Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್ ಹೆಗ್ಡೆ
ಬ್ರಹ್ಮಾವರದ ಕಾಂಗ್ರೆಸ್ ಸಭೆ
Team Udayavani, Apr 17, 2024, 12:45 AM IST
ಕೋಟ/ಬ್ರಹ್ಮಾವರ: ಉತ್ತಮ ಜನಪ್ರತಿಯಾಗಬೇಕಾದರೆ ತಾನು ಈ ಹಿಂದೆ ಮಾಡಿದ ಅಭಿವೃದ್ಧಿ ಕಾರ್ಯಗಳಿಗಿಂತ ಮುಂದೆ ಕ್ಷೇತ್ರಕ್ಕಾಗಿ ಎನು ಮಾಡಬೇಕು ಎನ್ನುವ ಸ್ಪಷ್ಟ ಪರಿಕಲ್ಪನೆ ಬೇಕು. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಪ್ರತಿಯೊಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಿಕ್ಷಣ, ಪ್ರವಾಸೋದ್ಯಮ, ಆರೋಗ್ಯ ಕ್ಷೇತ್ರವನ್ನು ಪ್ರಾತಿನಿಧ್ಯವಾಗಿರಿಸಿಕೊಂಡು, ಜತೆಯಲ್ಲಿ ಇನ್ನಿತರ ಏನೇನೂ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು ಎನ್ನುವ ಪರಿಕಲ್ಪನೆ ಒಳಗೊಂಡ ಪ್ರತ್ಯೇಕ ಅಭಿವೃದ್ಧಿ ಪ್ರಣಾಳಿಕೆ ಸಿದ್ಧಪಡಿಸಿದ್ದು ಶೀಘ್ರವಾಗಿ ಮತದಾರರ ಮನೆ-ಮನೆಗೆ ತಲುಪಿಸುವ ಕಾರ್ಯ ಮಾಡಲಾಗುವುದು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ತಿಳಿಸಿದರು.
ಅವರು ಮಂಗಳವಾರ ಬ್ರಹ್ಮಾವರ ದಲ್ಲಿ ನಡೆದ ಕಾಲ್ನಡಿಗೆ ಜಾಥಾ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.
ಚಿಂತನೆಗಳಿಲ್ಲದವ ನಾಯಕನಾಗಲಾರ ಯಾವುದೇ ಒಬ್ಬ ಉತ್ತಮ ನಾಯಕನಿಗೆ ಅಭಿವೃದ್ಧಿಯ ಚಿಂತನೆಗಳಿ ರಬೇಕು. ಅಧಿ ಕಾರವಿದ್ದಾಗ ಏನಾದರೂ ಮಾಡಬೇಕು ಎನ್ನುವ ದೂರದೃಷ್ಟಿ ಇರಬೇಕು. ಇವೆರಡೂ ಇಲ್ಲದವ ಉತ್ತಮ ನಾಯಕನಾಗಲಾರ. ಸ್ವಂತ ವರ್ಚಸ್ಸು ಬಗ್ಗೆ ನಂಬಿಕೆ ಇಲ್ಲದೆ ಅನಗತ್ಯ ವಿಚಾರಗಳನ್ನು ಮುಂದಿಟ್ಟು ಕೊಂಡು, ದಿಲ್ಲಿಯ ನಾಯಕರನ್ನು ಮುಂದಿಟ್ಟುಕೊಂಡು ಮತ ಕೇಳುತ್ತಾರೆ. ಇಂಥವರಿಗೆ ಮತದಾರರು ಬೆಲೆ ನೀಡುವುದಿಲ್ಲ ಎಂದರು.
ಬಿಜೆಪಿ ಅಭ್ಯರ್ಥಿಗೆ ಹಾಲಿ
ಸಂಸದರೇ ಮಾದರಿ
ನನಗೆ ಹೊಸ ಕನಸುಗಳು, ಅಭಿವೃದ್ಧಿ ಕಲ್ಪನೆಗಳು ಮಾದರಿಯಾದರೆ ಬಿಜೆಪಿ ಅಭ್ಯರ್ಥಿ ತನಗೆ ಹಾಲಿ ಸಂಸದರೇ ಮಾದರಿ ಎಂದು ಹೇಳಿದ್ದಾರೆ. ಇದರರ್ಥ ಚುನಾವಣೆಯಲ್ಲಿ ಗೆದ್ದರೆ ಅಭಿವೃದ್ಧಿ ಮಾಡದಿರುವುದು, ಕ್ಷೇತ್ರದ ಕಡೆ ಮುಖ ಹಾಕದಿರುವುದು ಎನ್ನುವುದಾಗಿದೆ. ಇಂತಹ ಜನಪ್ರತಿನಿಧಿಗಳು ನಿಮಗೆ ಬೇಕಾ ಎಂದು ಜನರೇ ನಿರ್ಧಾರ ಮಾಡಿ ಎಂದು ಹೆಗ್ಡೆ ತಿಳಿಸಿದರು.
ಪ್ರಮುಖ 2 ಖಾಸಗಿ
ಮಸೂದೆ ಮಂಡನೆ
ಶಿಕ್ಷಕರ ಕ್ಷೇತ್ರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮತದಾನದ ಹಕ್ಕು ಇರಲಿಲ್ಲ. ಹೀಗಾಗಿ ಅವರಿಗೆ ಮತದಾನದ ಅವಕಾಶ ಸಿಗಬೇಕು ಎನ್ನುವ ಬಿಲ್ ಮತ್ತು ವ್ಯಕ್ತಿಯೋರ್ವನು ಯಾವುದೇ ಊರಿನಲ್ಲಿದ್ದರೂ ತಾನು ಇರುವಲ್ಲಿಂದ ತನ್ನ ಮತಕ್ಷೇತ್ರಕ್ಕೆ ಮತದಾನ ಮಾಡು ವಂತೆ ವ್ಯವಸ್ಥೆ ಮಾಡಬೇಕು ಎನ್ನುವ ಖಾಸಗಿ ಬಿಲ್ ಮಂಡಿಸಿದ್ದೆ. ಅದು ಕಾರ್ಯರೂಪಕ್ಕೆ ಬರಲು ಹೋರಾಟ ಅಗತ್ಯವಿದೆ ಎಂದು ಹೆಗ್ಡೆ ತಿಳಿಸಿದರು.
