“ಹೆಣ್ಣು ಮಕ್ಕಳ ಸಂಖ್ಯೆ ಇಳಿಕೆ ಕಳವಳಕಾರಿ: ಗಂಭೀರ ಚಿಂತನೆ ಅತ್ಯಗತ್ಯ’
Team Udayavani, Apr 28, 2017, 12:03 PM IST
ಉಡುಪಿ: ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ 1994 ಬಗ್ಗೆ ಉಡುಪಿ ತಾಲೂಕು ಮಟ್ಟದ ಕಾರ್ಯಗಾರ ತಾ. ಪಂ. ಕಚೇರಿ ಸಭಾಂಗಣದಲ್ಲಿ ನಡೆಯಿತು.
ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ ಕಾರ್ಯಕ್ರಮ ಉದ್ಘಾಟಿಸಿ ಗರ್ಭಪೂರ್ವ ಪ್ರಸವ ಪೂರ್ವ ಭ್ರೂರ್ಣ ಲಿಂಗ ಪತ್ತೆ ನಿಷೇಧ ಕಾಯ್ದೆ ಅನುಸಾರ ಭ್ರೂಣ ಪತ್ತೆ ಮಾಡುವವರಿಗೆ ಆಗುವ ಶಿಕ್ಷೆ ಪ್ರಮಾಣ ದಂಡದ ಪ್ರಮಾಣಗಳ ಕುರಿತು ವಿವರಿಸಿದರು. ಜಿಲ್ಲೆಯಲ್ಲಿ 5 ವರ್ಷದೊಳಗಿನ ಮಕ್ಕಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ. ಕಾನೂನಿನ ಜತೆಗೆ ನಾಗರಿಕ ಸಮಾಜ ಕೂಡ ಈ ಬಗ್ಗೆ ಗಂಭೀರ ಚಿಂತನೆ ಮಾಡಬೇಕಾಗಿದೆ ಎಂದರು.
ಮಹಿಳಾ ಪೊಲೀಸ್ ಠಾಣೆಯ ಎಸ್ಐ ಮುಕ್ತಾಬಾಯಿ, ಹೆಣ್ಣು ಮಕ್ಕಳ ರಕ್ಷಣೆ, ಆಗುವ ತೊಂದರೆ, ಲೈಂಗಿಕ ಕಿರುಕುಳ, ರಕ್ಷಣೆಗೆ ಇರುವ ಸೌಲಭ್ಯಗಳ ಕುರಿತು ವಿವರಿಸಿದರು. ತಾ. ಪಂ. ನಳಿನಿ ಪ್ರದೀಪ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮ್ ರಾವ್, ಶಿಶು ಅಭಿವೃದ್ಧಿ ಅಧಿಕಾರಿ ವೀಣಾ ವಿವೇಕಾನಂದ ಉಪಸ್ಥಿತರಿದ್ದರು.ತಾಲೂಕು ಆರೋಗ್ಯಾಧಿಕಾರಿ ಡಾ| ನಾಗರತ್ನ ಸ್ವಾಗತಿಸಿ, ಹಿರಿಯ ಆರೋಗ್ಯ ಸಹಾಯಕ ದೇವಪ್ಪಪಟಗಾರ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಆಶಾ ಸಂಯೋಜಕಿ ಶಿಲ್ಪ ವಂದಿಸಿದರು.