ಮೆಕ್ಕೆಕಟ್ಟು ದೇವಸ್ಥಾನ: ಗೆಂಡಸೇವೆ, ಶಡಿ ಉತ್ಸವ ಸಂಪನ್ನ
Team Udayavani, Mar 16, 2017, 12:50 PM IST
ಕೋಟ: ಮೆಕ್ಕೆಕಟ್ಟು ಶ್ರೀ ನಂದಿಕೇಶ್ವರ ದೇವಸ್ಥಾನದ ವಾರ್ಷಿಕ ಉತ್ಸವದ ಪ್ರಯುಕ್ತ ಮಾ. 14ರಂದು ಗೆಂಡಸೇವೆ, ಹಾಲಿಟ್ಟು ಸೇವೆ, ಮಹಾಪೂಜೆ, ಡಮರು ಸೇವೆ ಹಾಗೂ ಮಾ. 15ರಂದು ಶಡಿ ಉತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ದೇಗುಲ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ. ರಾಮಣ್ಣ ಹೆಗ್ಡೆ, ಸದಸ್ಯರಾದ ಗರಿಕೆಮಠ ಅನಂತ ಪದ್ಮನಾಭ ಅಡಿಗ, ಕಾಳು ಶಿರಿಯಾರ, ಸುಜಾತಾ ಪೂಜಾರಿ ಶಿರಿಯಾರ, ಭಾರತಿ ಎಸ್. ಹೆಗ್ಡೆ ಕೊಳ್ಕೆಬೈಲು, ಕೆ. ಗೋಪಾಲ ಶೆಟ್ಟಿ ಕೊಳ್ಕೆಬೈಲು, ಎ. ದಿವಾಕರ ಶೆಟ್ಟಿ ಜಂಬೂರು ಕೊಳ್ಕೆಬೈಲು ಹೊಸಮನೆ, ಪ್ರಸಾದ್ ಶೆಟ್ಟಿ ಕೊಳ್ಕೆಬೈಲು ನಡುಮನೆ, ನರಸಿಂಹ ಪೂಜಾರಿ ಶಿರಿಯಾರ ಹಾಗೂ ಅರ್ಚಕ ವೃಂದದವರು, ಊರ ಗಣ್ಯರು ಜಾತ್ರೆಯ ಉಸ್ತುವಾರಿ ವಹಿಸಿದ್ದರು.
ವಿಶೇಷ ಶಡಿ ಸೇವೆ
ಇಲ್ಲಿನ ಉತ್ಸವದ ವಿಶೇಷ ಆಕರ್ಷಣೆಯಾದ ಶಡಿ ಸೇವೆ ಮಾ. 15ರಂದು ಜರಗಿತು. ಪೌರಾಣಿಕ ಇತಿಹಾಸದಂತೆ ಗೌರಿ ದೇವಿ ಅಗ್ನಿ ಪ್ರವೇಶ ಮಾಡಿದ ಸಂಕೇತವಾಗಿ ಈ ಆಚರಣೆ ನಡೆಸಲಾಗುತ್ತದೆ ಎನ್ನುವ ಪ್ರತೀತಿ. ಎತ್ತರದ ಮೂರು ಕಬ್ಬಿಣದ ಕಂಬಕ್ಕೆ ಅಡ್ಡಲಾಗಿ ಮೂರು ಕಂಬಗಳನ್ನು ಜೋಡಿಸಿ ಅದರ ಒಂದು ತುದಿಗೆ ತೊಟ್ಟಿಲನ್ನು ಅಳವಡಿಸಿ, ಹರಕೆ ಹೊತ್ತ ವ್ಯಕ್ತಿಯನ್ನು ತೊಟ್ಟಿಲಲ್ಲಿ ಕುಳ್ಳಿರಿಸಿ ಇನ್ನೊಂದು ತುದಿಗೆ ಹಗ್ಗವನ್ನು ಕಟ್ಟಿ ತೊಟ್ಟಿಲನ್ನು ವೃತ್ತಕಾರವಾಗಿ ಸುತ್ತಿಸುವ ಮೂಲಕ ಶಡಿ ಹರಕೆ ತೀರಿಸಲಾಗುತ್ತದೆ.