ಶಾಶ್ವತ ತಡೆಬೇಲಿ ನಿರ್ಮಾಣಕ್ಕೆ ಗ್ರಾಮಸ್ಥರ ಆಗ್ರಹ
Team Udayavani, Apr 27, 2018, 7:35 AM IST
ಕೋಟೇಶ್ವರ: ಇಲ್ಲಿನ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ನಾಲ್ಕುವರೆ ಎಕರೆ ವಿಸ್ತೀರ್ಣದ ಕೋಟಿತೀರ್ಥ ಕೆರೆಯ ಸುತ್ತಲೂ ತಡೆಬೇಲಿ ನಿರ್ಮಿಸಿ, ಇಲ್ಲಿ ಸಂಭವಿಸುವ ದುರಂತಕ್ಕೊಂದು ಶಾಶ್ವತ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.
ಪ್ರತಿ ವರ್ಷ ಅಮಾಯಕ ಯುವಕರು, ಶಾಲಾ ಬಾಲಕರು ಈ ಪುಷ್ಕರಣಿಯಲ್ಲಿ ಈಜಲು ತೆರಳಿ ಸಾವನ್ನಪ್ಪುತ್ತಿರುವುದು ಕ್ಷೇತ್ರಕ್ಕೆ ಕಪ್ಪುಚುಕ್ಕೆಯಾಗಿದೆ. ಶಾಶ್ವತ ಪರಿಹಾರ ಕಂಡುಕೊಳ್ಳಲು ಸುತ್ತಲೂ ತಡೆಬೇಲಿ ನಿರ್ಮಿಸಿ ಸಂಜೆಯ ನಂತರ ಪ್ರವೇಶ ದ್ವಾರಕ್ಕೆ ಬೀಗ ಹಾಕುವಂತೆ ಆಗ್ರಹಿಸಿದರು.
ಕಳೆದ ವಾರ ಇಲ್ಲಿನ ಸರಕಾರಿ ಕಾಲೇಜು ವಿದ್ಯಾರ್ಥಿಗಳೀರ್ವರು ಈಜಲು ಹೋಗಿ ಸಾವನ್ನಪ್ಪಿದ್ದರು.ಈ ಕುರಿತು ಕುಂದಾಪುರ ಉಪವಿಭಾಗಾಧಿಕಾರಿ ಭೂಬಾಲನ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ ಸಂಬಂಧಪಟ್ಟ ಇಲಾಖೆಯ ಮೂಲಕ ಸರಕಾರದ ಗಮನ ಸೆಳೆದು ಪರಿಹಾರ ಒದಗಿಸುವಲ್ಲಿ ಶ್ರಮಿಸುವುದಾಗಿ ಹೇಳಿದ್ದಾರೆ.
ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಮಾರ್ಕೋಡು ಅವರು ಧಾರ್ಮಿಕ ದತ್ತಿ ಇಲಾಖೆಯ ಗಮನ ಸೆಳೆಯಲಾಗಿದೆ ಎಂದರು.