ಸಂಚಾರಕ್ಕೆ ಅಯೋಗ್ಯವಾದ ಪಿಲಾರುಖಾನ-ಸೂಡ ರಸ್ತೆ
Team Udayavani, Jul 10, 2018, 6:00 AM IST
ಶಿರ್ವ: ಕಟಪಾಡಿ- ಶಿರ್ವ-ಬೆಳ್ಮಣ್ ಮುಖ್ಯರಸ್ತೆಯ ಪಿಲಾರುಖಾನದಿಂದ ಸೂಡ-ಪಳ್ಳಿಯನ್ನು ಸಂಪರ್ಕಿಸುವ ರಸ್ತೆಯು ತೀರಾ ಹದಗೆಟ್ಟಿದ್ದು ವಾಹನ ಸಂಚಾರ ದುಸ್ತರವಾಗಿದೆ. ರಸ್ತೆಯ ಡಾಂಬರು ಕಿತ್ತು ಹೋಗಿ ಹೊಂಡ ಗುಂಡಿಗಳು ಉಂಟಾಗಿ ಅಪಾಯದ ಸ್ಥಿತಿ ನಿರ್ಮಾಣಗೊಂಡಿದೆ.
ಸಂಚಾರಕ್ಕೆ ಅಯೋಗ್ಯ
ಪಿಲಾರುಖಾನದಿಂದ ಸೂಡ ಮಾರ್ಗವಾಗಿ ಪಳ್ಳಿ ನಿಂಜೂರು ಕಡೆಗೆ ಮತ್ತು ನಂದಳಿಕೆ ಮತ್ತು ಹಾಳೆಕಟ್ಟೆ-ಕಲ್ಯಾಕಡೆಗೆ ಸಾಗಲು ಹತ್ತಿರದ ರಸ್ತೆಯಾಗಿದೆ.ಸೂಡದಿಂದ ಶಿರ್ವ ಹಾಗೂ ಬೆಳ್ಮಣ್ ಕಡೆಗೆ ಹೋಗುವ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲದೆ ಪ್ರತಿನಿತ್ಯ ನೂರಾರು ವಾಹನಗಳು ಓಡಾಟ ನಡೆಸುತ್ತಿವೆ.
ಅಧಿಕ ಭಾರದ ಲಾರಿ,ಟಿಪ್ಪರ್ಗಳ ಓಡಾಟದಿಂದಾಗಿ ರಸ್ತೆ ಮಳೆಗಾಲದಲ್ಲಿ ಸಂಪೂರ್ಣ ಹಾಳಾಗಿದೆ. ಮಳೆಗಾಲದಲ್ಲಿ ಹೊಂಡ ಗುಂಡಿಗಳಲ್ಲಿ ನೀರು ನಿಂತು ದ್ವಿಚಕ್ರವಾಹನ ಸವಾರರು ಮತ್ತು ಪಾದಾಚಾರಿಗಳ ಮೇಲೆ ಕೆಸರಿನ ಸಿಂಚನವಾಗುತ್ತಿದೆ.
ವಾಹನ ಸಂಚಾರಕ್ಕೆ ಹಿಂದೇಟು
ಹಲವಾರು ವರ್ಷಗಳ ಹಿಂದೆ ಈ ರಸ್ತೆಗೆ ಡಾಂಬರು ಹಾಕಲಾಗಿತ್ತು. ಸೂಡ ಹಾಗೂ ಪಳ್ಳಿಯ ಸಮೀಪದ ಪ್ರದೇಶಗಳಲ್ಲಿ ಕಲ್ಲಿನ ಕೋರೆಗಳಿದ್ದು ಅಧಿಕ ಭಾರದ ಕಲ್ಲುಗಳನ್ನು ಹೊತ್ತ ಲಾರಿ,ಟಿಪ್ಪರ್ಗಳು ಹೆಚ್ಚಾಗಿ ಈ ರಸ್ತೆಯಲ್ಲೇ ಸಾಗುವುದರಿಂದ ರಸ್ತೆಯ ಡಾಂಬರು ಕಿತ್ತು ಹೋಗಿ ಹೊಂಡ ಗುಂಡಿ ನಿರ್ಮಾಣಗೊಂಡಿದೆ. ಸೂಡ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಪಳ್ಳಿಕಡೆ ಹೋಗಲು ನಿಗದಿತ ಅವಧಿಯಲ್ಲಿ ಮಾತ್ರ ಬಸ್ಗಳಿದ್ದು ಬೇರೆ ಸಮಯದಲ್ಲಿ ನಾಗರಿಕರು ರಿಕ್ಷಾ ಅಥವಾ ಇತರೆ ಬಾಡಿಗೆ ವಾಹನಗಳನ್ನು ಅವಲಂಬಿಸಬೇಕಾಗಿದೆ. ರಸ್ತೆ ಹೊಂಡ ಗುಂಡಿಗಳಿಂದ ಕೂಡಿರುವುದರಿಂದ ಬಾಡಿಗೆ ವಾಹನಗಳವರು ಈ ರಸ್ತೆಯಲ್ಲಿ ಸಾಗಲು ಹಿಂದೇಟು ಹಾಕುತ್ತಿದ್ದು ಜನರಿಗೆ ತೊಂದರೆಯಾಗಿದೆ.
ಕೆಲವು ವರ್ಷಗಳ ಹಿಂದೆ ಸೂಡದ ಕಲ್ಲಿನ ಕೋರೆಯಿಂದ ಜಲ್ಲಿಕಲ್ಲು ಸಾಗಿಸಿದ್ದರಿಂದಾಗಿ ಡಾಮರೀಕರಣಗೊಂಡಿದ್ದ ರಸ್ತೆಯು ಸಂಪೂರ್ಣ ಹದಗೆಟ್ಟು ವಾಹನ ಸವಾರರು ಚಲಿಸಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.ಬಳಿಕ ನಾಗರಿಕರ ಪ್ರತಿಭಟನೆಯಿಂದ ಮರು ಡಾಮರೀಕರಣಗೊಂಡಿತ್ತು.ಇದೀಗ ಸಂಚಾರಕ್ಕೆ ಅಯೋಗ್ಯವಾದ ರಸ್ತೆಯ ಬಗ್ಗೆ ನಾಗರಿಕರು ಪ್ರತಿಭಟಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಸಂಚಾರಕ್ಕೆ ದುಸ್ತರವಾದ ರಸ್ತೆಯನ್ನು ಜನಪ್ರತಿನಿಧಿಗಳು,ಸಂಬಂಧಪಟ್ಟ ಇಲಾಖೆ ಕೂಡಲೇ ಕ್ರಮ ಕೈಗೊಂಡು ಸರಿಪಡಿಸಬೇಕಾಗಿದೆ.
ರಸ್ತೆಯಲ್ಲಿ ಹೊಂಡ ಗುಂಡಿಗಳಿದ್ದು ವಾಹನದಲ್ಲಿ ಸಂಚಾರ ನಡೆಸುವುದೇ ಕಷ್ಟಕರವಾಗಿದೆ. ಶಾಲಾ ವಿದ್ಯಾರ್ಥಿಗಳು ಕೂಡಾ ಈ ಭಾಗದಿಂದ ಸಂಚರಿಸುತ್ತಿದ್ದು ಹೊಂಡಗಳಲ್ಲಿ ನೀರು ತುಂಬಿರುವುದರಿಂದಾಗಿ ದ್ವಿಚಕ್ರವಾಹನ ಸವಾರರು ಬಿದ್ದು ಕೈಕಾಲು ಮುರಿದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಸೂಡ ಅರ್ಚಕರಾದ ಶ್ರೀಶ ಭಟ್ ಅವರು ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