ಕಾರ್ಕಳ: ಬಳಕೆಯಾಗದ ಕುಡಿಯುವ ನೀರಿನ ಘಟಕಗಳು
ತಾಲೂಕಿನಲ್ಲಿವೆ 11 ಘಟಕಗಳು; ನೀರು ಪಡೆಯುವವರಿಲ್ಲದೆ ಸರಕಾರದ ಹಣ ಪೋಲು
Team Udayavani, Apr 13, 2019, 6:30 AM IST
ಕಾರ್ಕಳ: ಪ್ರಾಯೋಗಿಕವಾಗಿ ಚಿಂತಿಸದೆ ಯೋಜನೆ ಅನುಷ್ಠಾನಗೊಳಿಸಿದಲ್ಲಿ ಸರಕಾರದ ಹಣ ಯಾವ ರೀತಿ ಪೋಲಾಗಲಿದೆ ಎನ್ನುವುದಕ್ಕೆ ಕಾರ್ಕಳ ತಾಲೂಕಿನಲ್ಲಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕಗಳೇ ಉತ್ತಮ ಉದಾಹರಣೆ.
ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ 2017-18ರಲ್ಲಿ ರಾಜ್ಯ ಸರಕಾರ ರಾಜ್ಯಾದ್ಯಂತ ಶುದ್ಧ ಕುಡಿಯುವ ನೀರಿನ ಘಟಕ ತೆರೆಯುವ ಯೋಜನೆ ರೂಪಿಸಿತು. 1 ರೂ.ಗೆ 10 ಲೀಟರ್ ನೀರು ನೀಡುವ ಈ ಯೋಜನೆಯ ಅನುಷ್ಠಾನಕ್ಕೆ ಸ್ಥಳಗಳನ್ನು ಗುರುತಿಸಿ ಘಟಕವೊಂದನ್ನು ಸುಮಾರು 7-8 ಲಕ್ಷ ರೂ. ವೆಚ್ಚದಲ್ಲಿ ಹಲವೆಡೆ ನಿರ್ಮಾಣ ಮಾಡಲಾಗಿತ್ತು.
11 ಘಟಕಗಳು
ಕಾರ್ಕಳದಲ್ಲೂ ಇಂತಹ 11 ಘಟಕಗಳನ್ನು ವರ್ಷದ ಹಿಂದೆ ನಿರ್ಮಿಸಲಾಗಿತ್ತು. ಘಟಕ ಸುಸ್ಥಿತಿಯಲ್ಲಿದ್ದು, ಕಾರ್ಯಾರಂಭಿಸಿದ್ದರೂ ಜನರು ಮಾತ್ರ ಘಟಕದತ್ತ ಹೋಗುತ್ತಿಲ್ಲ. ಹೀಗಾಗಿ ಸರಕಾರದ ಹಣ ವ್ಯರ್ಥವಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕಾರ್ಕಳ ಗ್ರಾಮಾಂತರ ಪ್ರದೇಶವಾದ ನಿಟ್ಟೆಯ ಕೆಮ್ಮಣ್ಣು ಹಾಗೂ ಮಿಯ್ನಾರಿನಲ್ಲಿ ಆರ್ಡಬ್ಲ್ಯುಎಸ್ಆರ್ (ರೂರಲ್ ವಾಟರ್ ಸಪ್ಲೆ„ ಸಬ್ ಡಿವಿಜನ್) ವತಿಯಿಂದ ಹಾಗೂ ಉಳಿದ 9 ಘಟಕಗಳನ್ನು ಕೆಆರ್ಐಡಿಎಲ್ (ಕರ್ನಾಟಕ ರೂರಲ್ ಇನ್ಫ್ರಾಸ್ಟ್ರಕ್ಚರ್ ಡೆವೆಲಪ್ಮೆಂಟ್ ಲಿ.) ವತಿಯಿಂದ ನಿರ್ಮಿಸಲಾಗಿದೆ.
ಮುಡಾರುವಿನ ದಿಡಿಂಬಿರಿ, ಹಿರ್ಗಾನದ ಪಾಲಿಜೆ, ಬೆಳ್ಮಣ್ನ ಜಂತ್ರ, ಮುಂಡ್ಕೂರಿನ ಅಲಂಗಾರುಗುಡ್ಡೆ, ನಿಟ್ಟೆಯ ಚೇತನಹಳ್ಳಿ, ಕುಕ್ಕುಂದೂರುವಿನ ಪೊಸನಟ್ಟು, ಚಾರದ ಪುತ್ತುರ್ಕೆ, ಹೆಬ್ರಿಯ ಬಡ ಗುಡ್ಡೆ ಹಾಗೂ ಹೊಸ್ಮಾರು ಪೇಟೆಯಲ್ಲಿ ಘಟಕಗಳಿವೆ. ಘಟಕ ಕೆಟ್ಟು ಹೋದಲ್ಲಿ ಸಂಬಂಧ ಪಟ್ಟವರು ದುರಸ್ತಿ ಕಾರ್ಯ ಮಾಡುವುದಿಲ್ಲ ಎನ್ನುವ ಆರೋಪಗಳಿವೆ. ಆದರೆ, ಕಾರ್ಕಳದಲ್ಲಿ ಅಂತಹ ಪರಿಸ್ಥಿತಿ ಬಂದೊದಗಿಲ್ಲ.
ಆರ್ಡಬ್ಲ್ಯುಎಸ್ಆರ್ ನಿರ್ಮಾಣ ಮಾಡಿದ ಘಟಕವನ್ನು ಸ್ಥಳೀಯ ಆಡಳಿತ ವ್ಯವಸ್ಥೆಗೆ ನೀಡುತ್ತದೆ. ಗ್ರಾಮ ಪಂಚಾಯತ್ ನಿರ್ವಹಣೆ ಜವಾಬ್ದಾರಿ ಹೊರುವುದು ಮಾತ್ರವಲ್ಲದೇ ವಿದ್ಯುತ್ ಬಿಲ್ ಕೂಡ ಭರಿಸಬೇಕಾಗಿದೆ. ಕೆಆರ್ ಐಡಿಎಲ್ ಘಟಕವನ್ನು 5 ವರ್ಷಗಳ ಕಾಲ ಅವರೇ ನಿರ್ವಹಣೆ ಮಾಡಬೇಕೆಂಬ ನಿಯಮವಿದೆ. ಹೀಗಾಗಿ ಪುರಸಭೆಗೆ ನಿರ್ವಹಣೆ ಹೊಣೆ ಇಲ್ಲದಿದ್ದರೂ ವಿದ್ಯುತ್ ಬಿಲ್ ಪಾವತಿಸಬೇಕಾಗಿದೆ.
ಪ್ರಯೋಜನ ಪಡೆಯಿರಿ
ಕಾರ್ಕಳ ತಾಲೂಕಿನಲ್ಲಿ ಒಟ್ಟು 11 ಘಟಕಗಳು ನಿರ್ಮಾಣಗೊಂಡಿದ್ದು ಜನತೆ ಘಟಕದ ಪ್ರಯೋಜನ ಪಡೆದುಕೊಳ್ಳಬೇಕು. ಸಾರ್ವಜನಿಕರ ಸಹಭಾಗಿತ್ವ ವಿಲ್ಲದೆ ಸರಕಾರದ ಯೋಜನೆ ಯಶಸ್ವಿಯಾಗಲು ಸಾಧ್ಯವಿಲ್ಲ.
-ಶ್ರೀಧರ್ ನಾಯಕ್,
ಪ್ರ.ಸ.ಕಾ.ನಿ. ಎಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಕಾರ್ಕಳ