ಇಂದು ಕೃಷ್ಣಮಠದಲ್ಲಿ ಜನ್ಮಾಷ್ಟಮಿ ಸಂಭ್ರಮ
Team Udayavani, Sep 2, 2018, 6:00 AM IST
ಉಡುಪಿ: ಕಡೆಗೋಲು ಕೃಷ್ಣನ ನಾಡು ಉಡುಪಿಯಲ್ಲಿ ಇಂದು (ಸೆ.2) ಜನ್ಮಾಷ್ಟಮಿ ಸಂಭ್ರಮ. ರಾತ್ರಿ 11.48ಕ್ಕೆ ಚಂದ್ರೋದಯವಾಗಲಿದ್ದು, ತುಳಸಿ ಗಿಡದ ಬಳಿ ಅಘ್ರ್ಯಪ್ರದಾನ ಮಾಡಲಾಗುತ್ತದೆ. ಶನಿವಾರದಿಂದಲೇ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಕೃಷ್ಣನ ದರ್ಶನಕ್ಕೆ ಆಗಮಿಸುತ್ತಿದ್ದು, ವೇಷಗಳು ಹಬ್ಬದ ಮೆರುಗು ಹೆಚ್ಚಿಸಿವೆ.
ಕೃಷ್ಣಾಷ್ಟಮಿಗೆಂದು ದೇಗುಲದ ಒಳಗೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿದೆ. ದೇವರಿಗೆ ಜನ್ಮಾಷ್ಟಮಿಯಂದು ವಜ್ರಕವಚದ ಅಲಂಕಾರ ಮಾಡಿದರೆ, ವಿಟ್ಲಪಿಂಡಿಯಂದು ಗೋಪಾಲಕೃಷ್ಣನ ಅಲಂಕಾರ ಮಾಡಲಾಗುತ್ತದೆ.
ಸೆ. 2ರ ಬೆಳಗ್ಗೆಯಿಂದಲೇ ಸಹಸ್ರ ವಿಷ್ಣು ಪಾರಾಯಣ, ಲಕ್ಷ ತುಳಸಿ ಅರ್ಚನೆ ನಡೆಯಲಿದ್ದು, ಬೆಳಗ್ಗೆ 10 – ಸಂಜೆ 6ರ ವರೆಗೆ ಮಧ್ವಮಂಟಪದಲ್ಲಿ ವಿವಿಧ ಮಹಿಳಾ ತಂಡಗಳಿಂದ ನಡೆಯುವ ಭಜನೆ, ಮಧ್ಯಾಹ್ನ 12ರಿಂದ ಓಲಗ ಮಂಟಪದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸುಬ್ರಾಯ ಭಂಡಾರಿ ಅವರಿಂದ ವೈವಿಧ್ಯ ಸಂಗೀತ ಜುಗಲ್ಬಂದಿ, ಸಂಜೆ 6ರಿಂದ ಗಿಟಾರ್ ಕಲಾವಿದ ಶರತ್ ಹಳೆಯಂಗಡಿ ತಂಡದಿಂದ ವೈವಿಧ್ಯಮಯ ಕಾರ್ಯಕ್ರಮ, ಸಂಜೆ 7ಕ್ಕೆ ಪ್ರವೀಣ್ ಗೋಡಿVಂಡಿಯವರಿಂದ ರಾಜಾಂಗಣದಲ್ಲಿ ವೇಣು ವಾದನ ಕಛೇರಿ ನಡೆಯಲಿದೆ.
ಸೆ.15ಕ್ಕೆ ಮುದ್ದುಕೃಷ್ಣ ಬಹುಮಾನ ವಿತರಣೆ
ಈ ಬಾರಿ ಕೃಷ್ಣ ಜನ್ಮಾಷ್ಟಮಿಗೆ ಚಿಣ್ಣರ ಸಂತರ್ಪಣೆ ನಡೆಯುವ ಶಾಲಾ ವಿದ್ಯಾರ್ಥಿಗಳಿಗೆ ಮುದ್ದು ಕೃಷ್ಣ ಸ್ಪರ್ಧೆ ಆಯೋಜಿಸಲಾಗಿದ್ದು, ಸುಮಾರು 80 ಶಾಲೆಗಳ ಸಾವಿರ ವಿದ್ಯಾರ್ಥಿಗಳಿಗೆ ಸೆ.15ರಂದು ಬಹುಮಾನ ವಿತರಣೆ ನಡೆಯಲಿದೆ. ಪ್ರತಿ ಶಾಲೆಯಲ್ಲಿ ವಿವಿಧ ಹಂತಗಳಲ್ಲಿ ಆಯ್ಕೆಯಾದ 12 ಮಕ್ಕಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ವಿತರಣೆ ನಡೆಯಲಿದೆ. ಪ್ರಥಮ ಬಹುಮಾನವಾಗಿ 750 ರೂ. ದ್ವಿತೀಯ ಬಹುಮಾನ 500 ರೂ ಹಾಗೂ ತೃತೀಯ ಬಹುಮಾನ 300 ರೂ ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ಮಕ್ಕಳಿಗೆ ನೀಡಲಾಗುತ್ತದೆ.
