ಹೃದಯ ಕಲಶಾಭಿಷೇಕದಿಂದ ದೇವತಾನುಗ್ರಹ ಪ್ರಾಪ್ತಿ: ಪೇಜಾವರ ಶ್ರೀ
ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇಗುಲ
Team Udayavani, Mar 24, 2024, 12:53 AM IST
ಉಡುಪಿ: ತಂತ್ರಿವರ್ಯರು ದೇವರಿಗೆ ಕಲಶದಿಂದ ಅಭಿಷೇಕ ಮಾಡಿ ಜೀವ ಕಳೆ ತುಂಬುತ್ತಾರೆ. ಭಕ್ತರು ಹೃದಯವೆಂಬ ಕಲಶದಲ್ಲಿ ನೀರನ್ನು ತುಂಬಿ ಮನಸ್ಸಿನಲ್ಲೇ ದೇವರಿಗೆ ಕಲಶಾಭಿಷೇಕ ಮಾಡಿದರೆ ದೇವರ ಸಂಪೂರ್ಣ ಅನುಗ್ರಹ ಪ್ರಾಪ್ತಿಯಾಗಲಿದೆ. ಪ್ರತಿನಿತ್ಯ ಮನೆಯಲ್ಲಿ ಶ್ರದ್ಧಾ ಭಕ್ತಿಯಿಂದ ಪೂಜಾ ಕೈಂಕರ್ಯ ನಡೆಸಿದರೆ ಅಂತಹ ಮನೆಯಲ್ಲಿ ದೇವರ ಸಾನ್ನಿಧ್ಯ ಇರುತ್ತದೆ. ಅಲ್ಲದೆ ಕಷ್ಟಗಳೆಲ್ಲ ಪರಹಾರವಾಗಿ ಸುಖ, ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದು ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ನುಡಿದರು.
ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇಗುಲದಲ್ಲಿ ಬ್ರಹ್ಮಕಲಶೋತ್ಸವ ಅಂಗವಾಗಿ ಶ್ರೀ ಮಹಾಗಣಪತಿ ದೇವರ ಜೀವ ಕುಂಭಾಭಿಷೇಕ ಪ್ರಯುಕ್ತ ಶುಕ್ರವಾರ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀಪಾದರು ಆಶೀರ್ವಚನ ನೀಡಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿ| ಹರಿದಾಸ ಭಟ್ ಅಧ್ಯಕ್ಷತೆ ವಹಿಸಿದ್ದರು. ವಿ| ಪಂಜ ಭಾಸ್ಕರ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು.
ಪೇಜಾವರ ಮಠದ ದಿವಾನ ಎಂ. ರಘುರಾಮ ಆಚಾರ್ಯ, ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಭಟ್, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಶ ನಾಯಕ್, ಸಮಿತಿ ಸಂಘಟನ ಕಾರ್ಯದರ್ಶಿ ಸದಾನಂದ ಪ್ರಭು, ಉಪಾಧ್ಯಕ್ಷ ಶ್ರೀಕಾಂತ್ ನಾಯಕ್ ಅಲೆವೂರು, ಉದ್ಯಮಿ ರಾಮಕೃಷ್ಣ ನಾಯಕ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಉಮೇಶ ನಾಯಕ್ ನಿರೂಪಿಸಿದರು. ಗೌರವ ಸಲಹೆಗಾರ ಸತೀಶ ಪೂಜಾರಿ ವಂದಿಸಿದರು.