ಮಲ್ಪೆ : ಛದ್ಮವೇಷ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ…!
Team Udayavani, Apr 27, 2019, 6:05 AM IST
ಮಲ್ಪೆ: ಮಲ್ಪೆ ಹನುಮಾನ್ನಗರ ಹನುಮಾನ್ ವಿಠೊಬಾ ಭಜನಾ ಮಂದಿರದ ಸುವರ್ಣ ಮಹೋತ್ಸವ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ಛದ್ಮವೇಷ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಂಡು ಎಲ್ಲರ ಗಮನ ಸೆಳೆದರು.
ಅಂದ ಹಾಗೆ ಬಂದಿದ್ದು ಒರಿಜಿನಲ್ ಮೋದಿ ಅಲ್ಲ. ನರೇಂದ್ರ ಮೋದಿ ಅವರ ತದ್ರೂಪಿ ಎನಿಸಿಕೊಂಡು ಈಗಾಗಲೇ ಸಾಕಷ್ಟು ಪ್ರಚಾರವನ್ನು ಗಿಟ್ಟಿಸಿಕೊಂಡಿರುವ ಉಡುಪಿ ಸದಾನಂದ ನಾಯಕ್ ಅವರು.
ಭಜನ ಮಂದಿರದ ಸುವರ್ಣ ಸಂಭಮದ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಮಲ್ಪೆ ಹನುಮಾನ್ ನಗರದ ರಕ್ಷಿತ್ ಎಸ್. ಕೋಟ್ಯಾನ್ ಮತ್ತು ಬಳಗ ಪುಲ್ವಾಮ ದಾಳಿಯಲ್ಲಿ ಮೃತರಾದ ಯೋಧರ ಅಂತಿಮ ಸಂಸ್ಕಾರ ವಿಷಯ ಅಧರಿಸಿ ಛದ್ಮವೇಷವನ್ನು ಆಯೋಜಿಸಿದ್ದರು. ಸರಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರವನ್ನು ನಡೆಸುವ ವೇಳೆ ನರೇಂದ್ರ ಮೋದಿ ಬಂದು ಭಾರತೀಯ ಹುತಾತ್ಮ ಯೋಧರಿಗೆ ನಮನ ಸಲ್ಲಿಸುವ ಸನ್ನಿವೇಷವನ್ನು ಆಯೋಜಿಸಲಾಗಿತ್ತು. ನೆರೆದಿದ್ದ ಎಲ್ಲರಿಂದಲೂ ಇದು ಮೆಚ್ಚುಗೆಗೆ ಪಾತ್ರವಾಗಿತ್ತು.