“ಸಂಘಟನಾತ್ಮಕ ತೊಡಗಿಸಿದಾಗ ಗೌರವ’
Team Udayavani, Feb 26, 2017, 3:34 PM IST
ಪುತ್ತೂರು : ಸಂಘ ಜೀವಿಯಾದ ಮನುಷ್ಯನು ಜಾತಿ, ಧರ್ಮ, ವಯಸ್ಸುಗಳ ವೈರುಧ್ಯವನ್ನು ಮೀರಿ ಸಂಘಟನಾತ್ಮಕವಾಗಿ ತೊಡಗಿಸಿಕೊಂಡಾಗ ಸಮಾಜದಲ್ಲಿ ವಿಶೇಷವಾಗಿ ಗುರುತಿಸಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಹೆಸರಿನಂತೆಯೇ ಸ್ನೇಹ ಸಂಗಮ ರಿಕ್ಷಾ ಸಂಘಟನೆ ಇತರರಿಗೆ ಮಾದರಿಯಾಗಿದೆ ಎಂದು ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಫೆಲಿಕ್ಸ್ ಡಿ’ಸೋಜಾ ಹೇಳಿದರು.
ನೆಲ್ಲಿಕಟ್ಟೆ ಶಾಲಾ ಸಭಾಂಗಣದಲ್ಲಿ ಶನಿವಾರ ನಡೆದ ಪುತ್ತೂರು ಸ್ನೇಹ ಸಂಗಮ ಆಟೋ ರಿಕ್ಷಾ ಚಾಲಕ -ಮಾಲಕರ ಸಂಘದ 20ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರಿ ಇಲಾಖೆಗಳು ನೀಡುವ ಎಲ್ಲ ಸವಲತ್ತುಗಳನ್ನು ರಿಕ್ಷಾ ಕಾರ್ಮಿಕರು ಪಡೆದುಕೊಳ್ಳಬೇಕು ಎಂದು ಹೇಳಿದ ಅವರು, ಸಂಚಾರ ನಿಯಮಗಳನ್ನು ಪಾಲಿಸ ಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಅಡ್ಡಾ ದಿಡ್ಡಿ ವಾಹನಗಳನ್ನು ನಿಲ್ಲಿಸಬಾರದು, ಅಪಘಾತ ಗಳು ಸಂಭವಿಸಿದ ಸಂದರ್ಭ ನೆರವಿಗೆ ಧಾವಿಸಬೇಕು ಎಂದು ರಿಕ್ಷಾ ಚಾಲಕರಿಗೆ ಸಲಹೆ ನೀಡಿದರು.
ಒಂದುಗೂಡಿಸುವ ಕೆಲಸ
ಮುಖ್ಯ ಅತಿಥಿಯಾಗಿದ್ದ ಈಶ್ವರಮಂಗಲ ಶ್ರೀ ಪಂಚಮುಖೀ ಆಂಜನೇಯ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ, ಸಮಾಜದ ಎಲ್ಲರನ್ನೂ ಒಂದುಗೂಡಿಸುವ ಕೆಲಸ ರಿಕ್ಷಾ ಚಾಲಕರ ಸಂಘದಿಂದ ನಡೆಯುತ್ತಿದೆ. ದೇವಸ್ಥಾನಕ್ಕೆ ಹೋಗುವ ಮೆಟ್ಟಿಲಿನ ಕಾರ್ಯದಂತೆ ಯಾರಿಗೂ ತಿಳಿಯದಂತೆ ಸಮಾಜದ ಸೇವೆ ಮಾಡುವವರು ರಿಕ್ಷಾ ಚಾಲಕರು ಎಂದು ಹೇಳಿದರು.
