ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ: ಹೊಂದಾಣಿಕೆಯಿಲ್ಲದ ಮೂತ್ರಪಿಂಡ ಕಸಿ ಯಶಸ್ವಿ
Team Udayavani, Feb 4, 2022, 6:58 AM IST
ಮಣಿಪಾಲ: ಮೂತ್ರಪಿಂಡದ ವೈಫಲ್ಯ ಹೊಂದಿದ್ದ ಮತ್ತು 6 ತಿಂಗಳಿಂದ ಹಿಮೋಡಯಾಲಿಸಿಸ್ನಲ್ಲಿರುವ ಮಗುವಿಗೆ ಮೊದಲ ಬಾರಿಗೆ ರಕ್ತದ ಗುಂಪು ಎಬಿಒ-ಹೊಂದಾಣಿಕೆಯಾಗದ ಮೂತ್ರಪಿಂಡ ಕಸಿ ಯನ್ನು ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಯಶಸ್ವಿ ಯಾಗಿ ಮಾಡಲಾಗಿದೆ.
ಶಿವಮೊಗ್ಗದ “ಒ’ ಪಾಸಿಟಿವ್ ರಕ್ತದ ಗುಂಪಿನ 14 ವರ್ಷದ ಬಾಲಕನಿಗೆ 3 ವರ್ಷಗಳ ಹಿಂದೆ ಕಿಡ್ನಿ ವೈಫಲ್ಯ ಪತ್ತೆಯಾಗಿತ್ತು. ಮುಂದಿನ ಎರಡು ವರ್ಷಗಳಲ್ಲಿ ಸಮಸ್ಯೆ ಉಲ್ಬಣಗೊಂಡು ದೈಹಿಕ ಬೆಳವಣಿಗೆ, ಚಟುವಟಿಕೆ ಕಡಿಮೆಯಾದ ಕಾರಣ ಹೆಚ್ಚಿನ ಆರೈಕೆಗಾಗಿ ಮಣಿಪಾಲ ಆಸ್ಪತ್ರೆಯ ಮಕ್ಕಳ ಮೂತ್ರಪಿಂಡ ವಿಭಾಗಕ್ಕೆ ಶಿಫಾರಸು ಮಾಡಲಾಯಿತು.
ವೈದ್ಯರು ಸಲಹೆಯಂತೆ ರಕ್ತದ ಗುಂಪು ಹೊಂದಾಣಿಕೆ ನೆಲೆಯಲ್ಲಿ ಕುಟುಂಬವು ತಂದೆಯ ಮೂತ್ರಪಿಂಡವನ್ನೇ ಕಸಿ ಮಾಡುವುದೆಂದು ತೀರ್ಮಾನಿಸಿತು. ಪರೀಕ್ಷೆ ವೇಳೆ ತಂದೆಗೆ ಮಧುಮೇಹ ಪತ್ತೆಯಾದ ನೆಲೆಯಲ್ಲಿ ಕಿಡ್ನಿ ದಾನ ಸಾಧ್ಯವಾಗಲಿಲ್ಲ. “ಬಿ’ ಪಾಸಿಟಿವ್ ರಕ್ತದ ಗುಂಪು ಹೊಂದಿದ್ದ ತಾಯಿ ಮೂತ್ರಪಿಂಡ ದಾನಕ್ಕೆ ಮುಂದೆ ಬಂದರು. ಎಬಿಒ-ಹೊಂದಾಣಿಕೆಯಿಲ್ಲದ ಕಸಿಗೆ ಆಯ್ಕೆ ಮಾಡಿಕೊಳ್ಳಲಾಯಿತು. ಅಂತಹ ಕಸಿಗೆ
ಪ್ಲಾಸ್ಮಾಫೆರೆಸಿಸ್ ಮೂಲಕ ಮಗುವಿನ ರಕ್ತದಿಂದ ಪೂರ್ವ ನಿರ್ಧರಿತ ಪ್ರತಿಕಾಯಗಳನ್ನು ತೆಗೆದುಹಾಕು ವುದು ಮತ್ತು ಕಸಿ ಮಾಡುವ ಮೊದಲು ಹೆಚ್ಚುವರಿ ಇಮ್ಯುನೊಸಪ್ರಶನ್ ಔಷಧಗಳ ಬಳಕೆ ಅಗತ್ಯವಿದೆ.
