ಸುರಕ್ಷೆ , ಮತ್ಸ್ಯ ಸಂಪತ್ತಿಗಾಗಿ ಮೀನುಗಾರರಿಂದ ಸಮುದ್ರಪೂಜೆ
Team Udayavani, Aug 8, 2017, 8:00 AM IST
ಮಲ್ಪೆ: ಮೀನುಗಾರರ ಶ್ರೇಯೋಭಿವೃದ್ಧಿಗಾಗಿ ಮಲ್ಪೆ ಮೀನುಗಾರ ಸಂಘದ ವತಿಯಿಂದ ವಡಭಾಂಡೇಶ್ವರ ಸಮುದ್ರತೀರದಲ್ಲಿ ಆ. 7ರಂದು ಸಮುದ್ರಪೂಜೆ ನಡೆಯಿತು.
ಮೀನುಗಾರರು ಸಾಮೂಹಿಕವಾಗಿ ಬೆಳಗ್ಗೆ ವಡಭಾಂಡ ಬಲರಾಮ ಮತ್ತು ಬೊಬ್ಬರ್ಯ ದೇವ ರಿಗೆ ವಿಶೇಷ ಪೂಜೆ ಸಲ್ಲಿಸಿ, ಶೋಭಾ ಯಾತ್ರೆಯಲ್ಲಿ ಸಮುದ್ರ ಕಿನಾರೆಗೆ ಬಂದು ಉತ್ತರಕಾಶಿ ಕಪಿಲಾಶ್ರಮದ ರಾಮಚಂದ್ರ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಿದರು. ಮುಂಬರುವ ದಿನಗಳಲ್ಲಿ ಮೀನುಗಾರಿಕೆ ಯಾವುದೇ ಅಡ್ಡಿ ಆತಂಕಗಳು ಇಲ್ಲದೆ, ಹೇರಳ ಮತ್ಸé ಸಂಪತ್ತು ಲಭಿಸುವಂತಾಗಲಿ ಎಂದು ಪ್ರಾರ್ಥಿಸಿ ಸೀಯಾಳ, ಫಲಪುಷ್ಪ, ಕ್ಷೀರವನ್ನು ಗಂಗಾ ಮಾತೆಗೆ ಅರ್ಪಿಸಿದರು.
ಸಮೃದ್ಧ ಮೀನುಗಾರಿಕೆ: ಪ್ರಮೋದ್
ಸಮುದ್ರ ಪೂಜೆಯಲ್ಲಿ ಪಾಲ್ಗೊಂಡ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಅವರು ಮಾತನಾಡಿ, ನಾರಿಯಲ್ ಪೂರ್ಣಿಮೆಯ ದಿನ ಸಮುದ್ರ ಪೂಜೆ ನಡೆಸಿ ಮೀನುಗಾರಿಕೆ ಪ್ರಾರಂಭಿಸುವ ಹಿಂದಿನ ಪರಿಪಾಠದಂತೆ ಮೀನುಗಾರರು ಸಮುದ್ರರಾಜನಿಗೆ ಹಾಲು ಪುಷ್ಪಗಳನ್ನು ಅರ್ಪಿಸಿದರು. ಪಶ್ಚಿಮ ಕರಾವಳಿಯ ಎಲ್ಲ ರಾಜ್ಯಗಳಲ್ಲಿ ಒಂದೇ ದಿನ ಸಮುದ್ರಪೂಜೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಯಾವುದೇ ಪ್ರಾಣಾಪಾಯ ಇಲ್ಲದೆ ಸಮೃದ್ಧ ಮೀನುಗಾರಿಕೆ ಆಗುವಂತೆ ಗಂಗಾಮಾತೆ ಅನುಗ್ರಹಿಸಲಿ ಎಂದು ಹಾರೈಸಿದರು.
ಜಲ ಮೀನುಗಾರರ ಸೊತ್ತು
ಕಪಿಲಾಶ್ರಮದ ರಾಮಚಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ರಾಷ್ಟ್ರ, ಧರ್ಮ ಸಂಸ್ಕೃತಿಯನ್ನು ಎತ್ತಿ ತೋರಿಸಿದ, ಜಾತಿ ಮತ ಭೇದದ ವೈಷಮ್ಯ ವನ್ನು ಇಟ್ಟುಕೊಳ್ಳದ ಮೀನುಗಾರರು ದೇಶದ ಬೆನ್ನೆಲುಬಾಗಿದ್ದಾರೆ. ಅರಣ್ಯ ಆದಿವಾಸಿಗಳ ಸೊತ್ತಾದರೆ, ಜಲ ಮೀನುಗಾರರ ಸೊತ್ತು ಮತ್ತು ಹಕ್ಕು ಆಗಿದೆ. ಈ ವರ್ಷ ಹೇರಳ ಮತ್ಸ éಸಂಪತ್ತು ಲಭಿಸಿ ಕರಾವಳಿ ಸಮೃದ್ಧಿ ಹೊಂದಲಿ ಎಂದರು.
ಮಾಜಿ ಶಾಸಕ ಕೆ. ರಘಪತಿ ಭಟ್, ಉಡುಪಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ, ಉಪಾಧ್ಯಕ್ಷೆ ಸಂಧ್ಯಾ ತಿಲಕ್ರಾಜ್, ಮೀನುಗಾರಿಕಾ ಇಲಾಖಾ ಅಧಿಕಾರಿ ಪಾರ್ಶ್ವನಾಥ್, ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ಮೀನುಗಾರಿಕಾ ವಿವಿಧ ಸಂಘಟನೆಗಳ ಮುಖಂಡರಾದ ಹಿರಿಯಣ್ಣ ಟಿ. ಕಿದಿಯೂರು, ಸಂತೋಷ್ ಕೊಳ, ವಿನಯ ಕರ್ಕೇರ, ಗೋಪಾಲ್ ಆರ್.ಕೆ., ಸೋಮನಾಥ್ ಕಾಂಚನ್, ಹರಿಶ್ಚಂದ್ರ ಕಾಂಚನ್, ಹರಿಯಪ್ಪ ಕೋಟ್ಯಾನ್, ಸುಧಾಕರ ಮೆಂಡನ್, ರಮೇಶ್ ಕೋಟ್ಯಾನ್, ದಯಾನಂದ ಕೆ. ಸುವರ್ಣ, ಯಶ್ಪಾಲ್ ಎ. ಸುವರ್ಣ, ಗೋಪಾಲ ಕುಂದರ್, ಯಶೋಧರ್ ಅಮೀನ್, ಗುರುದಾಸ್ ಬಂಗೇರ, ವಿಠಲ ಕರ್ಕೇರ, ಎನ್.ಟಿ. ಅಮೀನ್, ದಯಾನಂದ ಕುಂದರ್, ರತ್ನಾಕರ ಸಾಲ್ಯಾನ್, ರವಿ ಸಾಲ್ಯಾನ್, ಕೇಶವ ಎಂ. ಕೋಟ್ಯಾನ್, ಗುಂಡು ಬಿ. ಅಮೀನ್, ಶಿವಾನಂದ, ರಾಮಚಂದ್ರ ಕುಂದರ್, ಸಾಧು ಸಾಲ್ಯಾನ್, ಕಿಶೋರ್ ಪಡುಕರೆ, ದಾಸ ಕುಂದರ್, ಕೃಷ್ಣಪ್ಪ ಮರಕಾಲ, ರವಿರಾಜ್ ಸುವರ್ಣ ಮೊದಲಾದವರು ಪಾಲ್ಗೊಂಡಿದ್ದರು.