ಪ್ರಸಕ್ತ ವರ್ಷ 8 ಸೇತುವೆಗೆ ಶಿಲಾನ್ಯಾಸ: ಸೊರಕೆ
Team Udayavani, Dec 22, 2017, 10:10 AM IST
ಕಾಪು: ಕಾಪು ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳು, ಹಳ್ಳಿಗಳು ಮತ್ತು ಕುದ್ರುಗಳ ನಡುವೆ ಸಂಪರ್ಕ ಕಲ್ಪಿಸಲು ಪ್ರಸಕ್ತ ವರ್ಷ ಎಂಟು ಸೇತುವೆಗಳ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ. ಕಳೆದ ನಾಲ್ಕೂವರೆ ವರ್ಷದಲ್ಲಿ ವಿವಿಧ ಅನುದಾನಗಳನ್ನು ಜೋಡಿಸಿಕೊಂಡು ಸುಮಾರು 25ಕ್ಕೂ ಅಧಿಕ ಸೇತುವೆಗಳನ್ನು ನಿರ್ಮಿಸಲಾಗಿದೆ ಎಂದು ಶಾಸಕ ವಿನಯಕುಮಾರ್ ಸೊರಕೆ ಹೇಳಿದರು.
ಅವರು ಗುರುವಾರ ಕರ್ನಾಟಕ ಸರಕಾರ ಮತ್ತು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಮೂಲಕ ಸುಮಾರು 4 ಕೋ.ರೂ. ವೆಚ್ಚದಲ್ಲಿ ಕೋಟೆ ಗ್ರಾ.ಪಂ. ವ್ಯಾಪ್ತಿಯ ಮಟ್ಟು ಗ್ರಾಮದ ಪಾಪನಾಶಿನಿ ಹೊಳೆಗೆ ಕಟಪಾಡಿ-ಮಟ್ಟು ನಡುವೆ ನಿರ್ಮಿಸುವ ಸೇತುವೆ ಶಂಕುಸ್ಥಾಪನೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಟ್ಟುವಿನಲ್ಲಿ ವಾದಿರಾಜರ ಸ್ಮಾರಕ ಶಿಲಾನ್ಯಾಸ ನೆರವೇರಿಸಿದ ಉಡುಪಿ ಸೋದೆ ವಾದಿ ರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಸೋದೆ ವಾದಿರಾಜ ಮಠದ ಶ್ರೀ ವಾದಿರಾಜ ಸ್ವಾಮೀಜಿಗಳಿಗೂ ಮಟ್ಟು ಪ್ರದೇಶಕ್ಕೂ ಅವಿನಾಭಾವ ಸಂಬಂಧವಿದ್ದು, ಅದನ್ನು ಮುಂದಿನ ಪೀಳಿಗೆಗೂ ತಿಳಿಸಿಕೊಡುವ ನಿಟ್ಟಿನಲ್ಲಿ ಶ್ರೀಗಳ ಸ್ಮಾರಕವನ್ನು ರಚಿಸುವ ಸಂಕಲ್ಪವಿದೆ. ಮಾತ್ರ ವಲ್ಲದೆ ಮಟ್ಟುವನ್ನು ಪ್ರವಾಸಿ ಕ್ಷೇತ್ರವನ್ನಾಗಿ ಪರಿವರ್ತಿಸುವ ಅವಕಾಶ ನಮ್ಮ ಮುಂದಿದೆ ಎಂದರು.
ಪರಂಗಿಕುದ್ರುಗೆ ಸೇತುವೆ – ಮನವಿ
ಉಡುಪಿ ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ ಮಾತನಾಡಿ, ಮುಂದೆ ಪರಂಗಿಕುದ್ರುವಿಗೆ ಸೇತುವೆ ರಚನೆಗೆ ಅನುದಾನ ಬಿಡುಗಡೆ ಕೋರಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ವಂ| ಎಡ್ವಿನ್ ಜೋಸೆಫ್, ರಾಜೇಶ್ ಕುಮಾರ್ ಅಂಬಾಡಿ, ರಾಜೇಶ್ ಶೆಟ್ಟಿ ಪಾಂಗಾಳ, ಕೃತಿಕಾ ರಾವ್, ಜೂಲಿಯೆಟ್ ವೀರಾ ಡಿ’ಸೋಜಾ, ನವೀನ್ಚಂದ್ರ ಜೆ. ಶೆಟ್ಟಿ, ಕಾಪು ದಿವಾಕರ ಶೆಟ್ಟಿ, ಗಣೇಶ್ ಕುಮಾರ್ ಮಟ್ಟು, ಲಕ್ಷ್ಮೀನಾರಾಯಣ ರಾವ್ ಅತಿಥಿಗಳಾಗಿದ್ದರು.
ಸಮ್ಮಾನ
ವಿನಯಕುಮಾರ್ ಸೊರಕೆ, ಲಕ್ಷ್ಮೀನಾರಾಯಣ ರಾವ್, ದಯಾನಂದ ಬಂಗೇರ ಮತ್ತು ಸರಸು ಬಂಗೇರ ಇವರನ್ನು ಸಮ್ಮಾನಿಸಲಾಯಿತು. ಕಿಶೋರ್ ಕುಮಾರ್ ಅಂಬಾಡಿ ಸ್ವಾಗತಿಸಿದರು. ಸರಸು ಡಿ. ಬಂಗೇರ ಪ್ರಸ್ತಾವನೆಗೈದರು. ಸುಶೀಲ್ ಬೋಳಾರ್ ವಂದಿಸಿದರು. ಪ್ರಶಾಂತ್ ಜತ್ತನ್ನ ಮತ್ತು ಯತೀಶ್ ಕೋಟ್ಯಾನ್ ನಿರ್ವಹಿಸಿದರು.