ಕರಾವಳಿ ದೇಗುಲಗಳಲ್ಲಿ ಭಾರೀ ಸಂಖ್ಯೆಯ ಭಕ್ತಸಾಗರ
Team Udayavani, Apr 20, 2019, 6:00 AM IST
ಕೊಲ್ಲೂರು/ಉಡುಪಿ/ಧರ್ಮಸ್ಥಳ/ಸುಬ್ರಹ್ಮಣ್ಯ: ನಿರಂತರ ರಜೆ ಇರುವುದರಿಂದ ಎರಡು ದಿನಗಳಿಂದ ಕರಾವಳಿಯ ವಿವಿಧ ದೇವಸ್ಥಾನಗಳಲ್ಲಿ ಭಾರೀ ಸಂಖ್ಯೆಯ ಭಕ್ತ ಜನಸಾಗರ ಕಂಡುಬಂದಿದೆ. ಮುಂದಿನ ಎರಡು ದಿನಗಳ ಕಾಲವೂ ರಜೆ ಇದ್ದು, ಭಕ್ತಸಂದಣಿ ಮುಂದುವರಿಯುವ ಸಾಧ್ಯತೆ ಇದೆ.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ದಿನಂಪ್ರತಿ 20 ಸಾವಿರಕ್ಕೂ ಮಿಕ್ಕಿ ಭಕ್ತರು ಆಗಮಿಸುತ್ತಿದ್ದಾರೆ.
ಶುಕ್ರವಾರ ಬೆಳಗಿನ ಜಾವದಿಂದಲೇ ಸಹಸ್ರಾರು ಸಂಖ್ಯೆಯ ಭಕ್ತರು ದೇಗುಲಕ್ಕೆ ಆಗಮಿಸಿದ್ದು, ಮಧ್ಯಾಹ್ನ ಅನ್ನಸಂತರ್ಪಣೆಯಲ್ಲಿ 15 ಸಾವಿರಕ್ಕೂ ಹೆಚ್ಚು ಮಂದಿ ಅನ್ನಪ್ರಸಾದ ಸ್ವೀಕರಿಸಿದರು.
ರಸ್ತೆ ದಾಟಿದ ಸರತಿ ಸಾಲು
ಸ್ಥಳೀಯರು, ಆಸುಪಾಸು ಜಿಲ್ಲೆಯವರಲ್ಲದೆ ಕೇರಳ, ತಮಿಳುನಾಡು ಮತ್ತು ಆಂಧ್ರದಿಂದ ಆಗಮಿಸಿದ್ದ ಭಕ್ತರ ಸರತಿ ಸಾಲು ಮುಖ್ಯ ಹೆದ್ದಾರಿಯ ವರೆಗೆ ದಾಟಿದ್ದು, ಬಿಸಿಲಿನ ತಾಪದಿಂದ ಬಸವಳಿದ ಮಂದಿಗೆ ಸ್ಥಳೀಯರು ಕುಡಿಯುವ ನೀರನ್ನು ಒದಗಿಸುವುದು ಕಂಡುಬಂತು.
ಅತಿಥಿಗೃಹ ಭರ್ತಿ
ದೇಗುಲದ ವಸತಿಗೃಹ ಮಾತ್ರವಲ್ಲದೆ ಖಾಸಗಿ ಲಾಡ್ಜ್ಗಳು ಭರ್ತಿಯಾಗಿದ್ದು, ಕೊಠಡಿ ಇಲ್ಲದೆ ಅನೇಕರು ದೇಗುಲದ ಹೊರಪೌಳಿಯನ್ನು ಅವಲಂಬಿಸಬೇಕಾಯಿತು.
ಧರ್ಮಸ್ಥಳದಲ್ಲಿ ಭಕ್ತರ ಸಂಖ್ಯೆ ಹೆಚ್ಚಳ
ಧರ್ಮಸ್ಥಳದಲ್ಲಿಯೂ ಶುಕ್ರವಾರ ಜನಸಂದಣಿ ಹೆಚ್ಚಿತ್ತು. ಊರು ಮತ್ತು ಪರವೂರಿಂದ ಶುಕ್ರವಾರ ಸುಮಾರು 35 ಸಾವಿರಕ್ಕೂ ಹೆಚ್ಚು ಭಕ್ತರು ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದರು. ಭಕ್ತರಿಗೆ ದೇವರ ದರ್ಶನಕ್ಕೆ ದೇವಸ್ಥಾನ ವತಿಯಿಂದ ಸಕಲ ವ್ಯವಸ್ಥೆ ಕಲ್ಪಿಸಲಾಗಿದ್ದು, ಪಾರ್ಕಿಂಗ್ ಸ್ಥಳದಲ್ಲೂ ಹೆಚ್ಚಿನ ಜನಸಂದಣಿ ಕಂಡು ಬಂತು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶುಕ್ರವಾರ ಸಂಜೆಯ ವೇಳೆಗೆ ಅಪಾರ ಪ್ರಮಾಣದಲ್ಲಿ ಭಕ್ತರು ಆಗಮಿಸಿದ್ದು, ರಾತ್ರಿ ಜನಸಂದೋಹ ಅಧಿಕವಿತ್ತು. ಮುಂದಿನ ಮೂರ್ನಾಲ್ಕು ದಿನ ಇದೇ ಪರಿಸ್ಥಿತಿ ಇರುವ ಸಾಧ್ಯತೆ ಇದೆ. ಇದಲ್ಲದೆ ಉಡುಪಿ ಶ್ರೀಕೃಷ್ಣ ಮಠ, ಕಟೀಲು ದೇವಸ್ಥಾನಗಳಲ್ಲಿಯೂ ದೂರದೂರುಗಳಿಂದ ಆಗಮಿಸಿದ ಭಕ್ತರ ಸಂಖ್ಯೆ ಹೆಚ್ಚಿತ್ತು.