ಕುತ್ಪಾಡಿ ಪಡುಕರೆ ಕಡಲ್ಕೊರೆತ; ಕಾಂಕ್ರೀಟ್ ರಸ್ತೆ ಬಿರುಕು
Team Udayavani, Jun 29, 2017, 3:55 AM IST
ಮಲ್ಪೆ: ಕುತ್ಪಾಡಿ ಪಡುಕರೆ ಸಮೀಪ ರವಿವಾರ ಕಾಣಿಸಿಕೊಂಡಿದ್ದ ಕಡಲಕೊರೆತ ಮಂಗಳವಾರದವರೆಗೂ ಮುಂದುವರಿದಿದ್ದು ದಿನೇದಿನೇ ಉಗ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಕೇವಲ ಮೂರೇ ದಿನಗಳಲ್ಲಿ ಸಮುದ್ರ ಈ ಭಾಗದಲ್ಲಿ ಸುಮಾರು 60- 70 ಮೀಟರ್ನಷ್ಟು ಭೂ ಪ್ರದೇಶವನ್ನು ನುಂಗಿ ಹಾಕಿದ್ದು ಕಾಂಕ್ರಿಟ್ ರಸ್ತೆಯನ್ನು ಆಪೋಶನ ತೆಗೆದುಕೊಳ್ಳಲು ಮುಂದಾಗಿದೆ. ಕಡಲ ದಂಡೆಯಲ್ಲಿದ್ದ ಮರಗಳು ಸಮುದ್ರಪಾಲಾಗಿವೆ. ದೈತ್ಯಗಾತ್ರದ ಅಲೆಗಳು ಎತ್ತರದಿಂದ ಅಪ್ಪಳಿಸಿ ಕಾಂಕ್ರಿಟ್ ರಸ್ತೆಯನ್ನು ದಾಟಿ ಬಂದು ತೋಟದ ಮೂಲಕ ಹರಿದು ಸಮೀಪದ ಹೊಳೆಯನ್ನು ಸೇರುತ್ತಿವೆ. ಸಮೀಪದ ಮೀನುಗಾರ ಮನೆಗಳು ಅಪಾಯದಲ್ಲಿದ್ದು ಉಪ್ಪುನೀರು ಮನೆಯ ಸುತ್ತ ಆವರಿಸುತ್ತಿದೆ.
ಬಸ್ ಸಂಚಾರ ಸ್ಥಗಿತ
ರಕ್ಕಸಗಾತ್ರ ಅಲೆಯ ಹೊಡೆತಕ್ಕೆ ಸುಮಾರು 50 ಮೀಟರ್ ಉದ್ದಕ್ಕೆ ರಸ್ತೆಯ ಅಡಿಭಾಗ ಕೊರೆದು ಹೋಗಿದ್ದು ಅಲ್ಲಲ್ಲಿ ರಸ್ತೆ ಬಿರುಕು ಬಿಟ್ಟಿದ್ದು ಸಂಚಾರ ಕಡಿದುಕೊಳ್ಳುವ ಭೀತಿ ಎದುರಾಗಿದೆ. ಇದರಿಂದಾಗಿ ಮಂಗಳವಾರ ಬಸ್ ಸಂಚಾರ ಸ್ಥಗಿತಗೊಂಡಿದೆ. ದ್ವಿಚಕ್ರ ವಾಹನ ಬಿಟ್ಟರೆ ಯಾವುದೇ ದೊಡ್ಡ ವಾಹನಗಳು ಸಂಚರಿಸುತ್ತಿಲ್ಲ. ಇದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕಾಪು, ಕೈಪುಂಜಾಲು ಮಟ್ಟುವಿನಿಂದ ಮಲ್ಪೆ ಕಡೆಗೆ ಬರುವ ಜನರಿಗೆ ತುಂಬ ತೊಂದರೆ ಉಂಟಾಗಿದೆ. ಗಾಳಿಯ ವೇಗ ಇದೇ ರೀತಿ ಮುಂದುವರಿದರೆ ಅಲೆ ಅಬ್ಬರಕ್ಕೆ ರಸ್ತೆ ಕುಸಿದು ಬೀಳುವ ಸಾಧ್ಯತೆ ಹೆಚ್ಚಾಗಿದೆ ಎಂದು ಶಿವರಾಮ ಪುತ್ರನ್ ತಿಳಿಸಿದ್ದಾರೆ.
ಮಾರ್ಯ ಬೀಳುವುದರಿಂದ
ಸಮುದ್ರದಲ್ಲಿ ಒಂದೊಂದು ಕಡೆ ಒಂದೊಂದು ಸಲ ಮಾರ್ಯ ಬೀಳುತ್ತದೆ. (ಮಾರ್ಯ = ಸಮುದ್ರ ತಳದಲ್ಲಿ ಮೂರು ಕಡೆಗಳಿಂದ ಏಕಕಾಲದಲ್ಲಿ ತೆರೆಗಳು ಬಂದು ಮರಳು ಎದ್ದು ಹೋಗುವ ಪ್ರಕ್ರಿಯೆ – ಸ್ಥಳೀಯ ಭಾಷೆ). ಮಾರ್ಯ ಬಿದ್ದ ಜಾಗದ ಕೆಲವು ಕಿ.ಮೀ. ಉದ್ದಕ್ಕೆ ಕಡಲಕೊರೆತ ಕಂಡುಬರುತ್ತದೆ. ಸಮುದ್ರದಲ್ಲಿ ಮೂರು ಕಡೆಗಳಿಂದ ಆಳವಾಗಿ ಬರುವ ತೆರೆಗಳು ಒಂದಾಗಿ ಅತೀ ವೇಗದಲ್ಲಿ ಬಂದು ದಡಕ್ಕೆ ಅಪ್ಪಳಿಸಿ ಅಷ್ಟೇ ವೇಗದಲ್ಲಿ ಮರಳನ್ನು ಕೊರೆಯುತ್ತಾ ಸಮುದ್ರ ಸೇರುತ್ತದೆ. ಇದಕ್ಕೆ ಸ್ಥಳೀಯರು ಮಾರ್ಯ ಬೀಳುವುದು ಎನ್ನುತ್ತಾರೆ. ಕೆಲವು ದಿನಗಳವರೆಗೆ ಒಂದೇ ಕಡೆಯಲ್ಲಿರುತ್ತದೆ. ಇದಕ್ಕೆ ಯಾವುದೇ ದೋಣಿ ಸಿಲುಕಿಕೊಂಡರೆ ಅಪಾಯ ತಪ್ಪಿದ್ದಲ್ಲ ಎನ್ನುತ್ತಾರೆ ಸ್ಥಳೀಯರಾದ ಪ್ರಭಾಕರ ಸಿ. ಕೋಟ್ಯಾನ್ ಅವರು. ರವಿವಾರದಿಂದ ಕೊರೆತ ಉಂಟಾದ ಜಾಗಕ್ಕೆ ಕಲ್ಲು ಹಾಕುವ ಪ್ರಕ್ರಿಯೆ ನಡೆಯುತ್ತಿದ್ದರೂ ರಕ್ಕಸ ಗಾತ್ರದ ಅಲೆಗಳಿಂದಾಗಿ ಕಲ್ಲುಗಳು ಒಂದೊಂದಾಗಿ ಜಾರಿ ಸಮುದ್ರ ಸೇರುತ್ತಿವೆ. ವರ್ಷಂಪ್ರತಿ ಕಡಲ ಕೊರೆತಕ್ಕೆ ತಾತ್ಕಾಲಿಕ ಪರಿಹಾರವೆಂದು ಸಮುದ್ರ ಬದಿಗೆ ಬಂಡೆಗಳನ್ನು ಹಾಕಲಾಗುತ್ತದೆ. ಆದರೆ ಅವೈಜ್ಞಾನಿಕವಾಗಿ ಕಲ್ಲುಗಳನ್ನು ಹಾಕಿರುವ ಪರಿಣಾಮ ಆ ಕಲ್ಲುಗಳೆಲ್ಲಾ ಅಲೆಯ ಹೊಡೆತಕ್ಕೆ ಕೊಚ್ಚಿ ಹೋಗುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
D.K,Udupi ಸಿಎನ್ಜಿ ಇಂಧನ ಕೊರತೆ: ಬಂಕ್ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು
Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು