ಸೂಕ್ಷ್ಮ ಪ್ರದೇಶಗಳಲ್ಲಿ ರಸ್ತೆ ವಿಸ್ತರಣೆ ಪೂರ್ಣ
ಹೆಮ್ಮಾಡಿ- ಕೊಲ್ಲೂರು ರಾಷ್ಟ್ರೀಯ ಹೆದ್ದಾರಿ
Team Udayavani, May 11, 2019, 6:05 AM IST
ಕೊಲ್ಲೂರು: ಹೆಮ್ಮಾಡಿಯಿಂದ ಕೊಲ್ಲೂರು ತನಕ ರಾಷ್ಟ್ರೀಯ ಹೆದ್ದಾರಿಯ ತಿರುವುಗಳ ಸೂಕ್ಷ್ಮ ಪ್ರದೇಶಗಳ ವಿಸ್ತರಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು ಬಹುತೇಕ ಕಡೆ ಡಾಮರೀಕಣಕ್ಕೆ ಸಿದ್ಧªತೆ ನಡೆಯುತ್ತಿದೆ.
ಇಲ್ಲಿನ ಬಹುತೇಕ ತಿರುವುಗಳಲ್ಲಿ ಅನೇಕ ರಸ್ತೆ ಅಪಘಾತಗಳು ನಡೆದಿವೆ. ಈ ಬಗ್ಗೆ ಉದಯವಾಣಿ ಸಚಿತ್ರ ವರದಿ ಪ್ರಕಟಿಸಿ ಇಲಾಖೆಯ ಗಮನ ಸೆಳೆದಿತ್ತು. ಇದೀಗ ಹೆಮ್ಮಾಡಿ, ದೇವಲ್ಕುಂದ, ನೆಂಪು, ವಂಡ್ಸೆ, ಚಿತ್ತೂರು, ಮಾರಣಕಟ್ಟೆ ತಿರುವು ಸಹಿತ ಕೊಲ್ಲೂರಿನ ಹಾಲ್ಕಲ್ ಬಳಿಯ ಸೂಕ್ಷ್ಮ ಪ್ರದೇಶದ ರಸ್ತೆಯ ಸಂಪೂರ್ಣ ವಿಸ್ತರಣೆ ಏಕ ಕಾಲದಲ್ಲಿ ಆರಂಭಗೊಂಡಿದ್ದು ಮುಂದಿನ ಒಂದು ತಿಂಗಳೊಳಗೆ ಪೂರ್ಣಗೊಳ್ಳಲಿದೆ. ಲೋಕೋಪಯೋಗಿ ಇಲಾಖೆ ರಸ್ತೆಯ ವಿಸ್ತರಣೆ ಕಾಮಗಾರಿಯ ಸಂಪೂರ್ಣ ಜವಬ್ದಾರಿ ವಹಿಸಿದೆ.
ಗ್ರಾಮಸ್ಥರ ಮೆಚ್ಚುಗೆ
ಅರಣ್ಯ ಇಲಾಖೆಯ ಸಹಯೋಗದೊಡನೆ ಮುಖ್ಯ ರಸ್ತೆಗೆ ಚಾಚಿದ್ದ ಭಾರೀ ಗಾತ್ರದ ಮರಗಳನ್ನು ತೆರವು ಗೊಳಿಸುವುದರ ಮೂಲಕ ಸುಗಮ ವಾಹನ ಸಂಚಾರಕ್ಕೆ ಅನುವುಮಾಡಿರುವ ಲೋಕೋ ಪಯೋಗಿ ಹಾಗೂ ಅರಣ್ಯ ಇಲಾಖೆ ಬಗ್ಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.