ಶೀರೂರು ಶ್ರೀ ಪ್ರಕರಣ ವಾರದಲ್ಲಿ ಎಫ್ಎಸ್ಎಲ್ ವರದಿ
Team Udayavani, Aug 20, 2018, 12:09 PM IST
ಉಡುಪಿ: ಕುತೂಹಲ ಕೆರಳಿಸಿದ್ದ ಶೀರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ನಿಧನ ಕುರಿತು ಎದ್ದ ಊಹಾಪೋಹಗಳಿಗೆ ಈ ವಾರದೊಳಗೆ ತೆರೆ ಬೀಳಲಿದೆ. ಮೃತದೇಹದ ಅಂಶಗಳು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್ಎಲ್) ರವಾನೆಯಾಗಿದ್ದು, ವರದಿ ಇನ್ನೊಂದೆರಡು ದಿನಗಳಲ್ಲಿ ಬರುವ ನಿರೀಕ್ಷೆ ಇದೆ. ಈಗಾಗಲೇ ಪ್ರಾಥಮಿಕ ಮರಣೋತ್ತರ ಪರೀಕ್ಷಾ ವರದಿ ಕೈಸೇರಿದೆ. ಇನ್ನಷ್ಟು ಸೂಕ್ಷ್ಮ ಅಂಶಗಳಿಗಾಗಿ ಎಫ್ಎಸ್ಎಲ್ ವರದಿಗಾಗಿ ಕಾಯಲಾಗುತ್ತಿದೆ.
ಈ ವರದಿ ಬಂದ ಬಳಿಕ ಪೊಲೀಸರು ಸಮಗ್ರ ವರದಿ ಬಹಿರಂಗಗೊಳಿಸಲಿದ್ದಾರೆ. ಅನಂತರ ಶೀರೂರು ಮೂಲ ಮಠದ ಸುಪರ್ದಿಯನ್ನು ದ್ವಂದ್ವ ಮಠವಾದ ಸೋದೆ ಮಠಕ್ಕೆ ಬಿಟ್ಟುಕೊಡಲಿದ್ದಾರೆ. ಬಳಿಕ ವಿವಿಧ ಹೋಮಗಳೇ ಮೊದಲಾದ ಧಾರ್ಮಿಕ ಕ್ರಿಯೆಗಳ ಸಹಿತ ಆರಾಧನೆಯನ್ನು ನಡೆಸಲಾಗುವುದು.
ಸೋದೆ ಮಠಾಧೀಶರು ಶಿರಸಿ ಸಮೀಪದ ಸೋಂದಾ ಕ್ಷೇತ್ರದಲ್ಲಿ ಚಾತುರ್ಮಾಸ ವ್ರತದಲ್ಲಿ ಇರುವುದರಿಂದ ಅವರ ಮಾರ್ಗದರ್ಶನದಲ್ಲಿ ವೈದಿಕರು ಆರಾಧನೆ ನಡೆಸಲಿದ್ದಾರೆ. ಇದೆಲ್ಲವೂ ಅಂದುಕೊಂಡಂತೆ ನಡೆದರೆ ಆ. 25ರಂದು ಶೀರೂರು ಮಠದ ಮುಖ್ಯಪ್ರಾಣ ದೇವರಿಗೆ ಶನಿವಾರದ ರಂಗಪೂಜೆ ಸಾರ್ವಜನಿಕರ ಪ್ರವೇಶದೊಂದಿಗೆ ನಡೆಯಲಿದೆ. ಕಳೆದೊಂದು ತಿಂಗಳಿಂದ ರಂಗಪೂಜೆ ನಡೆಯುತ್ತಿದ್ದರೂ ಸಾರ್ವಜನಿಕರಿಗೆ ಪ್ರವೇಶವಿರಲಿಲ್ಲ. ಇದಾದ ಬಳಿಕ ಪ್ರತಿ ಶನಿವಾರ ರಂಗಪೂಜೆ ಹಿಂದಿನಂತೆ ನಡೆಯಲಿದೆ.