ಜೀವನದಲ್ಲಿ ಸಾಧನೆ ಮುಖ್ಯ: ಗೋಪಾಲ ಪೂಜಾರಿ
Team Udayavani, Sep 12, 2017, 8:00 AM IST
ಬೈಂದೂರು: ಜೆ.ಸಿ.ಐ. ಶಿರೂರು ಇದರ ಜೇಸಿ ಸಪ್ತಾಹ -2017 ಉದ್ಘಾಟನಾ ಕಾರ್ಯಕ್ರಮ ಕೀರ್ತಿ ಶೇಷ ವಿ.ಐ. ಶೆಟ್ಟಿ ವೇದಿಕೆ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನ ಶಿರೂರಿನಲ್ಲಿ ನಡೆಯಿತು.
ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಕಾರ್ಯಕ್ರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಜೀವನದಲ್ಲಿ ನಾವೆಷ್ಟು ಗಳಿಸಿದ್ದೇವೆ ಎನ್ನುವುದಕ್ಕಿಂತ ನಾವೇನು ಸಾಧಿಸಿದ್ದೇವೆ ಎನ್ನುವುದು ಮುಖ್ಯ. ಜೆ.ಸಿ.ಐ. ಸಂಸ್ಥೆ ಅಸಂಖ್ಯಾತ ಯುವ ನಾಯಕರನ್ನು ಸಮಾಜದ ಮುಖ್ಯವಾಹಿನಿಗೆ ಪರಿಚಯಿಸಿದೆ. ವ್ಯಕ್ತಿತ್ವ ವಿಕಸನ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಜೆ.ಸಿ.ಐ. ಸಂಸ್ಥೆ ಇತರರಿಗೆ ಮಾದರಿಯಾಗಿದೆ ಎಂದರು.
ಈಗಾಗಲೇ ಬೈಂದೂರು ತಾಲೂಕು ಘೋಷಣೆಯಾಗಿದೆ. ಜನವರಿ ಒಂದರಂದು ತಾಲೂಕು ಕೇಂದ್ರದ ಎಲ್ಲ ಚಟುವಟಿಕೆಗಳಿಗೆ ಚಾಲನೆ ನೀಡಲಾಗುತ್ತದೆ. ಶಿರೂರು ಗ್ರಾಮ ಅತ್ಯಂತ ದೊಡ್ಡ ಗ್ರಾಮ ಪಂಚಾಯತ್ ಆಗಿರುವ ಕಾರಣ ಮುಂದಿನ ದಿನದಲ್ಲಿ ಪಟ್ಟಣ ಪಂಚಾಯತ್ ಪ್ರಾರಂಭಿಸುವ ಪ್ರಕ್ರಿಯೆ ನಡೆಯಲಿದೆ ಎಂದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಜಿ. ಗೋಕುಲ ಶೆಟ್ಟಿ, ಜೆ.ಸಿ.ಐ. ಸ್ಥಾಪಕಾಧ್ಯಕ್ಷ ಮೋಹನ್ ರೇವಣಕರ್, ಸಪ್ತಾಹ ಸಭಾಪತಿ ಕೃಷ್ಣಮೂರ್ತಿ ಶೇಟ್, ನಿಕಟಪೂರ್ವಾಧ್ಯಕ್ಷ ಹರೀಶ್ ಶೇಟ್, ಜೇಸಿರೆಟ್ ಅಧ್ಯಕ್ಷೆ ಗಂಗಾ, ಜೂನಿಯರ್ ಜೇಸಿ ಅಧ್ಯಕ್ಷ ಲೋಕೇಶ್ ಪೂಜಾರಿ ಉಪಸ್ಥಿತರಿದ್ದರು.ಜೆ.ಸಿ.ಐ. ಅಧ್ಯಕ್ಷ ಸ್ವಾಗತಿಸಿ, ಕಾರ್ಯದರ್ಶಿ ಪಾಂಡುರಂಗ ಅಳ್ವೆಗದ್ದೆ ವಂದಿಸಿದರು.