ಅಗತ್ಯ ನೀತಿ ನಿಯಮಗಳನ್ನು ಪೂರ್ಣಗೊಳಿಸಿದ ಅನಂತರ, ಮಗುವಿಗೆ ಮೂತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಅರುಣ್ ಚಾವ್ಲಾ ಮತ್ತು ಅವರ ತಂಡ ಹಾಗೂ ಟ್ರಾ®Õ…ಫ್ಯೂಷನ್ ಮೆಡಿಸಿನ್ ವಿಭಾಗದ ಮುಖ್ಯಸ್ಥೆ ಡಾ| ಶಮೀ ಶಾಸ್ತ್ರಿ ಮತ್ತು ಅವರ ತಂಡದ ಸಹಕಾರದೊಂದಿಗೆ ಜ. 4ರಂದು ಎಬಿಒ-ಹೊಂದಾಣಿಕೆಯಿಲ್ಲದ ಮೂತ್ರಪಿಂಡ ಕಸಿ ಮಾಡಲಾಯಿತು. ಕಿಡ್ನಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದರಿಂದ ಮರುದಿನವೇ ಬಾಲಕನನ್ನು ಬಿಡುಗಡೆ ಮಾಡಲಾಯಿತು. ಪ್ರಸ್ತುತ ತಾಯಿ-ಮಗ ಪೂರ್ಣ ಆರೋಗ್ಯವಾಗಿದ್ದಾರೆ. ಮೂತ್ರಪಿಂಡ ಕಸಿಯ ವೆಚ್ಚವನ್ನು ರಾಜ್ಯ, ಕೇಂದ್ರ ಸರಕಾರದ ನಿಧಿ ಭರಿಸಿದೆ.
ಮೂತ್ರಪಿಂಡ ವಿಭಾಗದ ಮುಖ್ಯಸ್ಥ ಡಾ| ಶಂಕರ್ ಪ್ರಸಾದ್ ಎನ್. ಅವರು, ಮೂತ್ರಪಿಂಡದ ಕಾಯಿಲೆ ಇರುವ ಮಕ್ಕಳಿಗೆ ಆರಂಭಿಕ ಗುರುತಿಸುವಿಕೆ, ಸಮಯೋಚಿತ ಚಿಕಿತ್ಸೆ ಮತ್ತು ದೀರ್ಘಾವಧಿಯ ಆರೈಕೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಮಕ್ಕಳಲ್ಲಿ ಕಿಡ್ನಿ ಕಸಿಯೇ ಸೂಕ್ತ:
ಅಗಾಧವಾದ ಬೆಳವಣಿಗೆಯ ಸಾಮರ್ಥ್ಯ ಹೊಂದಿ ರುವ ಮಕ್ಕಳಲ್ಲಿ, ಮೂತ್ರಪಿಂಡ ಕಸಿ ಡಯಾಲಿಸಿಸ್ಗಿಂತ ಉತ್ತಮವಾದ ಆಯ್ಕೆಯಾಗಿದೆ, ಅದು ಉತ್ತಮ ಗುಣಮಟ್ಟದ ಜೀವನವನ್ನು ಒದಗಿಸುತ್ತದೆ. ಮಕ್ಕಳಲ್ಲಿ, ಎಬಿಒ ಹೊಂದಾಣಿಕೆಯಾಗದ ಕಸಿ ಮಾಡುವಿಕೆ, ರಕ್ತದ ಗುಂಪುಗಳು ಹೊಂದಾಣಿಕೆಯಾಗದಿದ್ದಾಗ ಕಸಿಗೆ ಸಾಕಷ್ಟು ತರಬೇತಿ, ಪರಿಣತಿಯ ಅಗತ್ಯವಿದೆ ಎಂದು ಮಕ್ಕಳ ಮೂತ್ರಪಿಂಡ ವಿಭಾಗದ ತಜ್ಞ ಡಾ| ದರ್ಶನ್ ರಂಗಸ್ವಾಮಿ ಅಭಿಪ್ರಾಯಪಟ್ಟರು.
ಕಸ್ತೂರ್ಬಾ ಆಸ್ಪತ್ರೆಯಲ್ಲಿ ಹೊಸದಾಗಿ ರೂಪುಗೊಂಡಿರುವ ಮಕ್ಕಳ ಮೂತ್ರಪಿಂಡ ವಿಭಾಗವು ಮಕ್ಕಳ ಎಲ್ಲ ಸಂಕೀರ್ಣ ಮೂತ್ರಪಿಂಡಗಳಿಗೆ ಸಂಬಂಧಿಸಿದ ಕಾಯಿಲೆಗಳನ್ನು ನಿರ್ವಹಿಸಲು ಸುಸಜ್ಜಿತವಾಗಿದೆ. ಡಯಾಲಿಸಿಸ್, ಮೂತ್ರಪಿಂಡದ ಬಯಾಪ್ಸಿ, ಕಿಡ್ನಿ ಕಸಿ ಸೌಲಭ್ಯ ಆಸ್ಪತ್ರೆಯಲ್ಲಿದ್ದು ಕರಾವಳಿ, ಮಧ್ಯ ಕರ್ನಾಟಕದ ರೋಗಿಗಳಿಗೆ ಅಗತ್ಯವಿರುವ ಎಲ್ಲ ಚಿಕಿತ್ಸೆ ಯನ್ನು ಒದಗಿಸುತ್ತಿದೆ ಎಂದು ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ ಶೆಟ್ಟಿ ತಿಳಿಸಿದ್ದಾರೆ.