ಮಕ್ಕಳ ಕೋವಿಡ್ ಲಸಿಕೆ ಅಭಿಯಾನಕ್ಕೆ ಸರ್ವಸನ್ನದ್ಧ
"ಉದಯವಾಣಿ' ಫೋನ್ ಇನ್ ಕಾರ್ಯಕ್ರಮದಲ್ಲಿ ತಜ್ಞರ ಅಭಿಮತ
Team Udayavani, Jan 1, 2022, 6:00 AM IST
ಮಣಿಪಾಲ: ಶಾಲಾ ಮಕ್ಕಳಿಗೆ (15ರಿಂದ 17 ವರ್ಷ) ಲಸಿಕೆ ಕೊಡುವ ಅಭಿಯಾನ ಜ. 3ರಿಂದ 6ರ ವರೆಗೆ ಎಲ್ಲೆಡೆ ನಡೆಯಲಿದೆ. ಇದಕ್ಕಾಗಿ ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದೆ. ಎಲ್ಲ ವಿದ್ಯಾರ್ಥಿಗಳು ಮತ್ತು ಪೋಷಕರು ಸಹಕರಿಸಬೇಕು ಎಂದು ತಜ್ಞರ ತಂಡ ಕರೆ ನೀಡಿದೆ.
ಶುಕ್ರವಾರ “ಉದಯವಾಣಿ’ ಏರ್ಪಡಿಸಿದ ಫೋನ್ ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗಭೂಷಣ ಉಡುಪ, ಮಣಿಪಾಲ ಕೆಎಂಸಿ ಮಕ್ಕಳ ವಿಭಾಗದ ಪ್ರಾಧ್ಯಾಪಕಿ ಡಾ| ಪುಷ್ಪಾ ಕಿಣಿ, ಕ್ಷಿಪ್ರ ಕಾರ್ಯಪಡೆಯ ಸಲಹೆಗಾರ ಡಾ|ಅಶ್ವಿನಿಕುಮಾರ್, ಡಿಡಿಪಿಯು ಕಚೇರಿಯ ಅಧೀಕ್ಷಕಿ ಸೌಂದರ್ಯ ರಾಜೇಶ್ವರಿ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು.
ಪ್ರಮುಖಾಂಶಗಳು
-ಜ. 3ರಿಂದ 6ರ ವರೆಗೆ ನಾಲ್ಕು ದಿನಗಳಲ್ಲಿ ಮಕ್ಕಳಿಗೆ ಲಸಿಕಾಭಿಯಾನ. ಅನಿವಾರ್ಯ ಕಾರಣಗಳಿಂದ ಬಿಟ್ಟು ಹೋದ ಮಕ್ಕಳಿಗೆ ಮುಂದೆ ನಾಲ್ಕು ದಿನ ಬಿಟ್ಟು ಲಸಿಕೆ ನೀಡಲಾಗುವುದು.
– ಸಾಕಷ್ಟು ಲಸಿಕೆಗಳು ಆರೋಗ್ಯ ಇಲಾಖೆಯಲ್ಲಿ ದಾಸ್ತಾನು
– ಉಷ್ಣಾಂಶ ನೋಡಿಯೇ ಲಸಿಕೆ ನೀಡಲಾಗುವುದು. ಜ್ವರ ಇರುವವರಿಗೆ ಲಸಿಕೆ ಕೊಡುವುದಿಲ್ಲ.
– ತಲೆ ನೋವು, ಮೈಕೈ ನೋವು ಬಂದರೂ ಅದು ಗಂಭೀರ ವಿಷಯವಲ್ಲ.
– ಬೇರೆ ಯಾವುದಾದರೂ ಲಸಿಕೆ ಕೊಟ್ಟಿದ್ದರೆ 15 ದಿನ ಬಿಟ್ಟು ಲಸಿಕೆ ಪಡೆದುಕೊಳ್ಳಬೇಕು. ನಾಯಿ ಕಚ್ಚಿದರೆ ಮಾತ್ರ ಕಡ್ಡಾಯವಾಗಿ ಲಸಿಕೆ ಪಡೆಯಲೇಬೇಕು.
– ಮೊದಲ ಕೊರೊನಾ ಲಸಿಕೆಯನ್ನು ಪಡೆದ ಬಳಿಕ 28 ದಿನ ಬಿಟ್ಟು ಎರಡನೆಯ ಲಸಿಕೆ ಪಡೆಯಬೇಕು.
– ಮೊಬೈಲ್ ನಂಬರ್ ಕೊಟ್ಟಿರಬೇಕು.
– ಆಧಾರ್ ಕಾರ್ಡ್ ಕೊಟ್ಟರೆ ಅದರಲ್ಲಿರುವ ಹೆಸರನ್ನು ತಪ್ಪಾಗದೆ ನಮೂದಿಸಲು ಸಾಧ್ಯವಾಗುತ್ತದೆ. ಇದು ಪ್ರಮಾಣಪತ್ರ ಪಡೆಯಲು ಸಹಕಾರಿ.
– ಮಧುಮೇಹದ ಮಕ್ಕಳಿಗೂ ಲಸಿಕೆ ಕೊಡಿಸಬೇಕು.
– ಡೆಂಗ್ಯೂ, ಮಲೇರಿಯ ಜ್ವರ ಬಂದಿದ್ದರೆ 2ರಿಂದ 3 ವಾರ ಅಂತರವಿಟ್ಟು ಲಸಿಕೆ ನೀಡಬೇಕು.
– ಲಸಿಕೆ ಪಡೆಯುವಾಗ ಆಹಾರ ಸೇವಿಸಿರಬೇಕು.
ಸಂದೇಹ ಬಿಟ್ಟು ಲಸಿಕೆ ಹಾಕಿಸಿಕೊಳ್ಳಿ
ಉಡುಪಿ: ರಾಜ್ಯದಲ್ಲಿ ಸೋಮವಾರದಿಂದ 15ರಿಂದ 17 ವರ್ಷ ವಯೋಮಿತಿಯವರಿಗೆ ಕೋವಿಡ್ ಲಸಿಕೆ ಹಾಕುವ ಅಭಿಯಾನ ಆರಂಭಗೊಳ್ಳಲಿದೆ. 3-4 ದಿನಗಳಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ರಾಜ್ಯದ 31,75,000 ಮಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.
ದ.ಕ.ಜಿಲ್ಲೆಯಲ್ಲಿ 1,01,549 ಮಂದಿ ಫಲಾನುಭವಿಗಳಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಸುಮಾರು 53,555 ಮಂದಿ ಮಕ್ಕಳಿಗೆ 3-4 ದಿನಗಳಲ್ಲಿ 397 ಶಾಲಾ-ಕಾಲೇಜುಗಳಲ್ಲಿ ಲಸಿಕಾಕರಣಕ್ಕೆ ಬೇಕಾದ ಎಲ್ಲ ತಯಾರಿಯನ್ನು ಜಿಲ್ಲಾಡಳಿತದ ಸಹಕಾರದಿಂದ ತಯಾರಿ ನಡೆಸಲಾಗಿದೆ. ಇದಕ್ಕೆ ಮಕ್ಕಳ-ಪೋಷಕರ ಸಹಕಾರ ಅತೀ ಅಗತ್ಯವಾಗಿದೆ. ಶಾಲೆಯಿಂದ ಹೊರಗುಳಿದ ಅಥವಾ ಶಾಲೆ ಬಿಟ್ಟ ಮಕ್ಕಳ ಲಸಿಕಾಕರಣವನ್ನು ಹತ್ತಿರದ ಲಸಿಕಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಕಾರ್ಮಿಕ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯು ಇಂತಹ ಮಕ್ಕಳನ್ನು ಗುರುತಿಸಿ ಲಸಿಕೆಗಳನ್ನು ನೀಡಲಾಗುತ್ತದೆ.
ಎ. ಕೃಷ್ಣಾನಂದ, ಐಕಳ, ರವೀಂದ್ರ ಬಂಟ್ವಾಳ, ಸದಾಶಿವ ಭಂಡಾರಿ ಸುರತ್ಕಲ್, ರೆಹಮಾನ್, ಅಶೋಕ್, ಕಾರ್ಕಳ
ಪ್ರ: ಒತ್ತಾಯಪೂರ್ವಕವಾಗಿ ಮಕ್ಕಳಿಗೆ ಲಸಿಕೆ ಹಾಕಿಸುವುದರಿಂದ ಖನ್ನತೆ/ಅಡ್ಡ ಪರಿಣಾಮ ಉಂಟಾಗಬಹುದೇ?
ಉ: ಇದರಿಂದ ಖನ್ನತೆ ಉಂಟಾಗಲು ಸಾಧ್ಯವಿಲ್ಲ. ದೊಡ್ಡವರಿಗೆ ಕೊಡುವ ಲಸಿಕೆಯನ್ನೇ ಮಕ್ಕಳಿಗೆ ನೀಡಲಾಗುತ್ತಿದೆ. ಸಿಬಂದಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಲಸಿಕೆ ಪಡೆದ ಬಳಿಕವೂ ಅವರ ಮೇಲೆ ಗಮನವಿರಿಸಲಾಗುತ್ತದೆ.
ಲಸಿಕೆ ತೆಗೆದುಕೊಂಡ ಬಳಿಕ ಜ್ವರಲಕ್ಷಣಗಳು ಕಂಡುಬಂದರೆ ಪ್ಯಾರಸಿಟಾಮಲ್ ಮಾತ್ರೆ ಸೇವಿಸಬಹುದಾಗಿದೆ.
ಹಮೀದ್, ವಿಟ್ಲ
ಪ್ರ: ಜ್ವರದಿಂದ ಬಳಲುತ್ತಿರುವ ಮಕ್ಕಳು ಲಸಿಕೆ ತೆಗೆದುಕೊಳ್ಳಬಹುದೇ?
ಉ: ಲಸಿಕೆ ನೀಡುವ ಮುನ್ನ ಮಕ್ಕಳ ಥರ್ಮಲ್ ಸ್ಕ್ಯಾನ್ ಮಾಡಲಾಗುತ್ತದೆ. ಜ್ವರ ಇರುವ ಮಕ್ಕಳಿಗೆ ಲಸಿಕೆ ನೀಡುವುದಿಲ್ಲ.
ಯಶೋದಾ, ಮೂಡುಬಿದಿರೆ
ಪ್ರ: ಲಸಿಕೆ ತೆಗೆದುಕೊಂಡ ಬಳಿಕ ಇತರ ಲಸಿಕೆ ಪಡೆದುಕೊಳ್ಳಬಹುದೆ?
ಉ: ಲಸಿಕೆ ಪಡೆದ ಬಳಿಕ ಇತರ ಲಸಿಕೆಯನ್ನು ಒಂದು ತಿಂಗಳ ಬಳಿಕ ಪಡೆದುಕೊಳ್ಳಬಹುದು. ರೇಬಿಸ್ ಲಸಿಕೆಯನ್ನು ಯಾವಾಗ ಬೇಕಿದ್ದರೂ ನೀಡಬಹುದಾಗಿದೆ. ಉಳಿದ ಲಸಿಕೆ ನೀಡುವಂತಿಲ್ಲ.
ಗೋವಿಂದರಾಜ ಶೆಣೈ, ಅಡ್ಯನಡ್ಕ, ಗಣೇಶ್, ಕುಂದಾಪುರ
ಪ್ರ: ಲಸಿಕೆಯನ್ನು ಪಡೆದುಕೊಳ್ಳುವುದು ಹೇಗೆ?
ಉ: ಶಾಲೆಗಳಲ್ಲಿಯೇ ಇದನ್ನು ಉಚಿತವಾಗಿ ನೀಡಲಾಗುತ್ತದೆ. ಈ ಅಭಿಯಾನದಲ್ಲಿ ಲಸಿಕೆ ತೆಗೆದುಕೊಳ್ಳಲು ಅಸಾಧ್ಯವಾದರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಲಸಿಕೆ ಪಡೆದುಕೊಳ್ಳಬಹುದಾಗಿದೆ.
ಅಶೋಕ್ ಕುಮಾರ್, ಕಡಬ, ಉಷಾ ಶೆಟ್ಟಿ, ಉಜಿರೆ, ಶ್ರೀಪಾದ್ ಹೆಗಡೆ, ಕೋಟೇಶ್ವರ, ಸುನಿಲ್, ಮಲ್ಪೆ
ಪ್ರ: ಯಾವ ಕಾಯಿಲೆ ಇರುವ ಮಕ್ಕಳಿಗೆ ಲಸಿಕೆ ನೀಡಬಾರದು?
ಉ: ಮುಖ್ಯವಾಗಿ ಇಂಜೆಕ್ಷನ್ನಿಂದ ಅಲರ್ಜಿ ಉಂಟಾಗುವ ಮಕ್ಕಳು ಹಾಗೂ ಕ್ಯಾನ್ಸರ್ ರೋಗ ಲಕ್ಷಣವುಳ್ಳವರು ಲಸಿಕೆ ತೆಗೆದುಕೊಳ್ಳಬಾರದು. ಡಯಾಲಿಸಿಸ್, ಫುಡ್ ಅಲರ್ಜಿ ಇರುವವರೂ ಲಸಿಕೆ ಪಡೆದುಕೊಳ್ಳಬಹುದಾಗಿದೆ. ಮಕ್ಕಳ ದೇಹದ ಉಷ್ಣತೆ ಪರೀಕ್ಷಿಸಿ ಲಸಿಕೆ ನೀಡಲಾಗುತ್ತದೆ. ಇತರ ಕಾಯಿಲೆಗಳಿದ್ದರೆ ವೈದ್ಯರೊಂದಿಗೆ ಮೊದಲೇ ಸಮಾಲೋಚನೆ ಮಾಡಬೇಕು. ಆದಷ್ಟು ಬೇಗ ಈ ಬಗ್ಗೆ ತಿಳಿಸಿದರೆ ಉತ್ತಮ.
