ಕಂಟೈನರ್ ಚಕ್ರದಡಿ ಸಿಲುಕಿ ಸ್ಕೂಟರ್ ಸವಾರ ಸಾವು
Team Udayavani, Sep 13, 2018, 12:03 PM IST
ಉಡುಪಿ: ಹತ್ತು ಚಕ್ರದ ಕಂಟೈನರೊಂದು ಸ್ಕೂಟರ್ಗೆ ತಾಗಿ ಸವಾರ ಅದರ ಚಕ್ರದಡಿಗೆ ಸಿಲುಕಿ ಮೃತಪಟ್ಟ ಘಟನೆ ಕಲ್ಯಾಣಪುರ ಸಂತೆಕಟ್ಟೆಯಲ್ಲಿ ಬುಧವಾರ ಸಂಜೆ ಸಂಭವಿಸಿದೆ. ಕೆಜಿ ರೋಡ್ ನಿವಾಸಿ ಗಂಗಾಧರ್ ಕಾಂಚನ್ (63) ಮೃತಪಟ್ಟವರು. ಇವರು ಕೆಜಿ ರೋಡ್ ನಿಂದ ಉಡುಪಿ ಕಡೆಗೆ ತೆರಳುತ್ತಿದ್ದಾಗ ಸಂತೆಕಟ್ಟೆ ಬಳಿ ಬ್ಯಾರಿಕೇಡ್ ದಾಟುವ ಸಂದರ್ಭ ಕಂಟೈನರ್ ಯಾವುದೇ ಸೂಚನೆ ನೀಡದೆ ಎಡಕ್ಕೆ ತಿರುಗಿಸಿದ ಪರಿಣಾಮ ಅಪ ಘಾತ ಸಂಭವಿಸಿದೆ. ಕಾಂಚನ್ ಚಕ್ರದಡಿಗೆ ಸಿಲುಕಿರುವ ವಿಚಾರ ತಿಳಿಯದೆ ಚಾಲಕ ಕೆಲವು ಮೀಟರ್ವರೆಗೆ ದೇಹವನ್ನು ಎಳೆದು ಕೊಂಡು ಹೋಗಿದ್ದಾನೆ ಎಂದು ಹೇಳಲಾಗಿದೆ.
ಕ್ರೇನ್ ಮೂಲಕ ಕಂಟೆನರ್ ತೆರವು
ಮೃತದೇಹವು ಅಡಿಯಲ್ಲಿ ಸಿಲುಕಿದ್ದ ಹಿನ್ನೆಲೆಯಲ್ಲಿ ಎರಡು ಕ್ರೇನ್ಗಳ ಮೂಲಕ ಕಂಟೈನರ್ ಅನ್ನು ಬದಿಗೆ ಸರಿಸಿ ದೇಹವನ್ನು ಹೊರ ತೆಗೆಯಲಾಯಿತು ಎಂದು ಪೊಲೀಸರು ತಿಳಿಸಿದರು. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಕ್ಕಳು ಅಸ್ವಸ್ಥ
ಘಟನೆಯ ವಿಷಯ ತಿಳಿದು ಸ್ಥಳಕ್ಕೆ ಬಂದ ಕಾಂಚನ್ ಅವರ ಮಕ್ಕಳು, ತಂದೆಯ ಛಿದ್ರಗೊಂಡ ದೇಹವನ್ನು ಕಂಡು ಅಸ್ವಸ್ಥಗೊಂಡರು. ಅನಂತರ ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಕರೆದುಕೊಂಡು ಹೋಗಲಾಯಿತು ಎಂದು ತಿಳಿದು ಬಂದಿದೆ.