“ಧಾರ್ಮಿಕ ಸಂಸ್ಕಾರದಿಂದ ಬದುಕು ಸುಗಮ’
ಕೊಡವೂರು ದೇವಸ್ಥಾನ: ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ
Team Udayavani, Feb 8, 2020, 5:59 AM IST
ಮಲ್ಪೆ: ಇಂದಿನ ಮಕ್ಕಳು ವಾಟ್ಸ್ಆ್ಯಪ್, ಟಿವಿಯ ಹಿಂದೆ ಬಿದ್ದು ಧಾರ್ಮಿಕ ಕೇಂದ್ರಗಳಿಂದ ದೂರವಾಗುತ್ತಿದ್ದಾರೆ. ಅವರಿಗೆ ಧಾರ್ಮಿಕ ಸಂಸ್ಕಾರ ದೊರೆತರೆ ಭವಿಷ್ಯದಲ್ಲಿ ಹಾದಿ ತಪ್ಪುವುದಿಲ್ಲ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಬೇಕಾದುದು ನಮ್ಮ ಕರ್ತವ್ಯ ಎಂದು ಕನ್ನರ್ಪಾಡಿ ಜಯದುರ್ಗಾಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಆಚಾರ್ಯ ಹೇಳಿದರು.
ಅವರು ಶುಕ್ರವಾರ ಕೊಡವೂರು ಶಂಕರನಾರಾಯಣ ದೇವಸ್ಥಾನದ ರಥೋತ್ಸವದ ಅಂಗವಾಗಿ ಆಯೋಜಿಸಲಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದೇವಸ್ಥಾನಗಳಿಗೆ ಹೋಗುವಾಗ ಮಕ್ಕಳನ್ನು ಜತೆಗೆ ಕರೆದೊಯ್ಯುವ ಪರಿಪಾಠವನ್ನು ಬೆಳೆಸಿ ಅವರು ಧಾರ್ಮಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸ ಬೇಕು. ಇದು ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಪೂರಕ ಎಂದರು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಅಧ್ಯಕ್ಷತೆ ವಹಿಸಿದ್ದರು. ಕಾರ್ತಿಕ ಗ್ರೂಪ್ನ ಪ್ರವರ್ತಕ ಹರಿಯಪ್ಪ ಕೋಟ್ಯಾನ್, ಶಂಕರನಾರಾಯಣ ಸೇವಾ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್, ಗೌರವಾಧ್ಯಕ್ಷ ಆನಂದ ಪಿ. ಸುವರ್ಣ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಅಡಿಗ ಕೃಷ್ಣಮೂರ್ತಿ ಭಟ್, ಭಾಸ್ಕರ ಪಾಲನ್, ರಾಜ ಎ. ಶೇರಿಗಾರ್, ಚಂದ್ರಕಾಂತ ಕಾನಂಗಿ, ಬಾಬ ಕೆ., ಸುಧಾ ಎನ್. ಶೆಟ್ಟಿ, ಬೇಬಿ ಎಸ್. ಮೆಂಡನ್ ಉಪಸ್ಥಿತರಿದ್ದರು.
ಸಮ್ಮಾನ, ಪ್ರಶಸ್ತಿ ಪ್ರದಾನ
ಕಳೆದ ಹಲವಾರು ವರ್ಷಗಳಿಂದ ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ವಸಂತ ರಾವ್ ದಂಪತಿ ಮತ್ತು ಅಪ್ಪಿ ಸೇರಿಗಾರ್ತಿ ಅವರಿಗೆ ಶ್ರೀ ಶಂಕರನಾರಾಯ ಣಾನುಗ್ರಹ ಪ್ರಶಸ್ತಿಯನ್ನು ಪ್ರದಾನ ಮಾಡಲಾ ಯಿತು. ನಾಟ್ಯ ಮಯೂರಿ ವಿದುಷಿ ಲಕ್ಷ್ಮೀ ಗುರುರಾಜ್ ಅವರನ್ನು ಸಮ್ಮಾನಿಸಲಾಯಿತು. ವ್ಯವಸ್ಥಾಪನ ಸಮಿತಿಯ ಸದಸ್ಯ ಜನಾರ್ದನ ಕೊಡವೂರು ವಂದಿಸಿದರು. ಪೂರ್ಣಿಮಾ ಜನಾರ್ದನ ನಿರೂಪಿಸಿದರು. ಉಡುಪಿ ನೃತ್ಯನಿಕೇತನ ತಂಡದಿಂದ ನೂಪುರ ನಿನಾದ ಕಾರ್ಯಕ್ರಮ ನಡೆಯಿತು.