ಶ್ರೀಕೃಷ್ಣನಿಗೆ ಪೇಜಾವರ ಶ್ರೀಗಳ ಕೈಯಿಂದ ಕೊನೆಯ ಮಂಗಳಾರತಿ
Team Udayavani, Dec 30, 2019, 8:25 AM IST
ಉಡುಪಿ: ಸತತ 9 ದಿನಗಳಿಂದ ತೀವ್ರ ಉಸಿರಾಟದ ಸಮಸ್ಯೆ ಹಾಗೂ ನ್ಯುಮೋನಿಯದಿಂದ ಬಳಲುತ್ತಿದ್ದ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರನ್ನು ವೆಂಟಿಲೇಟರ್ ಸಹಾಯದೊಂದಿಗೆ ಬೆಳಗ್ಗೆ 7.10ಕ್ಕೆ ಮಣಿಪಾಲ ಆಸ್ಪತ್ರೆಯಿಂದ ಪೇಜಾವರ ಮಠಕ್ಕೆ ಸ್ಥಳಾಂತರಿಸಲಾಯಿತು. ಈ ಸಂದರ್ಭದಲ್ಲಿ ಸಾಮೂಹಿಕ ವಿಷ್ಣು ಸಹಸ್ರನಾಮ, ವಾಯುಸ್ತುತಿ, ರುದ್ರಸೂಕ್ತ ಪಾರಾಯಣ ಸೇರಿದಂತೆ ಶ್ರೀಪಾದರಿಗೆ ಇಷ್ಟವಾದ ಮಂತ್ರಗಳನ್ನು ವಿದ್ವಾಂಸರು ಸತತ ಪಠಿಸಿದರು.
ಬೆಳಗ್ಗೆ 9.08ರ ಸುಮಾರಿಗೆ ಶ್ರೀಪಾದರಿಗೆ ಇಡಲಾದ ವೆಂಟಿಲೇಟರ್ನ್ನು ತೆಗೆಯಲಾಯಿತು. ಶ್ರೀಪಾದರು ವೆಂಟಿಲೇಟರ್ ತೆಗೆದ ಬಳಿಕವೂ ಸುಮಾರು ಹತ್ತು ನಿಮಿಷಗಳ ಉಸಿರಾಟ ಮಾಡಿರುವುದಾಗಿ ಮಠದ ಮೂಲಗಳು ತಿಳಿಸಿವೆ. ಪೇಜಾವರ ಮಠದ ಕಿರಿಯ ಯತಿಗಳು ಹಿರಿಯ ಶ್ರೀಗಳ ಬಾಯಿಗೆ ದೇವರ ತೀರ್ಥವನ್ನು ಹಾಕಿ, ಗಂಧ ಪ್ರಸಾದವನ್ನು ಹಣೆಗೆ ಹಚ್ಚುತ್ತಿದ್ದಂತೆ ಕೊನೆಯ ಉಸಿರು ಎಳೆದರು. 9.20ರ ಸುಮಾರಿಗೆ ಮಠದ ಆಪ್ತರಾದ ವಾಸುದೇವ್ ಭಟ್ ಅವರು ಮೂರು ಬಾರಿ ಗೋವಿಂದ ನಾಮ ಕೂಗುವ ಮೂಲಕ ಶ್ರೀಗಳ ನಿರ್ಯಾಣವನ್ನು ಘೋಷಿಸಿದರು.
ಪಲಿಮಾರು, ಕೃಷ್ಣಾಪುರ, ಸೋದೆ, ಪುತ್ತಿಗೆ, ಕಾಣಿಯೂರು ಹಾಗೂ ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಅಂತಿಮ ವಿಧಾನಗಳು ನಡೆದವು. ಪೇಜಾವರ ಮಠದ ಗರ್ಭಗುಡಿ ಎದುರು ಶ್ರೀಗಳ ಪಾರ್ಥಿವ ಶರೀರವನ್ನು ಇರಿಸಿ ಪಕ್ಕದಲ್ಲಿ ಪಟ್ಟದ ದೇವರ ಪೆಟ್ಟಿಗೆಯನ್ನು ಇಡಲಾಯಿತು. ಕಿರಿಯ ಶ್ರೀಗಳು ದೇವರಿಗೆ, ಅನಂತರ ಹಿರಿಯ ಶ್ರೀಗಳಿಗೆ ಮಂಗಳಾರತಿ ಬೆಳಗಿದರು. ದೇವರಿಗೆ ಸಮರ್ಪಿಸಿದ ತುಳಸೀ ದಳದ ಮಾಲೆಯನ್ನು ಹಾಕಿದರು. ವಿರಜಾಮಂತ್ರ (ಸನ್ಯಾಸ ತೆಗೆದುಕೊಳ್ಳುವ ವಿಶೇಷ ಮಂತ್ರ), ಪವಮಾನ ಸೂಕ್ತ ಮೊದಲಾದ ವೇದೋಕ್ತ ಮಂತ್ರಗಳನ್ನು ವೈದಿಕರು ಪಠಿಸಿದರು. ವಿವಿಧ ಮಠಾಧೀಶರೂ ಪಾರಾಯಣ ನಡೆಸಿದರು. ಮಠದ ಹೊರಭಾಗದಲ್ಲಿ ನವಗ್ರಹ ದಾನಗಳನ್ನು ನೀಡಲಾಯಿತು.
