ಲು, ಈ ಮೂರು ಕೆರೆ ಅಭಿವೃದ್ಧಿಗೊಳಿಸಲಾಗಿದೆ. 3 ಕೆರೆಗಳನ್ನು 1 ತಿಂಗಳಲ್ಲಿ ಸುಸ್ಥಿರ ಗೊಳಿಲಾಗಿದೆ. ಬಾರಾಡಿಯ 30 ಮಂದಿಯ ಒಂದು ತಂಡ ನೀರಲ್ಕೆ ಕೆರೆ ಅಭಿವೃದ್ಧಿಗೊಳಿಸಿದರೆ, ಪಜಿಲಕೆರೆ ಇನ್ನೊಂದು ತಂಡ ಸ್ಥಳೀಯ ಕೆರೆಯನ್ನು ಅಭಿವೃದ್ಧಿಗೊಳಿಸಿದೆ.
ಸಾರ್ವಜನಿಕ ಕೆರೆಗಳು ಪುನಃಶ್ಚೇತನಗೊಳ್ಳದೆ ಇದ್ದು ಹೂಳು ತುಂಬಿ ಹಡಿಲು ಬಿದ್ದಿತ್ತು. ಕಳಕಳಿ ವಹಿಸಿದ ತಂಡಗಳು ಕೆರೆಗಳ ಹೂಳು ತೆಗೆಯುವುದು, ಸ್ವತ್ಛಗೊಳಿಸುವುದು, ಮೆಟ್ಟಿಲು, ರಚನೆ ಇತ್ಯಾದಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಪಾಳು ಬಿದ್ದ ಕೆರೆಗಳು ಈಗ ಅಂದ ಹೆಚ್ಚಿಸಿಕೊಂಡು ಸಮೃದ್ಧಗೊಂಡಿವೆ. ಕೆರೆಗಳನ್ನು ಹೂಳೆತ್ತಿ ಅಭಿವೃದ್ಧಿ ಗೊಳಿಸಿದ ಪರಿಣಾಮ ಅಂತರ್ಜಲ ಮಟ್ಟ ಕೂಡ ಏರಿಕೆಯಾಗಿದೆ. ಕೆರೆ ಅಭಿವೃದ್ಧಿ ಮಾತ್ರವಲ್ಲ ಈ ತಂಡಗಳು 8 ಕಾಲುವೆ ನಿರ್ಮಾಣ ಕೂಡ ಮಾಡಿದೆ.
ಉದ್ಯೋಗ ಖಾತರಿ ಯೋಜನೆ ಕಾಂತಾವರ ಗ್ರಾಮದಲ್ಲಿ ಹೊಸ ಭರವಸೆಯ ಛಾಪು ಮೂಡಿಸಿದ್ದು, ಸಾಕಷ್ಟು ಕುಟುಂಬಗಳು ಈ ಯೋಜನೆಯಡಿ ಸ್ಯೋದ್ಯೋಗ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಲುವೆಯಲ್ಲಿ ಹೂಳು ತುಂಬಿ ಗದ್ದೆಗೆ ನೀರು ಹರಿಯುತ್ತಿತ್ತು ಇದರಿಂದ ಬೆಳೆಗಳು ಕೈ ಸೇರುತ್ತಿರಲಿಲ್ಲ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮದಲ್ಲಿ ಕಾಲುವೆಯನ್ನು ಅಭಿವೃದ್ಧಿಪಡಿಸಲಾಗಿದೆ. ಇದೀಗ ನೀರು ಸರಾಗವಾಗಿ ಹರಿಯುತ್ತಿದ್ದು ಕೃಷಿ ಚಟುವಟಿಕೆಗಳಿಗೆ ಸಾಕಷ್ಟು ಉಪಯೋಗವಾಗಿದೆ ಎಂದು ಸ್ಥಳೀಯರು ಅಭಿಪ್ರಾಯ ಪಡುತ್ತಾರೆ.
