Karnataka Election 2023: ಚುನಾವಣೆಗೆ ಪೂರ್ವಸಿದ್ಧತೆ: ಸಿಬಂದಿಗೆ 3 ಹಂತದಲ್ಲಿ ತರಬೇತಿ
ಇವಿಎಂ, ವಿವಿ ಪ್ಯಾಟ್ಗಳ ಬಗ್ಗೆ ಎಲ್ಸಿಡಿ ಪ್ರಾಜೆಕ್ಟರ್ಗಳ ಮೂಲಕ ತರಬೇತಿ ನೀಡಲಾಗುತ್ತದೆ.
Team Udayavani, Apr 22, 2023, 12:37 PM IST
ಉಡುಪಿ: ಚುನಾವಣೆ ಅಖಾಡದಲ್ಲಿ ಅಭ್ಯರ್ಥಿಗಳು ಪ್ರಚಾರ ಕಾರ್ಯ ನಡೆಸುತ್ತಿರುವ ನಡುವೆಯೇ ಮತದಾನದಂದು ಮಾಡಬೇಕಿರುವ ಸಿದ್ಧತೆಗಳು ಹಾಗೂ ಕರ್ತವ್ಯ ನಿರತ ಸಿಬಂದಿಗೆ ವಿಶೇಷ ತರಬೇತಿ ನೀಡುವ ಬಗ್ಗೆ ಪೂರ್ವ ಸಿದ್ಧತೆ
ಮಾಡಿಕೊಳ್ಳಲಾಗುತ್ತಿದೆ. ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸೈಂಟ್ ಸಿಸಿಲಿ, ಕಾಪುವಿನ ದಂಡತೀರ್ಥ, ಕಾರ್ಕಳದ ಮಂಜುನಾಥ ಪೈ ಮೆಮೋರಿಯಲ್ ಕಾಲೇಜು, ಬೈಂದೂರಿನ ಗ್ರೀನ್ ವ್ಯಾಲಿ, ಕುಂದಾಪುರದ ಭಂಡಾರ್ಕಾರ್ಸ್ ನಲ್ಲಿ ಎ. 23ರಂದು ಮೊದಲ ಹಂತದ ತರಬೇತಿ ನಡೆಯಲಿದೆ.
ಹೇಗೆ ತರಬೇತಿ?
ಸೆಕ್ಟರ್ ಆಫೀಸರ್ಗಳು ಹಾಗೂ ಮಾಸ್ಟರ್ ತರಬೇತುದಾರರು ತರಬೇತಿ ನೀಡಲಿದ್ದಾರೆ. ಮುಖ್ಯವಾಗಿ ಡಿಮಸ್ಟರಿಂಗ್, ಅಂಧ, ದುರ್ಬಲ ಮತದಾರರ ನಿರ್ವಹಣೆ, ಫಾರಂ ತುಂಬುವ ಬಗ್ಗೆ, ಇವಿಎಂ, ವಿವಿ ಪ್ಯಾಟ್ಗಳ ಬಗ್ಗೆ ಎಲ್ಸಿಡಿ ಪ್ರಾಜೆಕ್ಟರ್ಗಳ ಮೂಲಕ ತರಬೇತಿ ನೀಡಲಾಗುತ್ತದೆ.
ಮೂರು ಹಂತದಲ್ಲಿ ತರಬೇತಿ
ರವಿವಾರ ಒಂದು ಹಂತದ ತರಬೇತಿ ಮುಗಿದ ಬಳಿಕ ಮತ್ತೆ ಎರಡು ಹಂತದಲ್ಲಿ ತರಬೇತಿ ನಡೆಸಲಾಗುತ್ತದೆ. ಕ್ಷೇತ್ರಾವಾರು ವಿಂಗಡಣೆಯೂ ಒಂದನೇ ತರಬೇತಿ ಮುಗಿದ ಬಳಿಕ ನಡೆಯಲಿದೆ. ವಿಂಗಡಣೆಯ ಬಳಿಕ ಮತ್ತೂಂದು ಸುತ್ತಿನ ತರಬೇತಿಯನ್ನು ಸಿಬಂದಿಗೆ ನೀಡಲಾಗುತ್ತದೆ. ಮಸ್ಟರಿಂಗ್ ದಿನವೂ ಬೆಳಗ್ಗೆ ಮಾಹಿತಿ ನೀಡಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.
ಕರ್ತವ್ಯ ಹೇಗೆ?
ಒಂದು ಮತಗಟ್ಟೆಯಲ್ಲಿ 3 ಮಂದಿ ಪೋಲಿಂಗ್ ಆಫೀಸರ್ಗಳು ಸಹಿತ ಒಟ್ಟು 4 ಮಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಇಬ್ಬರು ಪೊಲೀಸ್ ಸಿಬಂದಿ ಇರಲಿದ್ದಾರೆ. ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮಮತಗಟ್ಟೆಗಳು ಯಾವುದು ಎಂಬ ಬಗ್ಗೆ ಈ ವಾರದೊಳಗೆ ಸೂಚನೆ ಬರುವ ಸಾಧ್ಯತೆಗಳಿವೆ. ಗಲಾಟೆ ನಡೆಯುವ ಸ್ಥಳಗಳು, ಈ ಹಿಂದೆ ನಡೆದ ಘಟನೆಗಳನ್ನು ನೋಡಿಕೊಂಡು ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮಮತಗಟ್ಟೆಗಳ ಬಗ್ಗೆ ನಿರ್ಧರಿಸಲಾಗುತ್ತದೆ.
ಚುನಾವಣೆ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಹಾಗೂ ಸಿಬಂದಿಗೆ ವಿವಿಧ ಹಂತಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಇವಿಎಂ ಯಂತ್ರಗಳ ಪ್ರಾತ್ಯಕ್ಷಿಕೆಗಳನ್ನೂ ನಡೆಸಲಾಗಿದೆ.
ಕೂರ್ಮಾರಾವ್ ಎಂ., ಜಿಲ್ಲಾಧಿಕಾರಿ