ಉಡುಪಿ: ಸಂಭ್ರಮದ ಚೂರ್ಣೋತ್ಸವ
Team Udayavani, Jan 16, 2017, 4:35 PM IST
ಉಡುಪಿ: ಶ್ರೀಕೃಷ್ಣ ಮಠದಲ್ಲಿ ಮಕರಸಂಕ್ರಾಂತಿ ಮರುದಿನ ನಡೆಯುವ ಚೂರ್ಣೋತ್ಸವ ರವಿವಾರ ಸಂಭ್ರಮದಿಂದ ಸಂಪನ್ನಗೊಂಡಿತು.
ಶ್ರೀಕೃಷ್ಣ ಮಠದಲ್ಲಿ ವಾರ್ಷಿಕ ಸಪ್ತೋತ್ಸವ ಆರಂಭಗೊಳ್ಳುವುದೇ ಮಕರಸಂಕ್ರಾಂತಿಯ ಸಂದರ್ಭ. ಈ ಬಾರಿ ವಾಡಿಕೆಯ ಸಪೊ¤àತ್ಸವದ ಜತೆಗೆ ಆರು ಸೇವಾದಾರರ ಸಪ್ತೋತ್ಸವಗಳಿದ್ದವು. ಇದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಐದನೇ ಪರ್ಯಾಯದ ಮೊದಲ ಮಕರಸಂಕ್ರಾಂತಿ, ಚೂರ್ಣೋತ್ಸವವಾಗಿದೆ. ರವಿವಾರ ಬೆಳಗ್ಗೆ ಪರ್ಯಾಯ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಮಹಾಪೂಜೆಯನ್ನು ಮುಗಿಸಿದ ಬಳಿಕ ಚೂರ್ಣೋತ್ಸವ ಆರಂಭಗೊಂಡಿತು. ಬ್ರಹ್ಮರಥದಲ್ಲಿ ಶ್ರೀಕೃಷ್ಣ ಮತ್ತು ಮುಖ್ಯಪ್ರಾಣ ದೇವರ ಉತ್ಸವಮೂರ್ತಿಗಳನ್ನು ಇರಿಸಿ ಪೂಜೆ ಸಲ್ಲಿಸಿದ ಬಳಿಕ ರಥಬೀದಿಗೆ ಸಾವಿರಾರು ಭಕ್ತರ ಸಮ್ಮುಖ ಪ್ರದಕ್ಷಿಣೆ ಬಂದು ವಸಂತಮಹಲ್ನಲ್ಲಿ ಓಲಗಮಂಟಪ ಪೂಜೆ ನಡೆಯಿತು. ಅನಂತರ ಮಧ್ವ ಸರೋವರದಲ್ಲಿ ಉತ್ಸವಮೂರ್ತಿ ಸಹಿತವಾಗಿ ಎಲ್ಲ ಮಠಾಧೀಶರು ಅವಭೃಥ ಸ್ನಾನ ಮಾಡಿ ಸಪೊ¤àತ್ಸವವನ್ನು ಕೃಷ್ಣಾರ್ಪಣಗೈದರು.
ಪರ್ಯಾಯ ಶ್ರೀ ಪೇಜಾವರ ಹಿರಿಯ, ಕಿರಿಯ, ಶ್ರೀ ಕೃಷ್ಣಾಪುರ, ಶ್ರೀ ಶೀರೂರು, ಶ್ರೀ ಅದಮಾರು ಹಿರಿಯ, ಕಿರಿಯ, ಶ್ರೀ ಪಲಿಮಾರು, ಶ್ರೀ ಕಾಣಿಯೂರು, ಶ್ರೀ ಸೋದೆ ಮಠಾಧೀಶರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಉತ್ಸವ ಹೊರಡುವ ಮುನ್ನ ಪೂಜೆ ಬಳಿಕ ರಥದ ಮೇಲಿನಿಂದ ಪ್ರಸಾದವನ್ನು ಕೆಳಗೆ ಸೇರಿದ ಭಕ್ತರಿಗೆ ಹಾಕುವ ಕ್ರಮವಿದ್ದು ಈ ಬಾರಿ ಕೇವಲ ಫಲವಸ್ತುಗಳು, ನಾಣ್ಯಗಳನ್ನು ಕೆಳಗೆ ಹಾಕಲಾಯಿತು. ಲಡ್ಡು ಪ್ರಸಾದವನ್ನು ಸಾಂಕೇತಿಕವಾಗಿ ಕೆಳಗೆ ಹಾಕಲಾಯಿತು.