ಟಿ. ಮೋಹನದಾಸ್ ಪೈ ಅಮೃತೋತ್ಸವ ಕಟ್ಟಡಕ್ಕೆ ಭೂಮಿಪೂಜೆ
ಉಡುಪಿ ಎಂಜಿಎಂ ಕಾಲೇಜು
Team Udayavani, Mar 11, 2023, 2:43 AM IST
ಉಡುಪಿ: ಅಮೃತ ಮಹೋತ್ಸವ ಹೊಸ್ತಿಲಿನಲ್ಲಿರುವ ಎಂಜಿಎಂ ಕಾಲೇಜಿನ ಆವರಣದಲ್ಲಿ ಎಂಜಿಎಂ ಕಾಲೇಜು ಟ್ರಸ್ಟ್ ಅಧ್ಯಕ್ಷರಾಗಿದ್ದ ಟಿ. ಮೋಹನದಾಸ್ ಪೈ ಅವರ ಹೆಸರಿನಲ್ಲಿ ಸುಮಾರು 12 ಕೋ.ರೂ. ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಅಮೃತ ಮಹೋತ್ಸವ ಕಟ್ಟಡ ನಿರ್ಮಾಣಗೊಳ್ಳಲಿದೆ. ಟಿ. ಮೋಹನದಾಸ್ ಪೈ ಅಮೃತ ಮಹೋತ್ಸವ ಕಟ್ಟಡದ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನಡೆಯಿತು.
ಎಂಜಿಎಂ ಕಾಲೇಜು ಟ್ರಸ್ಟ್ ಅಧ್ಯಕ್ಷ ಟಿ. ಸತೀಶ್ ಯು. ಪೈ, ಮಣಿಪಾಲ್ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಕುಲಸಚಿವ ಡಾ| ರಂಜನ್ ಆರ್. ಪೈ ಮೊದಲಾದವರು ಭೂಮಿಪೂಜೆ ನಡೆಸಿದರು. ಕಾಲೇಜು ಟ್ರಸ್ಟ್ನ ಟ್ರಸ್ಟಿ ಟಿ. ಅಶೋಕ್ ಪೈ, ಡಾ| ಟಿ.ಎಂ.ಎ. ಪೈಯವರ ಪುತ್ರಿ ಡಾ| ಆಶಾ ಪೈ, ಅಳಿಯ ಡಾ| ಕಮಲೇಶ ಪೈ, ಮಾಹೆ ವಿ.ವಿ. ಕುಲಪತಿ ಲೆ|ಜ| ಡಾ| ಎಂ.ಡಿ. ವೆಂಕಟೇಶ್, ಕುಲಸಚಿವ ಡಾ| ಗಿರಿಧರ ಕಿಣಿ, ಅಕಾಡೆಮಿ ಕಾರ್ಯದರ್ಶಿ ಬಿ.ಪಿ. ವರದರಾಯ ಪೈ, ಮಾಜಿ ಟ್ರಸ್ಟಿ ಪದ್ಮಾಕರ ನಾಯಕ್, ಕಾಲೇಜಿನ ಪ್ರಾಂಶುಪಾಲ ಪ್ರೊ| ಲಕ್ಷ್ಮೀನಾರಾಯಣ ಕಾರಂತ, ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ, ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ|ದೇವಿದಾಸ ಎಸ್. ನಾಯ್ಕ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ| ಜಗದೀಶ ಶೆಟ್ಟಿ, ಬೋಧಕ, ಬೋಧಕೇತರ ಸಿಬಂದಿ ಉಪಸ್ಥಿತರಿದ್ದರು. ಕಂಪ್ಯೂಟರ್ ವಿಜ್ಞಾನ ವಿಭಾಗ ಮುಖ್ಯಸ್ಥ ಡಾ| ವಿಶ್ವನಾಥ ಪೈ ನಿರ್ವಹಿಸಿದರು.
32 ಸಾವಿರ ಚದರಡಿಯ ಅತ್ಯಾಧುನಿಕ ಕಟ್ಟಡ
ನೂತನ ಕಟ್ಟಡದಲ್ಲಿ ಮೋಹನ ದಾಸ್ ಪೈ ಕೌಶಲಾಭಿವೃದ್ಧಿ ಕೇಂದ್ರ, ಸ್ಮಾರ್ಟ್ ಕ್ಲಾಸ್ರೂಮ್ಗಳು, ಯೋಗ ಕೇಂದ್ರ, ಸಭಾಂಗಣವನ್ನು ನಿರ್ಮಿಸಲಾಗುತ್ತದೆ. ತಳ ಅಂತಸ್ತು ಮತ್ತು ಮೂರು ಮಹಡಿಗಳುಳ್ಳ ಕಟ್ಟಡ ಇದಾಗಿರುತ್ತದೆ. ತಲಾ ಸುಮಾರು 8 ಸಾವಿರ ಚದರಡಿ, ಒಟ್ಟು 32 ಸಾವಿರ ಚದರಡಿ ವಿಸ್ತೀರ್ಣದ ಕಟ್ಟಡ ಒಂದು ವರ್ಷದಲ್ಲಿ ನಿರ್ಮಾಣವಾಗಲಿದೆ.