ನಾಗರಿಕ ಸಮಿತಿಯಿಂದ ಆ್ಯಂಬ್ಯುಲೆನ್ಸ್ ಸೇವೆ
ಜನ್ಮಾಷ್ಟಮಿಯಂದು ದೂರದೂರದ ಭಕ್ತರು ಕೃಷ್ಣನ ದರ್ಶನಕ್ಕೆ ಆಗಮಿಸುವ ಹಿನ್ನೆಲೆ ಮಠದ ಪರಿಸರದ ಆಯಕಟ್ಟಿನ ಸ್ಥಳದಲ್ಲಿ ತುರ್ತು ಸೇವೆಗೆಂದು ನಾಗರಿಕ ಸಮಿತಿಯಿಂದ ಆ್ಯಂಬ್ಯುಲೆನ್ಸ್ ಸೇವೆ ಇದೆ. ಮತ್ತು ಶೀರೂರು ಶ್ರೀಗಳ ಸ್ಮರಣಾರ್ಥ ವಿಟ್ಲಪಿಂಡಿಯಂದು ಅಪರಾಹ್ನ 2ಕ್ಕೆ ನಾಗರಿಕ ಸಮಿತಿ ಕಚೇರಿ ಬಳಿ ಚಕ್ಕುಲಿ ವಿತರಣೆ ನಡೆಯಲಿದೆ.
ಗರ್ಭಗುಡಿ ಮೇಲ್ಛಾವಣಿಗೆ ಚಿನ್ನದ ಹೊದಿಕೆ
ಶ್ರೀ ಕೃಷ್ಣ ಮಠದ ಗರ್ಭಗುಡಿ ಮೇಲ್ಚಾವಣಿಗೆ ಚಿನ್ನದ ಹೊದಿಕೆ ಹೊದಿಸುವ ಕಾರ್ಯಕ್ಕೆ ಪರ್ಯಾಯ ಶ್ರೀಗಳು ಸಂಕಲ್ಪಿಸಿದ್ದು, ಸಾಮಾನ್ಯ ಭಕ್ತರಿಗೂ ಈ ಕಾರ್ಯದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಈ ಹಿನ್ನೆಲೆ ಮಠದ ವೃಂದಾವನದ ಬಳಿ ಕಚೇರಿಯನ್ನು ತೆರೆಯಲಾಗಿದ್ದು ಬೆಳಗ್ಗೆ 10ಕ್ಕೆ ಪರ್ಯಾಯ ಶ್ರೀ ವಿದ್ಯಾಧೀಶತೀರ್ಥರು ಉದ್ಘಾಟಿಸಲಿದ್ದಾರೆ.
ಆನ್ಲೈನ್ ಕಥೆ ಹೇಳುವ ಸ್ಪರ್ಧೆ
ಜನ್ಮಾಷ್ಟಮಿ ಪ್ರಯುಕ್ತ ಮೂರು ವರ್ಷ ಮೇಲ್ಪಟ್ಟ ಮಕ್ಕಳಿಗೆ ಆನ್ಲೈನ್ ಕಥೆ ಹೇಳುವ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೇಶ ವಿದೇಶದ 800ಕ್ಕೂ ಅಧಿಕ ಮಕ್ಕಳ ಕತೆಗಳು ಬಂದಿದ್ದು ಅದರಲ್ಲಿ 300 ಮಕ್ಕಳ ಕತೆಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಉತ್ತಮ ಕಥೆಗಳಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ. ಗಂಡು ಮಕ್ಕಳಿಗೆ ಕೃಷ್ಣನಿಗೆ ಅರ್ಪಿಸಿದ ತುಳಸಿ ಮಣಿಮಾಲೆ ಮತ್ತು ಹೆಣ್ಮಕ್ಕಳಿಗೆ ಶ್ರೀಕೃಷ್ಣನಿಗೆ ಅರ್ಪಿಸಿದ ಹವಳದ ಮಣಿಮಾಲೆಯನ್ನು ಬಹುಮಾನವಾಗಿ ವಿತರಿಸಲಾಗುತ್ತದೆ.
ಚಿತ್ರ: ಆಸ್ಟ್ರೋ ಮೋಹನ್