ರಜೆ ಇಲ್ಲ, ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ: ಕೂರ್ಮಾ ರಾವ್
Team Udayavani, Jul 12, 2022, 7:15 AM IST
ಉಡುಪಿ: ಜಿಲ್ಲೆಯಲ್ಲಿ ಒಂದು ವಾರದಿಂದ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಸೋಮವಾರದಿಂದ ಕಾಲೇಜುಗಳು ಮತ್ತೆ ಆರಂಭವಾಗಿದ್ದು, ಮಂಗಳವಾರದಿಂದ ಶಾಲೆಗಳೂ ತೆರೆಯಲಿವೆ. ಆದರೆ ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯ ಮಾಡುವಂತಿಲ್ಲ. ಪರಿಸ್ಥಿತಿ ಆಧರಿಸಿ ಸ್ಥಳೀಯವಾಗಿ ರಜೆ ಘೋಷಣೆಗೆ ಅವಕಾಶ ನೀಡಿ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಆದೇಶದಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರಶಿಕ್ಷಣಾಧಿಕಾರಿಗಳು ಹಾಗೂ ತಹಶೀಲ್ದಾರರು ನೀಡಿರುವ ವರದಿ ಪರಿಗಣಿಸಿ ಶಾಲೆಗೆ ರಜೆ ಘೋಷಣೆ ಮಾಡಿಲ್ಲ. ಬದಲಾಗಿ ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯ ಮಾಡುವಂತಿಲ್ಲ. ತೋಡು, ಹಳ್ಳ ಮೊದಲಾದ ಕಠಿನ ದಾರಿಯಲ್ಲಿ ಬರುವ ವಿದ್ಯಾರ್ಥಿಗಳಿಗೆ ಮನೆಯಲ್ಲಿ ಸುರಕ್ಷಿತವಾಗಿರಲು ಸೂಚಿಸುವುದು, ಶಿಥಿಲ, ದುರ್ಬಲ ಕಟ್ಟಡದಲ್ಲಿ ಪಾಠ ಮಾಡುವಂತಿಲ್ಲ. ಪರಿಸ್ಥಿತಿ ಅವಲೋಕಿಸಿ, ಸ್ಥಳೀಯರವಾಗಿ ರಜೆ ಘೋಷಣೆ ಮಾಡಬಹುದು. ಈಗಾಗಲೇ ರಜೆ ನೀಡಿ ವ್ಯತ್ಯಯವಾಗಿರುವ ಕಲಿಕಾ ತರಗತಿಯನ್ನು ಶನಿವಾರ, ರವಿವಾರ ತರಗತಿ ನಡೆಸಿ ಸರಿದೂಗಿಸುವುದು.
ವಿದ್ಯಾರ್ಥಿಗಳು ತಗ್ಗು ಪ್ರದೇಶ, ನೆರೆಪೀಡಿತ ಪ್ರದೇಶ, ಕೆರೆ, ನದಿ, ಸಮುದ್ರಕ್ಕೆ ಹೋಗದಂತೆ ಶಿಕ್ಷಕರು, ಪಾಲಕ, ಪೋಷಕರು ಎಚ್ಚರಿಕೆ ವಹಿಸುವುದು. ವಿದ್ಯಾರ್ಥಿಗಳಿಗೆ ಪ್ರಾಕೃತಿಕ ವಿಕೋಪದ ಬಗ್ಗೆ ಮಾಹಿತಿ ನೀಡುವುದು, ಶಾಲಾವರಣದಲ್ಲಿ ಅಪಾಯಕಾರಿ ಮರಗಳಿದ್ದಲ್ಲಿ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿ ತೆರವುಗೊಳಿಸಲು ಕ್ರಮವಹಿಸಲು ಶಾಲಾಡಳಿತ ಮಂಡಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.