ಪುತ್ತೂರು ಮಾçದೆ ದೇವುಸ್ ಚರ್ಚ್ನ ಧರ್ಮಗುರು ಆಲ್ಫೆ†ಡ್ ಜೆ. ಪಿಂಟೋ ಮಾತ ನಾಡಿ, ಸಮಯದ ಪರಿವೆಯಿಲ್ಲದೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಶಿಸ್ತಿನ ಸಿಪಾಯಿ ಗಳು ರಿಕ್ಷಾ ಚಾಲಕರು. ಸಂಘದ ಕೆಲಸದ ಜತೆಗೆ ಪ್ರತಿಯೊಬ್ಬ ಸದಸ್ಯರ ಮನೆಗಳೂ ಬೆಳಗಬೇಕು ಎಂದು ಹಾರೈಸಿದರು.
ಜಗತ್ತಿನಲ್ಲಿ ಅತ್ಯಂತ ಕೊರತೆಯಾಗಿ ಕಾಡುತ್ತಿರುವುದು ಸ್ನೇಹ. ಆದರೆ ಪುತ್ತೂರಿನಲ್ಲಿ ಪ್ರೀತಿ, ಸ್ನೇಹದ ಕೊರತೆಯನ್ನು ನೀಗಿಸಿ ಮಧ್ಯ ರಾತ್ರಿಯಲ್ಲೂ ಧೈರ್ಯದಿಂದ ತೆರಳಲು ಸ್ನೇಹ ಸಂಗಮ ಕಾರಣವಾಗುತ್ತಿದೆ. ಅತ್ಯಂತ ಪವಿತ್ರವಾದ ಜಾತ್ಯತೀತ ಸಂವಿಧಾನವನ್ನು ಹೊಂದಿರುವ ಭಾರತದಲ್ಲಿ ಸೌಹಾರ್ದ ಹೆಚ್ಚಿಸುವ ನಿಟ್ಟಿನಲ್ಲಿ ಇಂತಹ ಸಂಘಟನೆಗಳು ಹೆಚ್ಚು ಹೆಚ್ಚು ಹುಟ್ಟಿಕೊಳ್ಳಬೇಕು ಎಂದು ಕುಂಬ್ರದ ಕರ್ನಾಟಕ ಇಸ್ಲಾಂ ಅಕಾಡೆಮಿ ಮ್ಯಾನೇಜರ್ ಕೆ.ಆರ್. ಹುಸೇನ್ ದಾರಿಮಿ ಆಶಯ ವ್ಯಕ್ತಪಡಿಸಿದರು.
ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಓಮನ ಶುಭಹಾರೈಸಿದರು. ಸ್ನೇಹ ಸಂಗಮ ರಿಕ್ಷಾ ಚಾಲಕ -ಮಾಲಕರ ಸಂಘದ ಗೌರವಾಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಹರಿಣಾಕ್ಷಿ ಜೆ. ಶೆಟ್ಟಿ, ನಗರಸಭಾ ಮಾಜಿ ಸದಸ್ಯ ನವೀನ್ಚಂದ್ರ ನಾೖಕ್, ಸ್ನೇಹಸಂಗಮದ ಸ್ಥಾಪಕಾಧ್ಯಕ್ಷ ಸುಧಾಕರ್, ಸ್ನೇಹಸಂಗಮದ ಅಧ್ಯಕ್ಷ ಲೋಕೇಶ್ ಗೌಡ ಉಪಸ್ಥಿತರಿದ್ದರು.
ಸಂಘದ ಕಾರ್ಯಾಧ್ಯಕ್ಷ ಚನಿಯಪ್ಪ ನಾಯ್ಕ ಸ್ವಾಗತಿಸಿ, ಪ್ರಕಾಶ್ ಹಾರಾಡಿ ವರದಿ ವಾಚಿಸಿದರು. ದಿಲೀಪ್ ಮೊಟ್ಟೆತ್ತಡ್ಕ ನಿರ್ವಹಿಸಿದರು. ಸಂಘದ ವಿವಿಧ ಘಟಕಗಳ ಸದಸ್ಯರು ಪಾಲ್ಗೊಂಡರು.