ಮರವಂತೆ ಬೀಚ್ ಅಭಿವೃದ್ಧಿ ಯೋಜನೆಗೆ ಒತ್ತಡ
Team Udayavani, Feb 2, 2019, 12:50 AM IST
ಗಂಗೊಳ್ಳಿ: ಹೊಸಪೇಟೆ ರಸ್ತೆ ಅಭಿವೃದ್ಧಿಗೆ ಸುಮಾರು 1.60 ಕೋ. ರೂ. ಮಂಜೂರಾಗಿದೆ. ತ್ರಾಸಿ – ಮರವಂತೆ ಬೀಚ್ ಅಭಿವೃದ್ಧಿ ಬಗ್ಗೆ ಯೋಜನೆ ರೂಪಿಸಲು ಸರಕಾರದ ಮೇಲೆ ಒತ್ತಡ ಹೇರಲಾಗುವುದು. ಇಲ್ಲಿ ನಡೆಯುತ್ತಿರುವ ಕಾಮ ಗಾರಿಗೆ ಶಿಲೆಕಲ್ಲುಗಳನ್ನು ಸಾಗಿಸಲಾಗುತ್ತಿದ್ದು, ಇದರ ರಾಜಧನವನ್ನು ಆಯಾ ಗ್ರಾ.ಪಂ.ಗಳಿಗೆ ನೀಡುವಂತೆ ಡಿಸಿಗೆ ಸೂಚಿಸಲಾಗಿದೆ ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಹೇಳಿದರು.
ಉಡುಪಿ ಜಿ.ಪಂ., ಕುಂದಾಪುರ ತಾ.ಪಂ., ತ್ರಾಸಿ ಗ್ರಾ. ಪಂ. ಆಶ್ರಯದಲ್ಲಿ ತ್ರಾಸಿ ಗ್ರಾ. ಪಂ. ವಠಾರದಲ್ಲಿ ಶುಕ್ರವಾರ ಜರಗಿದ ವಿವಧ ಸವಲತ್ತು ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಫಲಾನುಭವಿಗಳಿಗೆ ಸವಲತ್ತು ವಿತರಿಸಿ ಮಾತನಾಡಿದರು.
ಜಿ.ಪಂ. ಸದಸ್ಯೆ ಶೋಭಾ ಜಿ. ಪುತ್ರನ್, ತಾ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ನಾರಾಯಣ ಕೆ., ತಾ.ಪಂ. ಸದಸ್ಯ ರಾಜು ದೇವಾಡಿಗ, ಗ್ರಾ.ಪಂ. ಸದಸ್ಯರಾದ ರವೀಂದ್ರ ಖಾರ್ವಿ, ವಿಜಯ ಪೂಜಾರಿ, ಜೀತಾ ಡಿಸಿಲ್ವಾ, ರತ್ನಾವತಿ, ಜಯಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.
ಸವಲತ್ತು ವಿತರಣೆ
ಶೇ.2 ರ ನಿಧಿಯಡಿ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ವಾಟರ್ ಫಿಲ್ಟರ್, ಫ್ಯಾನ್, ಅಂಗವಿಕಲರಿಗೆ ಕೃತಕ ಕಾಲು, ವೈದ್ಯಕೀಯ ಸೌಲಭ್ಯ ಹಾಗೂ ಶೇ. 25 ರ ನಿಧಿಯಲ್ಲಿ 95 ಕುಟುಂಬಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.
ಗ್ರಾ.ಪಂ. ಅಧ್ಯಕ್ಷ ಸುಧಾಕರ ಆಚಾರ್ಯ ಸ್ವಾಗತಿಸಿ, ಕಾರ್ಯದರ್ಶಿ ವಿನಯ್ ವಂದಿಸಿದರು. ಪಿಡಿಒ ಶೋಭಾ ಕಾರ್ಯಕ್ರಮ ನಿರೂಪಿಸಿದರು.
ಏತ ನೀರಾವರಿಗೆ ಪ್ರಯತ್ನ
ಸಿದ್ದಾಪುರ – ಸೌಕೂರು ಏತ ನೀರಾವತಿ ಯೋಜನೆಯನ್ನು ಈ ಬಾರಿಯ ಬಜೆಟ್ನಲ್ಲಿ ಸೇರಿಸುವ ಪ್ರಯತ್ನ ನಡೆಸಿದ್ದು, ಜಲಧಾರೆ ಯೋಜನೆ ಕಾರ್ಯ ರೂಪಕ್ಕೆ ಬರುವಂತೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ಪ.ಜಾತಿ ಹಾಗೂ ಪ. ಪಂಗಡದ ಜನರನ್ನು ಸಮಾಜದ ಮುಂಚೂಣಿಗೆ ತರುವ ಕೆಲಸ ಮಾಡಿದಾಗ ಡಾ|ಅಂಬೇಡ್ಕರ್ ಅವರ ಕನಸು ನನಸಾಗಲಿದೆ. ತ್ರಾಸಿ ಗ್ರಾ.ಪಂ. ಪ.ಜಾತಿ ಮತ್ತು ಪ.ಪಂಗಡದ ಹಾಗೂ ಅಂಗವಿಕಲರ ಕಲ್ಯಾಣಕ್ಕಾಗಿ ಅನುದಾನವನ್ನು ಸದ್ವಿನಿಯೋಗ ಮಾಡುತ್ತಿರುವುದು ಶ್ಲಾಘನೀಯ.
– ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