ಕಾರ್ಯಗತ ಮಾಡುವ ಶಕ್ತಿ ಬೇಕು
ಯಾವುದೇ ಅಭಿವೃದ್ಧಿ ಕಾಮಗಾರಿ ಯನ್ನು ಮಂಜೂರಾದ ಮೇಲೆ ಅದನ್ನು ಕ್ಷಿಪ್ರವಾಗಿ ಕಾರ್ಯಗತಗೊಳಿಸುವ ಜವಾಬ್ದಾರಿ ಇರುತ್ತದೆ. ನಾನು ಸಂಸದನಾಗಿದ್ದಾಗ ಮೂರು ರಾಷ್ಟ್ರೀಯ ಹೆದ್ದಾರಿ ಮಂಜೂರು ಮಾಡಿದ್ದೆ. ಆದರೆ ದುರದೃಷ್ಟವಶಾತ್ ಹತ್ತು ವರ್ಷ ಕಳೆದರೂ ಆ ಕಾಮಗಾರಿ ಸಂಪೂರ್ಣವಾಗಿಲ್ಲ, ಜತೆಗೆ ಕಲ್ಯಾಣಪುರ ಬಳಿ ರಾಷ್ಟ್ರೀಯ ಹೆದ್ದಾರಿ ದುರವಸ್ಥೆ ಈಗಿನ ಸಂಸದರ ಕಾರ್ಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇಂತಹ ತಪ್ಪು ಮತ್ತೆ ಮಾಡಬೇಡಿ ಎಂದರು.
ಸಭೆಯಲ್ಲಿ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನಕರ ಹೇರೂರು, ಕಾಂಗ್ರೆಸ್ ಮುಖಂಡರಾದ ಭುಜಂಗ ಶೆಟ್ಟಿ, ಮೈರ್ಮಾಡಿ ಅಶೋಕ್ ಶೆಟ್ಟಿ, ಡಾ| ಸುನೀತಾ ಶೆಟ್ಟಿ, ವೆರೋನಿಕಾ ಕರ್ನೇಲಿಯೋ, ಹರೀಶ್ ಕಿಣಿ, ಪ್ರಖ್ಯಾತ್ ಶೆಟ್ಟಿ ಮೊದಲಾದವರಿದ್ದರು.
ಬೃಹತ್ ಕಾಲ್ನಡಿಗೆ ಜಾಥಾ
ಈ ಸಂದರ್ಭ ಬ್ರಹ್ಮಾವರ ಆಕಾಶವಾಣಿ ಸರ್ಕಲ್ನಿಂದ ಒಳಪೇಟೆಯ ಮೂಲಕ ಪೇತ್ರಿ ಸರ್ಕಲ್ ತನಕ ಕಾಲ್ನಡಿಗೆ ಜಾಥಾದ ಮೂಲಕ ಜಯಪ್ರಕಾಶ್ ಹೆಗ್ಡೆ ಮತಯಾಚಿಸಿದರು. ನೂರಾರು ಮಂದಿ ಕಾರ್ಯಕರ್ತರು, ಅಭಿಮಾನಿಗಳು ಅವರೊಂದಿಗೆ ಹೆಜ್ಜೆ ಹಾಕಿದರು.
ಜಯಪ್ರಕಾಶ್ ಹೆಗ್ಡೆ ಕೊಡುಗೆ ಶಾಶ್ವತ
ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ, ಸರಕಾರದ ಬೊಕ್ಕಸದಲ್ಲಿದ್ದ ಹಣವನ್ನು ದೇಗುಲ ಇತ್ಯಾದಿಗಳಿಗೆ ಹಂಚಿ ಅಭಿವೃದ್ಧಿ ಮಾಡಿದ್ದೇನೆ ಎನ್ನುವುದು ಅಭಿವೃದ್ಧಿಯಾಗಲಾರದು. ಬ್ರಹ್ಮಾವರ ವಿಧಾನಸಭಾ ಕ್ಷೇತ್ರವಿರುವಾಗ ಜಯಪ್ರಕಾಶ್ ಹೆಗ್ಡೆಯವರು ಕೈಗೊಂಡ ರಸ್ತೆ, ಸೇತುವೆ ಕಾಮಗಾರಿಗಳು, ಮೀನುಗಾರಿಕೆ ಗೆ ನೀಡಿದ ಶಾಶ್ವತ ಯೋಜನೆಗಳು, ಹೊಸ ಜಿಲ್ಲೆ ನಿರ್ಮಾಣ ನಿಜವಾದ ಅಭಿವೃದ್ಧಿ ಹಾಗೂ ಜನಮಾನಸದಲ್ಲಿ ನಿರಂತರವಾಗಿ ಉಳಿಯುವ ಕೊಡುಗೆಗಳಾಗಿವೆ. ಇಂತಹ ಹತ್ತು ಹಲವಾರು ಯೋಜನೆಗಳು ಮತ್ತೆ ಆಗಬೇಕಾದರೆ ಹೆಗ್ಡೆ ಗೆಲ್ಲಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
D.K,Udupi ಸಿಎನ್ಜಿ ಇಂಧನ ಕೊರತೆ: ಬಂಕ್ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು
Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು