ಹೆಲ್ಮೆಟ್ ಧರಿಸದ ಸವಾರನನ್ನು ತಡೆದ ಯಮಧರ್ಮ
Team Udayavani, Oct 3, 2018, 1:35 AM IST
ಕೋಟ: ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸುವ ಸವಾರ ಹಾಗೂ ಸೀಟ್ ಬೆಲ್ಟ್ ಇಲ್ಲದೆ ಕಾರು ಚಲಾಯಿಸುವ ಚಾಲಕನನ್ನು ಯಮಧರ್ಮರಾಯ ತಡೆದು, ಕುತ್ತಿಗೆಗೆ ಹಗ್ಗ ಬಿಗಿದು ರಸ್ತೆ ಸುರಕ್ಷೆ ಕ್ರಮಗಳನ್ನು ಪಾಲಿಸದಿದ್ದರೆ ನಾನು ನಿನ್ನ ಬಳಿ ಬರುತ್ತೇನೆ ಎಂದು ಬುದ್ಧಿ ಹೇಳಿದ ಸನ್ನಿವೇಶ ಕೋಟದಲ್ಲಿ ನಡೆಯಿತು. ಅಂದ ಹಾಗೆ ಇಲ್ಲಿಗೆ ಬಂದದ್ದು ನಿಜವಾದ ಯಮನಲ್ಲ. ರಸ್ತೆ ಸುರಕ್ಷತೆ ಕಾರ್ಯಕ್ರಮದ ಸಲುವಾಗಿ ಕೋಟ ಪೊಲೀಸ್ ಠಾಣೆ, ಗಿಳಿಯಾರು ಯುವಕ ಮಂಡಲ, ಕುಂದಾಪುರ ಕುಟುಂಬ ಫೇಸ್ ಬುಕ್ ಪೇಜ್ ಸಂಯುಕ್ತ ಆಶ್ರಯದಲ್ಲಿ ನಡೆಸಿದ ಜಾಗೃತಿ ಕಾರ್ಯಕ್ರಮದಲ್ಲಿ ಯಮನ ವೇಷಧಾರಿ ಮೂಲಕ ಈ ರೀತಿಯ ಎಚ್ಚರಿಕೆ ಸಂದೇಶ ನೀಡಲಾಯಿತು. ಕಾರ್ಯಕ್ರಮದಲ್ಲಿ ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕ ನರಸಿಂಹ ಶೆಟ್ಟಿ ಉಪಸ್ಥಿತರಿದ್ದು, ರಸ್ತೆ ಸುರಕ್ಷತೆಯ ನಿಯಮದ ಕುರಿತು ತಿಳಿಸಿದರು ಹಾಗೂ ಹೆಲ್ಮೆಟ್ ಧರಿಸದ ಸವಾರರಿಗೆ ಗುಲಾಬಿ ಹೂ ನೀಡಿ ಬುದ್ಧಿವಾದ ಹೇಳಿದರು.
ಗಿಳಿಯಾರು ಯುವಕ ಮಂಡಲದ ಅಧ್ಯಕ್ಷ ಜಯ ಮೊಗವೀರ, ಕಾರ್ಯದರ್ಶಿ ರಾಘವೇಂದ್ರ ಕುಂದರ್, ಕೋಟ ಗ್ರಾಮ ಪಂಚಾಯತ್ ಸದಸ್ಯ ಚಂದ್ರ ದೇವಾಡಿಗ, ಕೋಟ ಠಾಣೆಯ ಸಿಬಂದಿ ಸತೀಶ್, ಮಂಜುನಾಥ ಹಾಗೂ ಯುವಕ ಮಂಡಲದ ಸದಸ್ಯರು ಉಪಸ್ಥಿತರಿದ್ದರು.