ಮಧ್ವಸರೋವರದಲ್ಲಿ ಕೊನೆಯ ಸ್ನಾನ
ದೇವರ ಸ್ಮರಣೆಯೊಂದಿಗೆ ಶ್ರೀಗಳ ಶರೀರವನ್ನು ಶಿಖೀ(ಬುಟ್ಟಿ)ಯಲ್ಲಿ ಇರಿಸಿ ಪೇಜಾವರ ಮಠದ ಮುಖ್ಯ ದ್ವಾರದ ಮೂಲಕ ರಥಬೀದಿಯಲ್ಲಿ ಶ್ರೀಕೃಷ್ಣ ಮಠದ ಮುಖ್ಯ ದ್ವಾರಕ್ಕೆ ತರಲಾಯಿತು. 10.32ಕ್ಕೆ ಮಧ್ವಸರೋವರಕ್ಕೆ ತರಲಾಯಿತು. ವೇದ ಮಂತ್ರ ಹಾಗೂ ಗೋವಿಂದ ನಾಮ ಸ್ಮರಣೆಯೊಂದಿಗೆ ಶ್ರೀಪಾದರ ಶರೀರವನ್ನು ಮೂರು ಬಾರಿ ಸರೋವರದಲ್ಲಿ ಮುಳುಗಿಸಲಾಯಿತು. ಅನಂತರ ಶ್ರೀಕೃಷ್ಣ ಮಠದ ತೀರ್ಥಮಂಟಪದಲ್ಲಿ ಶ್ರೀಪಾದರನ್ನು ಕುಳ್ಳಿರಿಸಿ ತುಳಸಿ ಮಾಲೆ ಹಾಕಲಾಯಿತು. ಬಳಿಕ ಪಲಿಮಾರು ಶ್ರೀಪಾದರು ಅಗಲಿದ ಶ್ರೀಗಳ ಕೈಯಿಂದ ಶ್ರೀ ಕೃಷ್ಣನಿಗೆ ಆರತಿಯನ್ನು ಮಾಡಿಸಿದರು. ಸುಮಾರು 15 ನಿಮಿಷಗಳ ಕಾಲ ವೇದ ಮಂತ್ರ ಘೋಷ ನಡೆಯಿತು. ವಾದ್ಯ, ಶಂಖ, ಜಾಗಟೆ ನಾದದೊಂದಿಗೆ ಶ್ರೀ ಅನಂತೇಶ್ವರ, ಶ್ರೀ ಚಂದ್ರಮೌಳೀಶ್ವರ ದೇವಸ್ಥಾನ ಸಹಿತ ರಥಬೀದಿಗೆ ಒಂದು ಸುತ್ತು ಹಾಕಲಾಯಿತು. ಅನಂತರ ಪಾರ್ಥಿವ ಶರೀರವನ್ನು ಅಜ್ಜರಕಾಡು ಮೈದಾನಕ್ಕೆ ಕಳುಹಿಸಲಾಯಿತು.
ನಿರಂತರ ನಗಾರಿ ವಾದನ
ಸಂತಾಪ ಸೂಚಕವಾಗಿ ಬೆಡಿ ಸಿಡಿಸಲಾಯಿತು ಹಾಗೂ ಶ್ರೀ ಅನಂತೇಶ್ವರ ದೇವಸ್ಥಾನದ ಹೆಬ್ಟಾಗಿಲಿನ ಮೇಲ್ಭಾಗದಲ್ಲಿ ನಿರಂತರವಾಗಿ ನಗಾರಿ ಬಾರಿಸಲಾಯಿತು. ಹಿಂದಿನ ಕಾಲದಲ್ಲಿ ಶ್ರೀಗಳು ನಿರ್ಯಾಣ ಹೊಂದಿದರೆ ಸಾರ್ವಜನಿಕರಿಗೆ ಕೊಡುವ ಸೂಚನೆ ಇದಾಗಿತ್ತು. ರವಿವಾರ ಬೆಳಗ್ಗಿನಿಂದಲೇ ಮಠದ ಪರಿಸರದಲ್ಲಿ ನಿರಂತರ ನಗಾರಿ ಶಬ್ದ ಕೇಳಿಸುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ
Encounter: ಜಮ್ಮು – ಕಾಶ್ಮೀರದಲ್ಲಿ ಎನ್ಕೌಂಟರ್… ಮೂವರು ಭಯೋತ್ಪಾದಕರು ಹತ
Manjeshwara: ಆ್ಯಂಬುಲೆನ್ಸ್- ಕಾರು ಭೀಕರ ಅಪಘಾತ; ಮೂವರು ಮೃತ್ಯು, ನಾಲ್ವರಿಗೆ ಗಾಯ
Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ
Rachana inder: ಮರ್ಡರ್ ಮಿಸ್ಟರಿ 4 ಎನ್ 6