ಗ್ರಾಮಸ್ಥರು ಗ್ರಾ.ಪಂ.ಗೆ ಭೇಟಿ ನೀಡಿದ ಸಂದರ್ಭ ಅಧಿಕಾರಿಗಳು ಹಾಗೂ ಸಿಬಂದಿ ಉದ್ಯೋಗ ಖಾತರಿ ಯೋಜನೆಯ ಮಾಹಿತಿ ನೀಡುತ್ತಿದ್ದರು. ಇದನ್ನು ಗ್ರಾಮಸ್ಥರು ಉತ್ತಮವಾಗಿ ಬಳಸಿಕೊಳ್ಳುತ್ತಿದ್ದಾರೆ. ಅದರಲ್ಲೂ 3 ತಂಡ ಕೆರೆ, ಕಾಲುವೆ ಅಭಿವೃದ್ಧಿಗೊಳಿಸಿ ಗಮನ ಸೆಳೆದಿದ್ದಾರೆ. ಕೆಲಸಕ್ಕೆ ತಕ್ಕಂತೆ ಕೂಲಿ, ಸಾಮಗ್ರಿ ಮೊತ್ತ ಪಾವತಿಯಾಗಿದೆ.
5,375 ಗುರಿ ನಿಗದಿ: ಶೇ.100 ಗುರಿ ಸಾಧನೆ :
ಕಾಂತಾವರ ಗ್ರಾ.ಪಂ.ಗೆ ವಾರ್ಷಿಕವಾಗಿ 5,375 ಗುರಿ ನಿಗದಿಪಡಿಸಿದ್ದು ಫೆಬ್ರವರಿ ಅಂತ್ಯಕ್ಕೆ ಶೇ.100 ಗುರಿ ಸಾಧಿಸಲಾಗಿದೆ. ಈ ಯೋಜನೆಯ ಅನುದಾನದಿಂದ ಮನೆ ಮನೆಗೆ ಬಚ್ಚಲು ಗುಂಡಿ, ಬಾವಿ, ಕೆರೆಗಳ ಹೂಳೆತ್ತುಕೆ, ರಸ್ತೆ ಬದಿ ನೆಡುತೋಪು ನಿರ್ಮಾಣ, ದನದ ಹಟ್ಟಿ, ಎರೆಹುಳು ತೊಟ್ಟಿ, ಗೊಬ್ಬರ ಗುಂಡಿ, ಅಡಿಕೆ ತೋಟ ನಿರ್ಮಾಣವಾಗಿದೆ. ಹೆಚ್ಚಿನ ಕುಟುಂಬಗಳು ಕೃಷಿಯನ್ನೇ ಅವಲಂಬಿಸಿದ್ದು, ಕೆರೆಗಳ ಅಭಿವೃದ್ಧಿಗೆ ಮುಂದಾದ ಅಲ್ಲಿನ ಗ್ರಾಮ ಪಂಚಾಯತ್, ಗ್ರಾಮಸ್ಥರಿಗೆ ಸೂಕ್ತ ಮಾಹಿತಿ ನೀಡಿ ಯೋಜನೆಯ ಫಲ ಪಡೆಯುವಂತೆ ಪ್ರೇರೇಪಿಸುತ್ತಿದ್ದಾರೆ.
ವಾರ್ಡ್ನ ಎಲ್ಲ ಸದಸ್ಯರ ಸಹಕಾರ ದೊರಕಿದೆ. ನಾಗರಿಕರು ಗುಂಪುಗಳನ್ನು ರಚನೆ ಮಾಡಿಕೊಂಡು ಯೋಜನೆಯ ಪ್ರಯೋಜನ ಪಡೆಯುವ ಆಸಕ್ತಿ ವಹಿಸುತ್ತಿದ್ದಾರೆ. ಇನ್ನೆರಡು ಕೆರೆ ಗಳ ಅಭಿವೃದ್ಧಿಗೂ ಯೋಜನೆ ಹಾಕಿಕೊಂಡಿದ್ದಾರೆ. –ಸದಾಶಿವ ಮೂಲ್ಯ, ಪಿಡಿಒ ಕಾಂತಾವರ
ಉದ್ಯೋಗ ಖಾತರಿ ಯೋಜನೆಯನ್ನು ಬಳಸಿ ತಂಡ ರಚಿಸಿಕೊಂಡು ಕೆರೆ, ಕಾಲುವೆ ಅಭಿವೃದ್ಧಿಗೊಳಿಸಿದ್ದೇವೆ. ಯೋಜನೆಯಿಂದ ಸಮುದಾಯದ ಅಭಿವೃದ್ಧಿ, ನಮಗೂ ಪ್ರಯೋಜನವಾಗಿದೆ. –ಸುಧಾಕರ, ಕೆರೆ ಅಭಿವೃದ್ಧಿ ತಂಡದ ಸದಸ್ಯ
-ಬಾಲಕೃಷ್ಣ ಭೀಮಗುಳಿ