ಸ್ವಾತಿ, ಉಡುಪಿ
ಪ್ರ: ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಳವಿರುತ್ತದೆ ಎನ್ನುತ್ತಾರೆ ಹಾಗಾದರೆ ಲಸಿಕೆ ತೆಗೆದುಕೊಳ್ಳುವ ಅಗತ್ಯವಿದೆಯೇ?
ಉ: ರೋಗನಿರೋಧಕ ಶಕ್ತಿ ಹೆಚ್ಚಳವಿದ್ದರೂ ಗಂಭೀರ ಕಾಯಿಲೆ ತಡೆಯಲು ಲಸಿಕೆ ಪಡೆಯಲೇಬೇಕಿದೆ. ಎಲ್ಲ ವಿದ್ಯಾರ್ಥಿಗಳೂ ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು.
ಸುಬ್ರಹ್ಮಣ್ಯ ಶೆಟ್ಟಿ, ಕುಂದಾಪುರ, ಪ್ರಕಾಶ್ ಪಡಿಯಾರ್, ಮರವಂತೆ
ಪ್ರ: ಜಿಲ್ಲೆಯಲ್ಲಿ ಮಕ್ಕಳಿಗೆ ಬೇಕಾಗುವಷ್ಟು ಲಸಿಕೆ ಲಭ್ಯತೆ ಹಾಗೂ ವ್ಯವಸ್ಥೆ ಕಲ್ಪಿಸಲಾಗಿದೆಯಾ? ನೋಂದಣಿ ಹೇಗೆ? ಪೋಷಕರು, ಶಿಕ್ಷಕರಿಗೆ ಮಾಹಿತಿ ಇದೆಯಾ?
ಉ: 15ರಿಂದ 18 ವರ್ಷದೊಳಗಿನವರಿಗೆ ಶಾಲೆಯಲ್ಲಿ ಲಸಿಕೆ ನೀಡಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಸರಕಾರದಿಂದ ಪ್ರತೀ ಶಾಲೆಯ ಶಿಕ್ಷಕರು, ಪೋಷಕರ ಸಭೆ ಕರೆದು ಮಾಹಿತಿ ನೀಡಲಾಗಿದೆ. ಸೋಮವಾರದಿಂದ ಲಸಿಕೆ ಆರಂಭವಾಗಲಿದೆ. ಆ ದಿನ ಬಂದವರಿಗೆ ಅಲ್ಲಿಯೇ ಲಸಿಕೆ ನೀಡಲಾಗುತ್ತದೆ. ಆರೋಗ್ಯ ಕೇಂದ್ರಕ್ಕೆ ತೆರಳುವ ಆವಶ್ಯಕತೆಯಿಲ್ಲ. ಆಧಾರ್ ಕಾರ್ಡ್ ಹಾಗೂ ಮೊಬೈಲ್ ಕಡ್ಡಾಯವಾಗಿ ತರಬೇಕು.
ರಾಕೇಶ್, ಕಾಪು
ಪ್ರ: ಶಾಲೆಯಿಂದ ಬಿಟ್ಟ ಹಾಗೂ ಹೊರಗುಳಿದ ವಿದ್ಯಾರ್ಥಿಗಳಿಗೆ ಯಾವ ರೀತಿ ಲಸಿಕೆ ನೀಡಲಾಗುತ್ತದೆ?
ಉ: ಶಾಲೆಯಿಂದ ಹೊರಗುಳಿದವರ ಬಗ್ಗೆ ಸ್ಥಳೀಯಾಡಳಿತ, ಕಾರ್ಮಿಕ ಇಲಾಖೆ, ಆ ಶಾಲೆಯ ಮುಖ್ಯಸ್ಥರಿಂದ ಮಾಹಿತಿ ಪಡೆದುಕೊಂಡು ಲಸಿಕೆ ನೀಡಲಾಗುವುದು.
ಕೀರ್ತನ್, ಬಂಟ್ವಾಳ
ಪ್ರ: ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ಮಾತ್ರ ಯಾಕೆ ನೀಡಲಾಗುತ್ತೆ?
ಉ: ಯಾವುದೇ ಲಸಿಕೆ ನೀಡುವ ಮುನ್ನ ವೈದ್ಯರು ಅದರ ಬಗ್ಗೆ ಸೂಕ್ತ ಪ್ರಯೋಗ ಮಾಡುತ್ತಾರೆ. ಅದರಂತೆ ಮಕ್ಕಳಿಗೆ ಈ ಲಸಿಕೆ ಸುರಕ್ಷಿತ ಎಂದು ತಿಳಿದುಬಂದಿದೆ. ಹಾಗೆಯೇ ಕೋವಿಶೀಲ್ಡ್ ಲಸಿಕೆಯ ಬಗ್ಗೆಯೂ ಪ್ರಯೋಗ ಮಾಡಲಾಗಿದ್ದು, ಇದರ ವರದಿ ಬಂದ ಬಳಿಕ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